Wednesday, March 5, 2014

ಇನ್ನಷ್ಟು ಸರಸ್ವತಿಯರನ್ನು ಸೃಷ್ಟಿಸದಿರೋಣ...

ರಾಮ್ ತೇರಿ ಗಂಗಾ ಮೈಲಿ
ಭಾರತ ನದಿಗಳ ನೆಲ. ಗಂಗಾ, ಯಮುನಾ, ಸಿಂಧು, ಕಾವೇರಿಯ ಜೊತೆ ಜೊತೆಗೆ ನಾವು ಸರಸ್ವತಿಯ ಹೆಸರನ್ನೂ ಹೇಳುತ್ತೇವೆ. ಆದರೆ ಆ ನದಿ ಮಾತ್ರ ಇಂದು ನಮ್ಮ ನಡುವೆ ಇಲ್ಲ. ಋಗ್ವೇದ ಕಾಲದಲ್ಲಿ ಹರಿಯುತ್ತಿದ್ದಳೆನ್ನಲಾದ ಸರಸ್ವತಿ, ಈಗ ಗುಪ್ತಗಾಮಿನಿಯಾಗಿ ಈ ನೆಲದಲ್ಲಿ ಹರಿಯುತ್ತಿದ್ದಾಳೆ ಎನ್ನುವುದು ಭಾರತೀಯರ ನಂಬಿಕೆ. ಬರೇ ನಂಬಿಕೆ ಎನ್ನುವಂತಿಲ್ಲ. ರಾಜಸ್ತಾನ ಭಾಗದಲ್ಲಿ ಸರಸ್ವತಿ ನದಿ ಹರಿಯುತ್ತಿದ್ದ  ಕುರಿತಂತೆ ಹಲವು ಸಂಶೋಧಕರು ಸಾಕ್ಷಗಳನ್ನು ನೀಡುತ್ತಾರೆ. ಇಂದೂ ಆಕೆ ನೆಲದ ಗರ್ಭದೊಳಗೆ ಹರಿಯುತ್ತಲೇ ಇದ್ದಾಳೆ ಎಂದು ನಂಬುವವರೂ ಇದ್ದಾರೆ.ಹಾಗೆ ಅಜ್ಞಾತವಾಗಿ ಗುಪ್ತವಾಗಿ ಹರಿಯುವಂತಹ ಸ್ಥಿತಿಯನ್ನು ಆಕೆಗೆ ನಿರ್ಮಿಸಿದವರು ಯಾರು ಎನ್ನುವುದು ಮಾತ್ರ ನಿಗೂಢ ವಾಗಿದೆ. ಸರಸ್ವತಿ ಗುಪ್ತವಾಗಿ ಹರಿಯುತ್ತಿದ್ದಾಳೆಯೋ ಇಲ್ಲವೋ ಅನಂತರದ ಮಾತು. ಆದರೆ, ಅಂತಹದೊಂದು ನದಿ ಇಂದು ರಾಜಸ್ತಾನ ಭಾಗದಲ್ಲಿ ಹರಿಯುತ್ತಿದ್ದರೆ ಆ ಭಾಗ ಹಚ್ಚ ಹಸಿರಾಗಿರುತ್ತಿತ್ತು ಎನ್ನುವುದನ್ನು ನಾವು ನಿರಾಕರಿಸುವಂತಿಲ್ಲ.

ಗಂಗಾ ನದಿಯನ್ನು ಹೊರತುಪಡಿಸಿದ ಭಾರತವನ್ನು ಕಲ್ಪಿಸಲು ಸಾಧ್ಯವಿಲ್ಲ. ಆದರೆ ಇಡೀ ದೇಶದ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ವಲಯಗಳು ಕೆಟ್ಟು ಕೆರ ಹಿಡಿಯುತ್ತಿರುವುದಕ್ಕೆ ರೂಪಕವಾಗಿ ಇಂದು ಗಂಗಾ ನದಿ ಹರಿಯುತ್ತಿದೆ. ನಮ್ಮ ಪುಣ್ಯ ಕ್ಷೇತ್ರಗಳ ತಡಿಯಲ್ಲಿ ಹರಿಯುವ ಆಕೆಯ ಸ್ಥಿತಿಯನ್ನೊಮ್ಮೆ ಕಣ್ಣು ಮತ್ತು ಹದಯವನ್ನು ತೆರೆದು ನೋಡಬೇಕಾಗಿದೆ. ಒಂದೆಡೆ ಧರ್ಮದ ತ್ಯಾಜ್ಯಗಳು, ಇನ್ನೊಂದೆಡೆ ಅಭಿವದ್ಧಿಯ ತ್ಯಾಜ್ಯಗಳು. ಒಂದು ನದಿಯನ್ನು ತ್ಯಾಜ್ಯ ಹರಿಯ ಬಿಡುವ ಚರಂಡಿಯನ್ನಾಗಿ ಪರಿವರ್ತಿಸಿದ ಮನುಷ್ಯನ ಕ್ರೌರ್ಯಕ್ಕೆ ಎಣೆಯಿಲ್ಲ. ಆಕೆ ತನ್ನ ಅಸ್ತಿತ್ವವನ್ನು ಉಳಿಸಿ ಕೊಳ್ಳಬೇಕಾದರೆ ಸರಸ್ವತಿಯಂತೆ ಗುಪ್ತಗಾಮಿನಿ ಯಾಗಿ ಹರಿಯುವುದಷ್ಟೇ ಉಳಿದಿರುವ ದಾರಿ. ಇದು ಗಂಗೆಯ ಕತೆ ಮಾತ್ರವಲ್ಲ. ಈ ದೇಶದ ಎಲ್ಲ ನದಿಗಳ ಮೇಲೂ ಹಣವಂತರ ಕಣ್ಣು ಬಿದ್ದಿದೆ. ಹರಿಯುತ್ತಿರುವುದು ನದಿಗಳಲ್ಲ, ಹಣ ಎನ್ನುವುದನ್ನು ಕಂಡುಕೊಂಡಿರುವ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಜನಗಳು ನದಿಗಳ ಹರಾಜಿಗೆ ಇಳಿದಿದ್ದಾರೆ. ಇದೇನೂ ಅತಿಶಯೋಕ್ತಿಯಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ನೀರಾ ನದಿ ಮತ್ತು ಅದರ ಡ್ಯಾಂನ್ನು ಸಂಪೂರ್ಣವಾಗಿ ಹರಾಜುಹಾಕಲು ಮುಂದಾಗಿರುವುದು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಬರೇ ಒಂದು ಸಾವಿರ ಕೋಟಿ ರೂಪಾಯಿಗೆ ಸರಕಾರ ಈ ಹರಾಜಿಗೆ ಮುಂದಾಗಿತ್ತು. ಮತ್ತು ಒಂದು ನದಿ ಮತ್ತು ಆ ನೀರಿನ ಹಕ್ಕನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿತ್ತು. ಇಂತಹ ಸ್ವಾರ್ಥ ಮನುಷ್ಯರಿಂದ ಪಾರಾಗುವುದಕ್ಕೆ ನದಿಗಳಿಗೆ ಒಂದೇ ದಾರಿ. ಭೂಮಿಯ ಹೊರಗೆ ಹರಿಯುವ ಬದಲು, ಮನುಷ್ಯರ ಕಣ್ಣಿಗೆ ಬೀಳದಂತೆ ಗುಪ್ತಗಾಮಿನಿಯಾಗಿ ಹರಿಯುವುದು. ಇತ್ತೀಚೆಗೆ ಕರಾವಳಿಯಲ್ಲಿ ಎತ್ತಿನ ಹೊಳೆ ಭಾರೀ ಸುದ್ದಿಯನ್ನು ಸಷ್ಟಿಸುತ್ತಿದೆ. ರಾಜಕಾರಣಿಗಳು ತೀರಾ ಲಘುವಾಗಿ ಮಾತನಾಡುತ್ತಿದ್ದರೆ, ಕರಾವಳಿಯ ಜನರು ಮಾತ್ರ ಭುಗಿಲೆದ್ದಿದ್ದಾರೆ. ಕರಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಭಾಗದಲ್ಲಿ ಸ್ವಯಂಪ್ರೇರಿತ ಬಂದ್ ನಡೆಯಿತು. ಎಲ್ಲ ಪಕ್ಷ, ಧರ್ಮಗಳ ಜನರು ಒಂದಾಗಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿದರು. ರಾಜಕಾರಣಿ ಗಳಿಗೋ ಈ ಯೋಜನೆಯಲ್ಲಿ ಹರಿಯುವ ಹಣದ ಕಡೆಗೆ ಕಣ್ಣು. ಆದರೆ ಆ ಮೂಲಕ ಹರಿಯುತ್ತಿರುವ ಒಂದು ನದಿಯನ್ನೇ ನಾವು ಕೊಲ್ಲುವುದಕ್ಕೆ ಹೊರಟಿದ್ದೇವೆ ಎನ್ನುವ ಅರಿವು ಇವರಿಗೆ ಇದ್ದಂತಿಲ್ಲ. ಅಥವಾ ಅದು ಅವರಿಗೆ ಗಂಭೀರ ವಿಷಯವಾಗಿಲ್ಲ.
 
ಒಂದು ನದಿಯನ್ನು ಸಾಯಿಸುವುದು ನಮ್ಮಿಂದ ಸಾಧ್ಯವೆ? ಎಂಬ ಪ್ರಶ್ನೆಗೆ ಉತ್ತರವಾಗಿ ನಮ್ಮ ಮುಂದೆ ಚೀನಾ ಇದೆ. ನದಿಯನ್ನು ಅಪ್ಪಟ ಭೌತಿಕ ಕಣ್ಣಲ್ಲಿ ನೋಡಿದ ಪರಿಣಾಮ ಇಲ್ಲಿ ಕಣ್ಮರೆಯಾಗಿ ರುವ ನದಿಗಳ ಸಂಖ್ಯೆ ಎಷ್ಟು ಗೊತ್ತೆ? ಸುಮಾರು 28 ಸಾವಿರ ನದಿಗಳು! ಸಣ್ಣ ಪುಟ್ಟ ನದಿಗಳೂ ಸೇರಿದಂತೆ ಸಹಸ್ರಾರು ನದಿಗಳು ಇಲ್ಲಿ ಕಣ್ಮರೆಯಾಗಿವೆ. ಮಾತ್ರವಲ್ಲ, ನದಿಗಳನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿರುವುದರ ಪರಿಣಾಮವಾಗಿ ಹಲವು ಕಿರುನದಿಗಳು ಅವಸಾನದ ಅಂಚಿನಲ್ಲಿವೆ. ನದಿಯೆಂದರೆ ಬರೇ ನೀರಲ್ಲ. ಲಕ್ಷಾಂತರ ಜಲಚರಗಳನ್ನು ಪೊರೆವ ತಾಯಿ ನದಿ. ಹಾಗೆಯೇ ಇಕ್ಕೆಡೆಗಳನ್ನು ಹಸಿರಾಗಿಸುತ್ತಾ, ಆ ಮೂಲಕ ಪ್ರಾಣಿ ಪಕ್ಷಿಗಳಿಗೆ ನೆಲೆಯನ್ನು ಒದಗಿಸಿಕೊಡುತ್ತಾ ಹೋಗುತ್ತದೆ. ಒಂದು ನದಿಯನ್ನು ಕೊಲ್ಲುವು ದೆಂದರೆ, ಪಕ್ಷಿ ಸಂಕುಲವನ್ನು, ಕಾಡುಗಳನ್ನು, ಕೀಟಗಳನ್ನು ಕೊಲ್ಲುವುದೆಂದು ಅರ್ಥ. ಅಷ್ಟೇ ಅಲ್ಲ, ಹರಿಯುವ ನದಿ ಕಟ್ಟ ಕಡೆಗೆ ಸಮುದ್ರ ಸೇರುವುದೆಂದರೆ ವ್ಯರ್ಥ ಅಲ್ಲವೇ ಅಲ್ಲ. ಸಮುದ್ರ ಸೇರುವ ಮೂಲಕ ಒಂದು ನದಿ ಮುಗಿದು ಹೋಗುವುದಿಲ್ಲ. ಸಮುದ್ರದ ಚೈತನ್ಯಕ್ಕೆ ನದಿಗಳ ಪಾತ್ರವೂ ಇದೆ. ಹಾಗೆಯೇ ಮಳೆ, ಬೆಳೆ ಇತ್ಯಾದಿಗಳ ಜೊತೆಗೂ ಅದು ಸಂಬಂಧವನ್ನು ಹೊಂದಿದೆ. ಜೀವ ಸರಪಣಿಯನ್ನು ಚಿಂದಿಯಾಗಿ ಸುವ ಮನುಷ್ಯ ತಾನೊಬ್ಬನೇ ಈ ಜಗದಲ್ಲಿ ಬದುಕುತ್ತೇನೆ ಎಂದು ಹೊರಟರೆ ಅದರ ಅನಾಹುತವನ್ನು ಅನುಭವಿಸಲೇ ಬೇಕಾಗುತ್ತದೆ. ನಾವು ನದಿಯನ್ನು ಮುಟ್ಟುವುದಿಲ್ಲ. ಬರೇ ನೀರನ್ನಷ್ಟೇ ಪೈಪ್ ಮೂಲಕ ಸಾಗಿಸುತ್ತೇವೆ ಎನ್ನುವ ಮೂರ್ಖ ರಾಜಕಾರಣಿಗಳೂ ಇದ್ದಾರೆ.ಒಂದು ನದಿಗೂ ಡ್ರೈನೇಜಿಗೂ ವ್ಯತ್ಯಾಸ ಇದೆ. ನದಿಯೆಂದರೆ ಬರೀ ಹರಿಯುವ ನೀರಲ್ಲ. ಅದೊಂದು ಚೈತನ್ಯ. ಜೀವವಿಕಾಸದಲ್ಲಿ ನದಿಗಳಿಗೂ ಪಾತ್ರವಿತ್ತು. ಮತ್ತು ಇದೆ. ಗಣಿಗಾರಿಕೆ ಸೇರಿದಂತೆ ಅಭಿವದ್ಧಿಯ ಮೋಹಕ್ಕೆ ಸಿಲುಕಿ ನದಿ ಪಾತ್ರಗಳನ್ನೇ ಒಡೆದು ಹಾಕಿದ ಪರಿಣಾಮವನ್ನು ನಾವು ಇತ್ತೀಚೆಗೆ ಉತ್ತರಾಖಂಡದಲ್ಲಿ ನೋಡಿದ್ದೇವೆ. ಇದೀಗ ಇಂತಹ ನೂರಾರು ಉತ್ತರಾಖಂಡಗಳನ್ನು ಸಷ್ಟಿಸುವುದಕ್ಕೆ ಹೊರಟಿದ್ದೇವೆ. ಬಹತ್ ಅಣೆಕಟ್ಟುಗಳು ಮತ್ತು ನದಿಜೋಡಣೆಗಳಿಂದ ಆಗುವ ಅನಾಹುತಗಳ ಕುರಿತಂತೆ ಈಗಾಗಲೇ ವಿಶ್ವದ ಬಹತ್ ರಾಷ್ಟ್ರಗಳು ಅರಿತುಕೊಂಡಿವೆ. ಮಾತ್ರವಲ್ಲ, ಅಣೆಕಟ್ಟುಗಳ ಪ್ರಮಾಣವನ್ನು ಅದು ಇಳಿಸುತ್ತಿವೆ. ಆದರೆ ಭಾರತ ಮಾತ್ರ, ಈ ಯೋಜನೆಗಳ ಕುರಿತಂತೆ ಇತ್ತೀಚೆಗೆ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದೆ. ಭಾರತದಲ್ಲಿ ನದಿ ಜೋಡಣೆ ಯೋಜನೆ ಇಂದು ನಿನ್ನೆಯ ಕಲ್ಪನೆಯಲ್ಲ. 19ನೆ ಶತಮಾ ದಲ್ಲೇ ಈ ಯೋಜನೆಗೆ ನಕ್ಷೆ ರೂಪಿಸಿದವರು ಸರ್ ಆರ್ಥರ್ ಕಾಟನ್. ಬಳಿಕ ಕಳೆದ 70ರ ದಶಕದಲ್ಲಿ ಗಂಗಾ-ಕಾವೇರಿಯನ್ನು ಜೋಡಿಸುವ ಕುರಿತಂತೆ ಪ್ರಸ್ತಾಪ ಕೇಳಿ ಬಂತು. ಆದರೆ ಕೊನೆಗೂ ಈ ದುಸ್ಸಾಹಸಕ್ಕೆ ಇಳಿಯದೇ ಪ್ರಸ್ತಾಪವನ್ನು ಅರ್ಧದಲ್ಲೇ ಕೈ ಬಿಡಲಾಯಿತು. ದೇಶದ ಮಧ್ಯ ಮತ್ತು ದಕ್ಷಿಣ ಭಾಗವನ್ನು ಸಂಪರ್ಕಿಸುವ 9,300 ಕಿ. ಮೀ. ಉದ್ದದ ಗಾರ್ಲಾಂಡ್ ಕಾಲುವೆ, ಗಂಗಾ-ಕಾವೇರಿ ಜೋಡಣೆ. ಇವುಗಳಿಗೆ ಆಗ ಕ್ಯಾಪ್ಟನ್ ದಸ್ತೂರ್ ಅವರು 24, 095 ಕೋಟಿ ರೂ. ಬೇಕು ಎಂದು ಅಂದಾಜಿಸಿದ್ದರು. ಮತ್ತು ತಜ್ಞರು ಇದನ್ನು ಕಾರ್ಯಸಾಧುವಲ್ಲ ಎಂದು ಕೈ ಬಿಟ್ಟಿದ್ದರು. ಬರೇ ಆರ್ಥಿಕ ಕಾರಣಗಳಿಗಾಗಿ ಯಲ್ಲ, ಭೌಗೋಳಿಕ ಕಾರಣಗಳಿಗಾಗಿಯೂ ಈ ಯೋಜನೆಯನ್ನು ಕೈ ಬಿಡಲಾಗಿತ್ತು.
  
 ನದಿ ಜೋಡಣೆಯ ಯೋಜನೆಗೆ ಮತ್ತೆ ರೆಕ್ಕೆ ಬಂದಿದ್ದು ಎನ್‌ಡಿಎ ಸರಕಾರದ ಅವಧಿಯಲ್ಲಿ. ಇಂದಿಗೂ ಈ ನದಿ ಜೋಡಣೆ ಯೋಜನೆ ಅಟಲ್ ಬಿಹಾರಿ ವಾಜಪೇಯಿಯವರ ಮಹತ್ವಾಕಾಂಕ್ಷಿ ಕನಸು ಎಂದೇ ಬಿಜೆಪಿ ಹೇಳಿಕೊಳ್ಳುತ್ತಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನರ್ಮದಾ-ಕ್ಷಿಪ್ರಾ ನದಿ ಜೋಡಣೆಗೆ ಎಲ್.ಕೆ. ಅಡ್ವಾಣಿ ಶಂಕು ಸ್ಥಾಪನೆಗೈದರು. ಅಟಲ್ ಬಿಹಾರಿ ವಾಜಪೇಯಿಯ ಕನಸು ಮೊತ್ತ ಮೊದಲು ಸಾಕ್ಷಾತ್ಕಾರವಾದುದೇ ಮಧ್ಯಪ್ರದೇಶ ದಲ್ಲಿ. ಆದರೆ ಇಂದಿಗೂ ಈ ಬಹತ್ ಯೋಜನೆ ವಾಜಪೇಯಿಯವರ ಪಾಳು ಬಿದ್ದ ಕನಸಾಗಿಯೇ ಉಳಿದಿದೆ. ಗಂಭೀರವಾಗಿ ಅನುಷ್ಠಾನಕ್ಕೆ ತರಲು ಇದು ಯೋಗ್ಯವಲ್ಲ. ಸುಮಾರು ಐದು ಲಕ್ಷ ಕೋಟಿ ರೂ. ವೌಲ್ಯದ ಯೋಜನೆ ಇದು. ಆದರೆ ಈ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದರ ಬಗ್ಗೆ ತಜ್ಞರಿಗೆ ಅನುಮಾನ ಈಗಲೂ ಇದ್ದೇ ಇದೆ. ಹಾಗೆಂದು ಜನರಿಗೆ ಕುಡಿಯುವ ನೀರನ್ನು ಒದಗಿಸುವುದು ಬೇಡವೇ ಎಂದು ರಾಜಕಾರಣಿಗಳು ಕೇಳುತ್ತಾರೆ. ಈ ದೇಶದಲ್ಲಿರುವ ಲಕ್ಷಾಂತರ ಕೆರೆ, ಕಾಲುವೆಗಳನ್ನು ಬತ್ತಿಸಿ, ನೀರಿನ ಸಾಧ್ಯತೆಗಳಿರುವ ತೊರೆಗಳನ್ನೆಲ್ಲ ನಾಶ ಮಾಡಿದ ಬಳಿಕ, ನದಿಗಳ ಸೆರಗಿಗೆ ಕೈ ಹಾಕಿ, ನೀರು ಒದಗಿಸುತ್ತೇವೆ ಎಂದು ಹೇಳುವುದು ಸರಿಯಾದ ಮಾರ್ಗವಲ್ಲ. ಈ ನೆಲ ಬಂಜೆಯಲ್ಲ. ಇಲ್ಲಿ ಒಸರು ಇದ್ದೇ ಇದೆ. ರಾಜಸ್ತಾನದಲ್ಲಿ ಮಳೆ ನೀರು ಇಂಗಿಸುವ ಮೂಲಕ ಇಡೀ ಪ್ರದೇಶವನ್ನು ಹಸಿರಾಗಿಸಿದ ಹೆಮ್ಮೆ ಪರಿಸರ ಹೋರಾಟಗಾರ ರಾಜೇಂದ್ರ ಸಿಂಗರಿಗೆ ಸೇರಬೇಕು. ರಾಜಸ್ತಾನದ ಆಳ್ವಾರ್ ಒಂದು ಕಾಲದಲ್ಲಿ ನೀರಿಲ್ಲದ ಕಪ್ಪು ಪ್ರದೇಶ ಎಂದು ಘೋಷಿಸಲ್ಪಟ್ಟಿತ್ತು. ಅಂತಹ ಪ್ರದೇಶದಲ್ಲಿ ಮಳೆನೀರು ಇಂಗುಗುಂಡಿಗಳನ್ನು ಸಷ್ಟಿಸಿ ಇಡೀ ಪ್ರದೇಶವನ್ನೇ ಹಸಿರಾಗಿಸಿದ ಸಿಂಗ್‌ನಂತಹ ಪರಿಸರ ತಜ್ಞರು ರಾಜಕಾರಣಿಗಳಿಗೆ ಮಾರ್ಗ ದರ್ಶಕರಾಗಬೇಕು. ಅಂತಹ ತಜ್ಞರನ್ನು ಒಟ್ಟು ಮಾಡಿ, ಅವರೊಂದಿಗೆ ಚರ್ಚೆ ನಡೆಸಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕೇ ಹೊರತು, ಕಾರ್ಪೊರೇಟ್ ಲಾಬಿಗಳ ಜೊತೆಗಲ್ಲ.
ನಮ್ಮ ದೇಶದ ಅಸ್ಮಿತೆ ನಮ್ಮ ನದಿಗಳು. ಅವುಗಳು ಕಣ್ಮರೆಯಾದರೆ ನಮ್ಮ ದೇಶವೇ ಕಣ್ಮರೆಯಾದಂತೆ. ಸರಸ್ವತಿಯಂತಹ ಇನ್ನಷ್ಟು ಸರಸ್ವತಿಯರನ್ನು ನಾವು ಸೃಷ್ಟಿಸುವುದು ಬೇಡ. ನದಿಯನ್ನು ಕೊಂದ ದ್ರೋಹ, ಮನುಕುಲವನ್ನು ಬಲಿತೆಗೆದುಕೊಳ್ಳದೇ ಮುಗಿದು ಹೋಗದು. ಈ ಎಚ್ಚರಿಕೆ ದಿಲ್ಲಿಯಲ್ಲಿರುವ ರಾಜಕಾರಣಿಗಳಿಗೆ ಬೇಕು. ಹಾಗೆಯೇ ನೇತ್ರಾವತಿ ನದಿ ತಿರುವು ಯೋಜನೆಗೆ ಅತ್ಯುತ್ಸಾಹದಲ್ಲಿ ಇಳಿದಿರುವ ವೀರಪ್ಪ ಮೊಯ್ಲಿಯೂ ಈ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಬೇಕು. ಈ ಯೋಜನೆಗಾಗಿ ರಾಜಕೀಯ ಸಮಾಧಿಯಾದರೂ ಪರವಾಗಿಲ್ಲ ಎಂದಿದ್ದಾರೆ ಮೊಯ್ಲಿ. ಆದರೆ ಸಮಾಧಿ ಯಾಗುವುದು ರಾಜಕೀಯವಲ್ಲ, ಈ ನಾಡು ಎನ್ನುವ ಪ್ರಜ್ಞೆಯನ್ನು ಇಟ್ಟುಕೊಂಡು ಅವರು ಮುನ್ನಡಿಯಿಡಬೇಕು.

1 comment:

  1. ಚೆನ್ನಾಗಿದೆ ಕಣ್ರೀ.ಮನಸ್ಸಿಗೆ ಮುಟ್ತು. ನಮ್ಮ ದೇಶದ ರಾಜಕಾರಣಿಗಳಿಗೆ ಇಚ್ಛಾಶಕ್ತಿಯಿಲ್ಲ ಎನ್ನುವುದು ಸರಿಯೇ. ಈ ಸಮಸ್ಯೆಗಳಿಗೆ ಪರಿಹಾರವಿದೆ ಎನ್ನುವುದೂ ಸತ್ಯ. ಈ ಪರಿಹಾರದ ದಿಕ್ಕುಗಳನ್ನು ನಾವು ಹುಡುಕುತ್ತಿಲ್ಲ. ವಾಸ್ತವವಾಗಿ ಭಾರತಕ್ಕೆ ನೀರೊಂದು ಸಮಸ್ಯೆಯೇ ಅಲ್ಲ.

    ReplyDelete