Friday, March 28, 2014

ಚಿನ್ನದ ಅಂಗಡಿ ಮತ್ತು ಇತರ ಕತೆಗಳು

ಆಕೆ
‘‘ಆ ಬೀದಿಯ ಕೊನೆಯಲ್ಲಿರುವ ಕವಿ ಸತ್ತು ಹೋದ’’
ಆ ಮಾತನ್ನು ಕೇಳಿ, ಆ ಬೀದಿಯ ಕೊನೆಯಲ್ಲಿರುವ ಸರಕಾರಿ ಬಾವಿಗೆ ನೀರಿಗೆಂದು ಹೊರಟ ಆಕೆ ಅರ್ಧ ದಾರಿಯಲ್ಲೇ ಮರಳಿ ಬಂದಳು.

ಊಟ
ರಾಜಕಾರಣಿ ಘೋಷಿಸಿದ ‘‘ಎರಡು ಲಕ್ಷ ಕೊಟ್ಟರೆ ನನ್ನ ಜೊತೆ ಊಟ ಮಾಡಬಹುದು’’
ಬಡವ ಗೊಣಗಿದ ‘‘ಒಂದು ಕೆ.ಜಿ. ಅಕ್ಕಿ ಕೊಟ್ಟರೆ ನಾನು ನನ್ನ ಹೆಂಡತಿ ಮಕ್ಕಳ ಜೊತೆ ಊಟ ಮಾಡಬಹುದು’’

ಹೊಟೇಲು
ಹೊಟೇಲೊಂದರಲ್ಲಿ ದಲಿತನೂ, ಬ್ರಾಹ್ಮಣನೂ, ಮ್ಲೇಚ್ಛನೂ ಒಂದೇ ಟೇಬಲಲ್ಲಿ ಅಕ್ಕಪಕ್ಕ ಕೂತು, ಒಂದೇ ಮಡಕೆಯಲ್ಲಿ ಬೆಂದ ಅನ್ನವನ್ನು ಉಣ್ಣು ತ್ತಿದ್ದರು. ಈ ಕಾರಣಕ್ಕೇ ಇರಬೇಕು, ಇತ್ತೀಚೆಗೆ ಮಠ, ದೇವಸ್ಥಾನಗಳನ್ನು ಬಿಟ್ಟು ದೇವರು ಹೊಟೇಲುಗಳಲ್ಲಿ ಕಾಲ ಕಳೆಯುತ್ತಿರುವುದು.

ಚಿನ್ನದ ಅಂಗಡಿ
ಅವಳು ಚಿನ್ನದ ಅಂಗಡಿಯಲ್ಲಿ ಕೆಲಸಕ್ಕಿದ್ದಳು.
ಅವಳ ಕನಸುಗಳು ಕಪಾಟಿನಲ್ಲಿ ಮಾರಾಟಕ್ಕೆಂದು ತೂಗುತ್ತಿದ್ದವು.

ಬಚಾವು
ಒಬ್ಬ ಕೊಲೆಗಾರನಿಗೆ ಸಂತನನ್ನು ಕೊಲ್ಲಲು ಸುಪಾರಿ ನೀಡಲಾಯಿತು.
ಕೊಲೆಗಾರ ಆಶ್ರಮಕ್ಕೆ ಹೋಗಿ ನೋಡಿದರೆ ಸಂತ ಇವನಿಗಾಗಿಯೇ ಕಾಯುತ್ತಿದ್ದ.
‘‘ನಿನಗಾಗಿಯೇ ಕಾಯುತ್ತಿದ್ದೆ. ಸದ್ದು ಮಾಡಬೇಡ...ಶಿಷ್ಯರು ಎಚ್ಚರಗೊಂಡಾರು. ಬೇಗ ನಿನ್ನ ಕೆಲಸ ಮುಗಿಸಿ ಬಿಡು’’
ಕೊಲೆಗಾರ ಹೆದರಿ ಓಡತೊಡಗಿದ.
ಸಂತ ಅವನ ಹಿಂದೆಯೇ ಓಡುತ್ತಾ ಹೇಳಿದ ‘‘ಅರೆ! ನಿಲ್ಲು. ಯಾಕೆ ಹೆದರುತ್ತೀಯ? ಮರಳಿ ಬಾ...’’
ಕೊಲೆಗಾರ ಕೊನೆಗೂ ತಪ್ಪಿಸಿಕೊಂಡು ‘‘ಅಬ್ಬ ಬಚಾವಾದೆ...’’ ಎಂದ.
ಇತ್ತ ಕೊಲೆಗಾರ ಕಾಣದಾದದ್ದನ್ನು ನೋಡಿ ಸಂತನೂ ನಿಟ್ಟುಸಿರು ಬಿಟ್ಟ ‘‘ಅಬ್ಬ ಬಚಾವಾದೆ’’

ಕಲಿಕೆ
ಚಹಾ ಮಾಡುವುದರ ಕುರಿತಂತೆ ಸ್ನಾತಕೋತ್ತರ ಪದವಿ ಪಡೆದು, ಅಂಕ ಪಟ್ಟಿಯೊಂದಿಗೆ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿದ.
ಚಹಾ ಮಾಡುವುದನ್ನು ಹೊಟೇಲ್‌ನ ಅಡುಗೆಯವನ ಬಳಿ ಕಲಿತ.

No comments:

Post a Comment