Thursday, August 22, 2013

ದಿನಕ್ಕೊಂದು ಪುಸ್ತಕ: ತಾಜೂಮಾರ ತಾಜಾ ಕವಿತೆಗಳು

ರಂಗಕರ್ಮಿಯಾಗಿರುವ ತಾಜೂಮಾ ಎಂಬ ಮುಸ್ಲಿಮ್ ತರುಣಿ ಕಾವ್ಯಲೋಕಕ್ಕೆ ಕಾಲಿಟ್ಟಿದ್ದಾರೆ. ‘ತಾಜೂಮಾ’ ಎಂಬ ತಲೆಬರಹದೊಂದಿಗೇ ಹೊರ ಬಂದಿರುವ ಈ ಸಂಕಲನವನ್ನು ಲಂಕೇಶ್ ಪ್ರಕಾಶನ ಮುದ್ರಿಸಿದೆ. ‘ಶಬ್ದ ನನ್ನೊಳಗೆ ಹೂವ ಹಾಳೆ...ತೆರೆದಷ್ಟೇ ಕೋಣೆ ಬೆಳಕು’ ಎಂಬಂತಹ ಥಕ್ಕೆನಿಸುವ ಸಾಲುಗಳಿಂದ ಭರವಸೆ ಹುಟ್ಟಿಸುವ ತಾಜೂಮಾ, ಕಾವ್ಯ ಲೋಕಕ್ಕೆ ತಾಜಾತನವನ್ನು ಕೊಟ್ಟಿದ್ದಾರೆ.

ಹಲವು ಕವಿತೆಗಳು ಬಹಿರಂಗ ರಾಜಕೀಯವನ್ನು ತೆರೆದಿಟ್ಟರೆ, ಕೆಲವು ಕವಿತೆಗಳು ಕವಿಯ ಒಳಗಿನ ಸೆಲೆಯಾಗಿ ಹುಟ್ಟಿದಂತವುಗಳು. ‘ಕಬ್ಬಿಣದ ತೊಟ್ಟಿಲು ಕಂದನ ತೊರೆದು ಆಕಾಶಕ್ಕೆ ಹಾರುತ್ತಿದೆ...’ ಎನ್ನುವ ಭಾವಗಳು ಅಲ್ಲಲ್ಲಿ ಅವರ ನಿಜ ಕವಯತ್ರಿಯನ್ನು ತೆರೆದಿಡುತ್ತದೆ. ರಂಗಭೂಮಿಯ ಮಾತುಗಳೇ ಕೆಲವೆಡೆ ಕವಿತೆಗಳಾಗಿ, ವಾಚ್ಯಗಳೆನಿಸಿ ಕಿರಿಕಿರಿಯಾಗುವುದೂ ಇದೆ. ಆದರೆ, ಅಂತಹ ಉದಾಹರಣೆಗಳು ಬೆರಳೆಣಿಕೆಯಷ್ಟು ಮಾತ್ರ. ಹಾಗೆ ನೋಡಿದರೆ, ತಾಜೂಮಾ ಅವರ ಮೊದಲ ಪ್ರಯತ್ನಗಳು ಇವೆಲ್ಲ. ಕವಿತೆಗಳು ಹುಟ್ಟುವ ಏಕಾಂತಗಳನ್ನು ತನ್ನದಾಗಿಸುವ ತಾಜೂಮಾ ತಪಸ್ಸು ಮುಂದುವರಿಯಬೇಕಾಗಿದೆ. ಇನ್ನಷ್ಟು ಉತ್ತಮ ಕವಿತೆಗಳನ್ನು ಈ ಕವಯತ್ರಿಯಿಂದ ನಿರೀಕ್ಷಿಸಬಹುದಾಗಿದೆ.


ಅಂದಹಾಗೆ ಇಡೀ ಸಂಕಲನವನ್ನು ಅತ್ಯಾಕರ್ಷಕವಾಗಿ ರೂಪಿಸಲಾಗಿದೆ. ಪತ್ನಿಯ ಕವಿತೆಗಳಿಗೆ ರಂಗಕರ್ಮಿ, ಕಲಾವಿದ ಇಕ್ಬಾಲ್ ರೇಖಾಚಿತ್ರಗಳ ಮೂಲಕ ಜುಗಲ್‌ಬಂದಿ ನಡೆಸಿದ್ದಾರೆ. ಕೃತಿಯ ಮುಖಬೆಲೆ 75 ರೂ.

No comments:

Post a Comment