Tuesday, August 27, 2013

ತರೀಕೆರೆಯೆಂಬ ಜಂಗಮ ನಡೆದಷ್ಟೂ ನಾಡು

 ವಿದ್ವಾಂಸ, ಲೇಖಕ ರಹಮತ್ ತರೀಕೆರೆ ಕನ್ನಡ ಬರಹ ಲೋಕದ ಸೂಫಿ, ಜಂಗಮ ಎಂದೇ ಖ್ಯಾತಿವೆತ್ತವರು. ಒಂದು ರೀತಿಯಲ್ಲಿ ತಾನಿರುವ ವಿಶ್ವವಿದ್ಯಾನಿಲಯಕ್ಕೇ ಚಕ್ರ ಕಟ್ಟಿದವರು. ತನ್ನ ವ್ಯಾಪ್ತಿಯಲ್ಲಿ ವಿಶ್ವವಿದ್ಯಾನಿಲಯವನ್ನು ಕರ್ನಾಟಕದಾದ್ಯಂತ ಓಡಿ ದಣಿಸಿದವರು. ಅವರು ಬರೆದ ಹೆಚ್ಚಿನ ಬರಹಗಳೇ ಇದಕ್ಕೆ ಸಾಕ್ಷಿ. ವಿದ್ವಾಂಸನೆಂದರೆ ಅಕಾಡೆಮಿ ಭಾಷೆಗಳಲ್ಲಿ ಬಂಧಿಸಲ್ಪಟ್ಟಿರಬೇಕೆಂಬ ನಿಯಮವನ್ನು ಮೀರಿ, ತನ್ನ ವಿದ್ವಾಂಸಗಿರಿಗೆ ಜಂಗಮ ರೂಪವನ್ನು ಕೊಟ್ಟವರು. ಅವರಿಂದ ಹೊರ ಬಂದಿರುವ ಅನೇಕ ಕೃತಿಗಳು ಇದಕ್ಕೆ ಪದೇ ಪದೇ ಸಾಕ್ಷಿಯಾಗಿವೆ. ಮರದೊಳಗಣ ಕಿಚ್ಚು, ಕರ್ನಾಟಕದ ಸೂಫಿಗಳು ಮೊದಲಾದ ಅಪರೂಪದ ಕೃತಿಗಳನ್ನು ನೀಡಿರುವ ರಹಮತ್ ತರೀಕೆರೆ ಕನ್ನಡದ ಅಮೂಲ್ಯ ಆಸ್ತಿ ಕೂಡ. ಅವರ ಬರೆದ ಇನ್ನೊಂದು ಮುಖ್ಯ ಕೃತಿ ‘ನಡೆದಷ್ಟೂ ನಾಡು’. ನವಕರ್ನಾಟಕ ಪ್ರಕಾಶ ಇದನ್ನು ಹೊರ ತಂದಿದೆ.

‘ನಡೆದಷ್ಟೂ ನಾಡು’ ದಿನಪತ್ರಿಕೆಯಲ್ಲಿ ಬಂದ ಅಂಕಣ ಬರಹ. ಜೊತೆಗೆ ಇದು ಪ್ರವಾಸಾನುಭವವೂ ಹೌದು. ಆದರೆ ಪ್ರವಾಸ ಕಥನದ ಸ್ವರೂಪ ಇಲ್ಲಿ ಭಿನ್ನವಾಗಿದೆ. ಸಾಧಾರಣವಾಗಿ ಪ್ರವಾಸಾನುಭವಗಳು ಆ ಊರಿನ ಸ್ಥಳ ಪರಿಚಯ, ವೈಶಿಷ್ಟ ಇತ್ಯಾದಿಗಳನ್ನು ಹೇಳುತ್ತಾ ಮೇಲಿಂದ ಮೇಲೆ ಸಾಗುತ್ತದೆ. ಪ್ರವಾಸಿಗನಿಗೆ ಆ ಊರಿನ ಬೇರನ್ನು ತಡವುವಷ್ಟು ಪುರುಸೊತ್ತು ಇರುವುದಿಲ್ಲ. ಅವನೇನಿದ್ದರೂ ಹೊರಗಿನವ. ಅಥವಾ ಮೂರನೆಯವ. ಆದರೆ ಇಲ್ಲಿ, ರಹಮತ್ ತರಿಕೆರೆ ತಾನು ಭೇಟಿ ನೀಡಿದ ಪ್ರತಿ ಊರಿನ ಬೇರುಗಳನ್ನು ತಡವಲು ಪ್ರಯತ್ನಿಸುತ್ತಾರೆ. ಅದರಲ್ಲಿ ತಾನೂ ಒಬ್ಬನಾಗಲು ತವಕಿಸುತ್ತಾರೆ. ಆದುದರಿಂದಲೇ ಪ್ರವಾಸಾನುಭವಕ್ಕಿಂತಲೂ ಮೇಲ್‌ಸ್ತರದ ಗುಣವನ್ನು ಈ ಕೃತಿ ಹೊಂದಿದೆ. ಕೆಲವು ಲೇಖನಗಳು ಅವರ ಹಿಂದಿನ ಆಳವಾದ ಸಂಶೋಧನೆಗಳ ಉಪ ಉತ್ಪಾದನೆಯೂ ಹೌದು. ಬಿಜಾಪುರದ ಭೇಟಿ ಸಂದರ್ಭದಲ್ಲಿ ತಾನು ಕಂಡ ತ್ರಿಪುರ ಸುಂದರಿ ಟಾಕೀಸಿನ ಬಗ್ಗೆ ಮಾತನಾಡುತ್ತಾ, ಅಲ್ಲಿನ ತಲೆಮಾರುಗಳ ಕತೆಗಳ ಧೂಳನ್ನು ತಟ್ಟುತ್ತಾರೆ. ಮಂಗಳೂರಿನ ಗ್ರೆಗರಿಯ ಮನೆ ಜೆಸಿಬಿಗೆ ಬಲಿಯಾದ ಕತೆ ಪ್ರವಾಸಾನುಭವದ ಕತೆಯಲ್ಲ. ಈ ನಾಡು ಯಾವ ದುರಂತದ ಕಡೆಗೆ ಮುನ್ನಡಿ ಇಡುತ್ತಿದೆ ಎನ್ನುವುದರೆಡೆಗೆ ಬೆಳಕು ಚೆಲ್ಲುತ್ತಾರೆ. ಹಂಪಿಯ ಸದಾಶಿವ ಯೋಗಿ, ರಾಮದುರ್ಗದ ದಂಗೆ, ರಂಗನಟಿ ಫ್ಲೋರಿನಾ, ಕುವೆಂಪು ಅವರ ಎಮ್ಮೆ....ಹೀಗೆ ಇದು ಕೇವಲ ಅಂಕಣ ಬರಹವೆಂದರೆ ಕೃತಿಗೆ ಮಾಡಿದ ಅನ್ಯಾಯವಾಗುತ್ತದೆ. ಪ್ರವಾಸಾನುಭವೆಂದರೂ ತೆಳುವಾಗಿ ಬಿಡುತ್ತದೆ. ತರೀಕೆರೆಯ ಕೃತಿ ಎಂದರೆ ಅಷ್ಟೇ ಸಾಕು ಅನ್ನಿಸುತ್ತದೆ. ಉಳಿದುದೆಲ್ಲ ನಿಮಗೆ ಅರ್ಥವಾಗಿ ಬಿಡುತ್ತದೆ. ಕೃತಿಯ ಮುಖಬೆಲೆ 160 ರೂ.

No comments:

Post a Comment