Wednesday, August 21, 2013

ದಿನಕ್ಕೊಂದು ಪುಸ್ತಕ: ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ

ನಿನ್ನ ಹಣೆಯ ಮೇಲಿನ ಸೆರಗು ಬಹಳ ಸುಂದರ
ಅದನ್ನೇ ನೀನು ಬಾವುಟವನ್ನಾಗಿಸಿದರೆ ಇನ್ನೂ ಸುಂದರ
        -ಕವಿ ದಿ. ಮಜಾಜ್(1937)


ಸ್ವಾತಂತ್ರ ಹೋರಾಟಕ್ಕೆ ಮುಸ್ಲಿಮರ ಕೊಡುಗೆಯೆಷ್ಟು, ಬ್ರಾಹ್ಮಣರ ಕೊಡುಗೆಯೆಷ್ಟು, ದಲಿತರ ಕೊಡುಗೆಯೆಷ್ಟು ಎಂದು ಪಾಲು ಪಡೆದುಕೊಳ್ಳುವ ಪ್ರಕ್ರಿಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಪರೋಕ್ಷವಾಗಿ, ಈ ದೇಶದಲ್ಲಿ ತಮ್ಮ ತಮ್ಮ ಹಕ್ಕು ಸಾಧಿಸುವ ಭಾಗವಾಗಿ ಈ ವಾದಗಳು ಜೀವ ಪಡೆದಿವೆ. ಮುಸ್ಲಿಮರ ದೇಶಪ್ರೇಮ ಪ್ರಶ್ನಾರ್ಹವಾಗುತ್ತಿರುವ ದಿನಗಳಲ್ಲಿ, ಈ ದೇಶಕ್ಕಾಗಿ ನಮ್ಮ ರಕ್ತವೂ ಬಿದ್ದಿದೆ ಎಂದು ಘೋಷಿಸುವುದು ಅವರಿಗೆ ಅನಿವಾರ್ಯವಾಗಿದೆ. ಆರೆಸ್ಸೆಸ್‌ನಂತಹ ವಿಚ್ಛಿದ್ರಕಾರಿ ಶಕ್ತಿಗಳು ದೇಶಪ್ರೇಮದ ಮಾತನಾಡುವಾಗ, ನೀವು ಈ ದೇಶದ ಸ್ವಾತಂತ್ರಕ್ಕಾಗಿ ಸುರಿಸಿದ ರಕ್ತವೆಷ್ಟು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಟ್ಟಿನಲ್ಲಿ ಸ್ವಾತಂತ್ರ ಹೋರಾಟಕ್ಕೆ ಕಾರಣವಾದುದು ‘ಭಾರತೀಯತೆ’. ಎಲ್ಲ ಧರ್ಮ, ಜಾತಿಗಳು, ವರ್ಗಗಳು ಭಾರತೀಯತೆಯ ಹೆಸರಿನಲ್ಲಿ ಒಂದಾದ ಪರಿಣಾಮವಾಗಿ ಸ್ವಾತಂತ್ರ ಚಳವಳಿ ಹುಟ್ಟಿಕೊಂಡಿತು. ನಾವಿಂದು ಭಾರತೀಯತೆಯನ್ನು ಕಳೆದುಕೊಳ್ಳುತ್ತಿರುವ ಭಾಗವಾಗಿ, ನಮ್ಮ ನಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದೇವೆ.

ಇದೇ ಸಂದರ್ಭದಲ್ಲಿ ಮಹಿಳೆಯರೂ ತಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಮುಸ್ಲಿಮ್ ಮಹಿಳೆಯರು. ಅದಕ್ಕೆ ಪೂರಕವಾಗಿ ‘ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’ ಕೃತಿ ಹೊರ ಬಂದಿದೆ. ನಾವು ಮರೆತ ಅದೆಷ್ಟೋ ಸಂಗತಿಗಳು ಸ್ವಾತಂತ್ರ ಇತಿಹಾಸದ ಧೂಳಿನಲ್ಲಿ ಸೇರಿ ಹೋಗಿವೆ. ಅದರಲ್ಲಿ ಮುಖ್ಯವಾದುದು, ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತೆತ್ತ ಮುಸ್ಲಿಮ್ ಮಹಿಳೆಯರ ಕೊಡುಗೆ. ಮುಸ್ಲಿಮ್ ಮಹಿಳೆಯ ಹಕ್ಕು, ಸ್ವಾತಂತ್ರಗಳ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ. ಒಂದು ಕಾಲದಲ್ಲಿ ಈ ಮಹಿಳೆಯರು ಹೇಗೆ ರಾಜಕೀಯ ಚಳವಳಿಯಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದರು ಎನ್ನುವುದನ್ನು ತೆರೆದಿಟ್ಟರೂ ಸಾಕು, ಅದು ಮುಸ್ಲಿಮ್ ಮಾತ್ರವಲ್ಲ ಎಲ್ಲ ಸಮಾಜದ ಹೆಣ್ಣು ಮಕ್ಕಳಿಗೂ ಮಾದರಿಯಾಗಬಹುದು.

 ‘ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಡಾ. ಆಬಿದಾ ಸಮೀಉದ್ದೀನ್ ಹಿಂದಿಯಲ್ಲಿ ಬರೆದ ಈ ಕೃತಿಯನ್ನು ಕನ್ನಡಕ್ಕಿಳಿಸಿದವರು ಡಾ. ಷಾಕಿರಾ ಖಾನಂ. ಇಂದು ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ವಿಷಯ ವಿವಾದವಾಗುತ್ತಿದೆ. ಆದರೆ ಒಂದಾನೊಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿ ಜೀವಂತ ಸುಟ್ಟು ಹೋದ, ನೇಣು ಗಂಬವೇರಿದ ನೂರಾರು ಮುಸ್ಲಿಮ್ ಹೆಣ್ಣು ಮಕ್ಕಳು ಆಗಿ ಹೋಗಿದ್ದರು ಎಂದಾಗ, ಇಂದಿನ ವಿವಾದ ಆಧುನಿಕ ಸಮಾಜಕ್ಕೆ ಅವಮಾನವೇ ಸರಿ. ಇತಿಹಾಸದ ಪದರುಗಳಲ್ಲಿ ಮುಚ್ಚಿ ಹೋದ ಹತ್ತು ಹಲವು ಮುಸ್ಲಿಮ್ ಕಣ್ಮಣಿಗಳ ಕಥೆ ನಮ್ಮನ್ನು ಬೆಚ್ಚಿ ಬೇಳಿಸುತ್ತದೆ. ಅವರ ಶೌರ್ಯ, ತ್ಯಾಗ ಹೊಸ ದೇಶ ಕಟ್ಟುವುದಕ್ಕೆ ಸ್ಫೂರ್ತಿಯಾಗುತ್ತದೆ. ಆನೆಗಳ ಮೇಲೇರಿ ಬ್ರಿಟಿಷರ ವಿರುದ್ಧ ಕಾದಿದ್ದ ಹಝರತ್ ಮಹಲ್, ಝಾನ್ಸಿ ರಾಣಿಯ ಜೊತೆ ಜೊತೆಗೇ ಹುತಾತ್ಮಳಾದ ಅನಾಮಧೇಯ ಮುಸ್ಲಿಮ್ ಮಹಿಳೆ, 1857ರಲ್ಲಿ ಬ್ರಿಟಿಷರ ಜೊತೆಗೆ ಯುದ್ಧ ಹೂಡಿದ ತಪ್ಪಿಗೆ ಜೀವಂತ ಸುಡಲ್ಪಟ್ಟ ಅಸ್ಗರಿ ಬೇಗಂ, ಗಲ್ಲಿಗೇರಲ್ಪಟ್ಟ ಗುಜರ್ ಮುಸ್ಲಿಮ್ ಸಮುದಾಯದ ಹಬೀಬಾ....ಮುಸ್ಲಿಮ್ ಮಹಿಳೆಯರ ಶೌರ್ಯದ ಕತೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಸುಮಾರು 35ಕ್ಕೂ ಅಧಿಕ ಮುಸ್ಲಿಮ್ ಮಹಿಳಾ ಸ್ವಾತಂತ್ರ ಹೋರಾಟಗಾರರ ವಿವರಗಳು ಈ ಕೃತಿಯಲ್ಲಿದೆ. ಅಂದ ಹಾಗೆ ಈ ಕೃತಿ ಇತಿಹಾಸವನ್ನು ದಾಖಲೆಗಳ ಮೂಲಕ ಮಂಡಿಸುತ್ತದೆ. ಲೇಖಕಿ, ತನ್ನ ಬರಹಗಳಿಗೆ ಪತ್ರಗಳನ್ನು, ಬರಹಗಳನ್ನು ಆಧಾರವಾಗಿ ನೀಡುತ್ತಾರೆ. ಆದುದರಿಂದಲೇ ಈ ಕೃತಿ ನಮಗೆ ಮಹತ್ವದ್ದಾಗಿದೆ.
ಇಂದಿನ ಸಂದರ್ಭದಲ್ಲಿ ಇದೊಂದು ಅತ್ಯಪೂರ್ವ ಕೃತಿಯೇ ಸರಿ. ಇದರ ಮುಖಬೆಲೆ 140 ರೂ.

1 comment: