Saturday, May 26, 2012

ಆಕೆ ಮತ್ತು ಇತರ ಕತೆಗಳು

ಮಂಚ
‘‘ಇದು ನಾನು ವಿದೇಶದಿಂದ ತಂದ ಅತ್ಯಂತ ಬೆಲೆಬಾಳುವ ಮಂಚ’’
‘‘ಹೌದಾ? ಬಹುಶಃ ಇದರಲ್ಲಿ ಮಲಗಿದಾಕ್ಷಣ ನಿದ್ದೆ ಬರಬಹುದಲ್ವಾ?’’
‘‘ಹಾಗೇನೂ ಇಲ್ಲ...ನಿದ್ರೆ ಮಾತ್ರೆ ತೆಗೆದುಕೊಳ್ಳದೇ ನನಗೆ ನಿದ್ದೆ ಬರುವುದಿಲ್ಲ...’’
‘‘ಯಾವ ಮಂಚದಲ್ಲಿ ಮಲಗಿದಾಕ್ಷಣ ನಿದ್ದೆ ಬರುವುದೋ ಅದೇ ಹೆಚ್ಚು ಬೆಲೆಬಾಳುವ ಮಂಚ. ಅಂತಹ ಮಂಚವನ್ನು, ನಾನು ಹಲವು ಗುಡಿಸಲುಗಳಲ್ಲಿ ನೋಡಿದ್ದೇನೆ’’

ಬಾಡಿಗೆ ಮನೆ
‘‘ಯಾವಾಗ ನೋಡಿದರೂ ಬಾಡಿಗೆ ಮನೆಯಲ್ಲೇ ಇರುತ್ತೀರಲ್ಲ...ಒಂದು ಸ್ವಂತ ಮನೆ ಮಾಡಿಕೊಳ್ಳಬಾರದೆ?’’ ಅವರು ಕೇಳಿದರು.
‘‘ಸ್ವಂತ ಮನೆ ಮಾಡಿಕೊಳ್ಳುವ ಆಸೆಯಿದೆ. ಹಾಗೆಂದು ಹೊರಟಾಗಲೆಲ್ಲ ಯಾರದೋ ಬಾಡಿಗೆ ಮನೆಯಂತಿರುವ ಈ ಭೂಮಿಯಲ್ಲಿ ಕಟ್ಟಿದ್ದು ನನ್ನ ಸ್ವಂತ ಮನೆ ಹೇಗಾದೀತು? ಎಂಬ ಪ್ರಶ್ನೆ ಕಾಡುತ್ತದೆ’’

ಅಹಿಂಸೆ
ಅಂದು ಅಹಿಂಸೆಯ ಪ್ರತಿಪಾದಿಸಿದ ಮಹಾವೀರ ಜಯಂತಿಯ ದಿನ.
ಸೌಹಾರ್ದ ಮೆರೆಯಲು ಸರಕಾರ ಒಂದಿಡೀ ದಿನ ಮಾಂಸ ನಿಷೇಧ ಘೋಷಿಸಿತು.
ನಗರದಲ್ಲಿ ಮಾಂಸ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು.
ಕಟುಕನ ಮನೆಯಲ್ಲಿ ಅಂದಿಡೀ ಮಕ್ಕಳು ಹಸಿದು ಅಳುತ್ತಿದ್ದರು.
ಆತನ ಕದ್ದು ಮಾಂಸ ಮಾರಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.
ಅವರ ಹೊಡೆತ ಬೀಳಬಾರದದಲ್ಲಿಗೆ ಬಿದ್ದು ಲಾಕಪ್‌ನಲ್ಲಿ ಸತ್ತು ಹೋಗಿದ್ದ.
ಮರುದಿನ ಮಹಾವೀರ ಜಯಂತಿಯ ಅಹಿಂಸೆ ಸಂದೇಶ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಮಹಾವೀರ ಜಯಂತಿ ಯಶಸ್ವಿಯಾಗಿ ಆಚರಿಸಲ್ಪಟ್ಟಿತು.
ಸೌಹಾರ್ದ ಎತ್ತಿ ಹಿಡಿಯಲಾಗಿತ್ತು.
ಕಟುಕನ ಮನೆಯ ಹೆಂಡತಿ ಮಕ್ಕಳು ತಮ್ಮ ತಂದೆಗಾಗಿ ಇನ್ನೂ ಹುಡುಕುತ್ತಲೇ ಇದ್ದಾರೆ.

ಬೆಂಕಿ
‘‘ಭೂಮಿಯ ಒಡಲಲ್ಲಿ ಬೆಂಕಿ ಇದೆಯಂತೆ ಹೌದ?’’
‘‘ಹೌದು. ತಾಯಿಯ ಒಡಲಲ್ಲಿ ಸಿಟ್ಟಿರುವಂತೆ’’

ಕನಸು
‘‘ನಿನ್ನೆ ನನ್ನ ತಾಯಿ ತುಂಬಾ ದಿನಗಳ ಬಳಿಕ ನನ್ನ ಕನಸಲ್ಲಿ ಬಂದಿದ್ದರು...ನನ್ನ ಬಗ್ಗೆ ಅವರಿಗೆ ತುಂಬಾ ಪ್ರೀತಿ’’
‘‘ಹೌದೆ...ಅವರು ತೀರಿ ಹೋಗಿ ಎಷ್ಟು ವರ್ಷವಾಯಿತು..?’’
‘‘ಹಾಗೇನಿಲ್ಲ...ಅವರು ವೃದ್ಧಾಶ್ರಮದಲ್ಲಿದ್ದಾರೆ...’’

ಹೃದಯ
ಹಿಮಾಲಯ ಕರಗುತ್ತಿತ್ತು.
ಗಂಗಾನದಿ ದಿನದಿಂದ ವಿಶಾಲವಾಗುತ್ತಿತ್ತು.
‘ನೀನೇಕೆ ಕರಗುತ್ತಿದ್ದೀಯ?’ ಗಂಗೆ ಕೇಳಿದಳು.
‘ಬೆಟ್ಟವಾದರೇನು...ನನಗೂ ಹೃದಯ ಇರಬಾರದೇನು?’ ಹಿಮಾಲಯ ಕೇಳಿತು.

ಮಕ್ಕಳು
ಆರು ಮಂದಿ ತಾಯಂದಿರು ಒಟ್ಟು ಸೇರಿದ್ದರು.
ತಮ್ಮ ತಮ್ಮ ಮಕ್ಕಳ ಬಗ್ಗೆ ಗುಣಗಾನ ಮಾಡುತ್ತಿದ್ದರು.
‘‘ನನ್ನ ಮಗನಿಗೆ ನಾನೆಂದರೆ ತುಂಬಾ ಇಷ್ಟ...ಗೊತ್ತಾ...ಅವನು ದೊಡ್ಡ ಇಂಜಿನಿಯರ್...ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಿದ್ದಾನೆ...ತಿಂಗಳಿಗೆ ಹತ್ತು ಲಕ್ಷ ಸಂಪಾದಿಸುತ್ತಾನೆ...’’
‘‘ನನ್ನ ಮಗ ಬರಹಗಾರ...ಮೊನ್ನೆಯಷ್ಟೇ ಅವನು ಬರೆದ ಕಾದಂಬರಿಯ ಒಂದು ಲಕ್ಷ ಪ್ರತಿ ಮಾರಾಟವಾಯಿತು...ನನ್ನ ಮಗನಿಗೆ ಸಮಾಜ ತುಂಬಾ ಗೌರವ ನೀಡುತ್ತದೆ...’’
‘‘ನನ್ನ ಮಗನಿಗೂ ಅಷ್ಟೇ...ಅವನು ಪ್ರಖ್ಯಾತ ಹೃದಯ ತಜ್ಞ. ಎಂತಹ ಹೃದಯವನ್ನು ಅರೆಕ್ಷಣದಲ್ಲಿ ಬಿಚ್ಚಿ ಅದರ ರೋಗವನ್ನು ವಾಸಿ ಮಾಡುತ್ತಾನೆ...’’
ಹೀಗೆ ಮಾತನಾಡುತ್ತಿರುವಾಗ ಸಂಜೆಯಾಯಿತು. ಅಷ್ಟರಲ್ಲಿ ವಾರ್ಡನ್ ಬಂದು ಚೀರಿದಳು ‘‘ಸಮಯವಾಯಿತು...ಎಲ್ಲರೂ ಅವರವರ ಕೋಣೆಗೆ ತೆರಳಿ’’
ಅಂದ ಹಾಗೆ ಅದೊಂದು ವೃದ್ಧಾಶ್ರಮವಾಗಿತ್ತು.

ಆಕೆ
ಒಬ್ಬ ಮಹಿಳೆ ಆ ಬೀದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಳು.
‘‘ಅವಳು ವೇಶ್ಯೆಯಾಗಿರಬಹುದೆ?’’ ಶಿಷ್ಯ ಕೇಳಿದ.
‘‘ಆಗದೆಯೂ ಇರಬಹುದು....’’ ಸಂತ ಹೇಳಿದ.
‘‘ಅವಳ ವರ್ತನೆ ವೇಶ್ಯೆಯಂತೆ ಕಾಣುತ್ತಿದೆ...’’ ಶಿಷ್ಯ ಹೇಳಿದ.
‘‘ಅಲ್ಲ. ನಿನ್ನ ಒಳಗಿನ ವರ್ತನೆ ಆಕೆಯನ್ನು ನಿನಗೆ ವೇಶ್ಯೆಯಂತೆ ಕಾಣಿಸುತ್ತಿದೆ’’ ಸಂತ ಸಮಾಧಾನಿಸಿದ.

1 comment: