Saturday, October 29, 2011

ಈ ದೀಪಾವಳಿಯ ಎರಡು ಠುಸ್ಸ್ ಪಟಾಕಿಗಳು: ಏಳಾಂ ಅರಿವು ಮತ್ತು ರಾ-ವನ್

ಏಳಾಂ ಅರಿವು: ಮುರುಗದಾಸನಲ್ಲ, ಮೂರ್ಖದಾಸ!

ದೊಡ್ಡ ಯಶಸ್ಸು, ದೊಡ್ಡ ಪ್ರತೀಕ್ಷೆಗಳು ಕೆಲವೊಮ್ಮೆ ಸೃಜನಶೀಲ ಕಲಾವಿದನ ಕಣ್ಣಿಗೆ ಕತ್ತಲನ್ನು
ಕವಿಸುತ್ತದೆ. ‘ಘಜಿನಿ’ ಮೂಲಕ
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಎ. ಆರ್. ಮುರುಗದಾಸ್ ಆ ಯಸಸ್ಸಿನ ಅಮಲಿನಲ್ಲಿದ್ದಾಗಲೇ ‘ಏಳಾಂ ಅರಿವು’ ಚಿತ್ರವನ್ನು ಘೋಷಿಸಿದರು. ಚಿತ್ರದ ಹೆಸರು, ವಿಭಿನ್ನ ಕತೆ, ನಾಯಕ ಪಾತ್ರದಲ್ಲಿರುವ ಸೂರ್ಯ ಇವೆಲ್ಲವೂ ಚಿತ್ರದ ಕುರಿತಂತೆ ಅಗಾಧ ನಿರೀಕ್ಷೆಯನ್ನು ಹುಟ್ಟಿಸಿ ಹಾಕಿತು. ಮಾಧ್ಯಮಗಳೂ ಸೇರಿದಂತೆ ರಾಷ್ಟ್ರಮಟ್ಟದ ಚಿತ್ರೋದ್ಯಮಿಗಳ ಕಣ್ಣು ‘ಏಳಾಂ ಅರಿವು’ ಚಿತ್ರದ ಮೇಲಿದ್ದವು ಘಜಿನಿ ಚಿತ್ರದಲ್ಲಿ ಪ್ರೇಮ ಮತ್ತು ಸೇಡನ್ನು ವಿಭಿನ್ನವಾಗಿ ನಿರೂಪಿಸಿದ ರೀತಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿತ್ತು. ಕ್ಷಣ ಕ್ಷಣಗಳನ್ನು ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದರು ಮುರುಗದಾಸ್. ಇಂತಹ ನಿರ್ದೇಶಕರೊಬ್ಬ ‘ಬೌದ್ಧ ಸನ್ಯಾಸಿ’ಯೊಬ್ಬನ ಕತೆಯನ್ನು ಚಿತ್ರದ ಮೇಲೆ ತೋರಿಸುತ್ತೇನೆ ಎಂದಾಗ ಎಲ್ಲರ ಗಮನ ಅತ್ತ ಹರಿಯುವುದು ಸಹಜ.

‘ಏಳಾಂ ಅರಿವು’ ಚಿತ್ರವನ್ನು ನೋಡಿದಾಕ್ಷಣ ಮುರುಗದಾಸ್ ಯಶಸ್ಸಿನ ಭಾರವನ್ನು ಬೆನ್ನಲ್ಲಿ ಕಟ್ಟಿಕೊಂಡು ಏದುಸಿರು ಬಿಡುತ್ತಿರುವುದು ಸ್ಪಷ್ಟವಾಗುತ್ತದೆ
. ಅತ್ತ ಸಾಹಸ ಪ್ರಧಾನ ಚಿತ್ರವೂ ಆಗದೆ, ಇತ್ತ ಯಾವ ಯಾವ ಏಳನೇ ಅರಿವನ್ನು ಕಟ್ಟಿಕೊಡಗಲಾಗದೆ, ಕ್ಲೈಮಾಕ್ಸ್‌ನಲ್ಲಿ ತಮಿಳರ ಮೇಲಾಗುವ ದೌರ್ಜನ್ಯ ಮತ್ತು ತಮಿಳರು ಹೊಂದ ಬೇಕಾದ ಜಾಗೃತಿಯ ಕುರಿತ ರಾಜಕೀಯ ಭಾಷಣದೊಂದಿಗೆ ಚಿತ್ರ ಮುಗಿಯುತ್ತದೆ. ಈ ಭಾಷಣವನ್ನು ಕೇಳುವುದಕ್ಕಾಗಿ ಮೂರು ಗಂಟೆ ಚಿತ್ರಮಂದಿರದೊಳಗೆ ಕಳೆದೆವೇ ಎಂಬ ‘ಎಂಟನೆ ಅರಿವು’ ನಮಗಾಗುತ್ತದೆ.

1600 ವರ್ಷಗಳ ಹಿಂದೆ ತಮಿಳಿನಾಡಿನಿಂದ ಚೀನಾಕ್ಕೆ ತೆರಳಿದ ಬೋಧಿಧರ್ಮ ಎಂಬ ತಮಿಳಿಗ ಸನ್ಯಾಸಿ ಅಲ್ಲಿನ ಜನ
ರ ಸಂಕಟಗಳ ಪರಿಹಾರಕ್ಕೆ ಕಾರಣವಾಗುತ್ತಾನೆ. ಭೀಕರ ಕಾಯಿಲೆಯೊಂದು ಚೀನಾದ ಜನರ ಮೇಲೆರಗಿದಾಗ ಅವರನ್ನು ರೋಗದಿಂದ ಕಾಪಾಡುತ್ತಾನೆ. ಶತ್ರುಗಳು ಅವರ ಮೇಲೆರಗಿದಾಗ, ತನ್ನ ಕುಂಗ್‌ಫು ಮೂಲಕ ಅವರನ್ನು ಉಳಿಸುತ್ತಾನೆ. ಅಷ್ಟೇ ಅಲ್ಲ ಅವರೆಲ್ಲರಿಗೂ ಸಮರಕಲೆಯನ್ನು ಕಲಿಸಿಕೊಡುತ್ತಾನೆ. ಅವರೆಲ್ಲರ ಆರಾಧ್ಯನಾಗುತ್ತಾನೆ. ಮುಂದೆ ತನ್ನ ಕೆಲಸ ಮುಗಿಸಿ ವೃದ್ಧಾಪ್ಯ ಹತ್ತಿರವಾಗುತ್ತಿರುವಾಗ ಅವನು ಮರಳಿ ತಾಯಿ ನಾಡಿಗೆ ಹೊರಡಲು ತೀರ್ಮಾನಿಸುತ್ತಾನೆ. ಆದರೆ ಅವನು ತಮ್ಮ ಮಣ್ಣಲ್ಲೇ ಮಣ್ಣಾಗಬೇಕು. ಅದರಿಂದ ಊರಿಗೆ ಒಳ್ಳೆಯದಾಗುತ್ತದೆ ಎನ್ನುವುದು ಚೀನಾದ ಜನರ ಆಶಯ. ಆದುದರಿಂದ ಆತನ ಅನ್ನದಲ್ಲಿ ವಿಷ ಹಾಕಿ ಕೊಡುತ್ತಾರೆ. ಇದು ಬೋದಿಧರ್ಮನಿಗೆ ಗೊತ್ತಾಗುತ್ತದೆ. ಜನರ ಆಶಯದಂತೆ, ಆ ಅನ್ನವನ್ನು ತಿಂದು, ಅಲ್ಲೇ ಮಣ್ಣಾಗುತ್ತಾನೆ.

ಇದು ಆರಂಭದ 2
0 ನಿಮಿಷಗಳ ಕತೆ. ಇಷ್ಟನ್ನು ನಿರ್ದೇಶಕರು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ. ಬೋಧಿಧರ್ಮನ ಪಾತ್ರವನ್ನು ಸೂರ್ಯಕೂಡ ಆವಾಹಿಸಿಕೊಂಡಿದ್ದಾರೆ. ಎಲ್ಲೂ ಪಾತ್ರ ಗಾಂಭೀರ್ಯ ಕಳೆದುಹೋಗದಂತೆ ಜಾಗರೂಕತೆ ವಹಿಸಿದ್ದಾರೆ. ಆದರೆ ಚಿತ್ರದ ಅಧ್ವಾನ ಆರಂಭವಾಗುವುದು ತದನಂತರ. ಕತೆ, ನಿರ್ದೇಶನ, ಸಂಕಲನ ಎಲ್ಲವೂ ಈ ಅಧ್ವಾನಗಳಿಗೆ ಸಹಕರಿಸುತ್ತದೆ. 1600 ವರ್ಷಗಳ ಬಳಿಕ ಕತೆ ಆಧುನಿಕ ರೂಪವನ್ನು ಪಡೆಯುತ್ತದೆ. ಚೀನ ದೇಶ ಭಾರತದ ಮೇಲೆ ಜೈವಿಕ ಯುದ್ಧವನ್ನು ಹೇರಲು ಬಯಸುತ್ತದೆ. ಅದಕ್ಕಾಗಿ ಡೋಂಗ್ಲೀ(ಜೋನಿ ಟ್ರಿ ಗುಯೇನ್) ಎಂಬ ಏಜೆಂಟ್‌ನನ್ನು ಆರಿಸಿಕೊಳ್ಳುತ್ತದೆ. ಈತ ಮಾರ್ಷಲ್ ಆರ್ಟ್ ಮಾತ್ರವಲ್ಲ, ಇಪ್ನಾಟಿಸಂ ಸೇರಿದಂತೆ ಹಲವು ಸಮರ ಕಲೆಗಳಲ್ಲಿ ಪ್ರವೀಣ. ‘ಆಪರೇಷನ್ ರೆಡ್’ ಎಂದು ತನ್ನ ಕಾರ್ಯಾಚರಣೆಗೆ ಚೀನ ಹೆಸರಿಡುತ್ತದೆ.

ಇತ್ತ ಭಾರತದಲ್ಲಿ ಶುಭಾ ಶ್ರೀನಿವಾಸನ್(ಶ್ರುತಿ ಹಾಸನ್) ಎಂಬ ವಿಜ್ಞಾನಿ ವಂಶವಾಹಿಯ ಕುರಿತಂತೆ ಸಂಶೋಧನೆ ನಡೆಸುತ್ತಿರುತ್ತಾಳೆ. ತನ್ನ ಅಧ್ಯಯನಕ್ಕೆ ಬೋಧಿಧರ್ಮನನ್ನೇ ಆರಿಸಿಕೊಂಡು ಆತನ ಡಿಎನ್‌ಎ ಹೊಂದಿದವರು
ಯಾರಾದರೂ ಈಗ ಅವನ ವಂಶದಲ್ಲಿದ್ದಾರೆಯೋ ಎನ್ನುವುದನ್ನು ಅನ್ವೇಷನೆ ನಡೆಸುತ್ತಿರುತ್ತಾಳೆ. ಆಗ ಅರವಿಂದ್(ಸೂರ್ಯ) ಎಂಬ ಸರ್ಕಸ್ ಉದ್ಯೋಗಿ ಆ ವಂಶದವನೆನ್ನುವುದು, ಆತ ಆ ಡಿಎನ್‌ಎ ಹೊಂದಿದ್ದಾನೆ ಎನ್ನುವುದು ಅವಳಿಗೆ ತಿಳಿಯುತ್ತದೆ. ಆತನನ್ನು ಪ್ರೀತಿಸಿದಂತೆ ನಾಟಕವಾಗಿ ತನ್ನ ಸಂಶೋಧನೆಗೆ ಅವನನ್ನು ಗಿನಿಪಿಗ್ ಆಗಿ ಬಳಸಿಕೊಳ್ಳುತ್ತಾಳೆ. ತನ್ನ ಸಂಶೋಧನೆಯನ್ನು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೂ ಕಳುಹಿಸಿಕೊಡುತ್ತಾಳೆ.
ಅಂದ ಹಾಗೆ ಆಪರೇಶನ್ ರೆಡ್‌ನ ಉದ್ದೇಶ ಏನೆಂದರೆ ಭಾರತದಲ್ಲಿ ಮಾರಕ ರೋಗವನ್ನು ನಾಯಿಯೊಂದಕ್ಕೆ ಇಂಜೆಕ್ಟ್ ಮಾಡುವುದು. ಅದರ ಮೂಲಕ ಮಿಂಚಿನ ವೇಗದಲ್ಲಿ ಈ ರೋಗ ಹರಡತೊಡಗುತ್ತದೆ. ಈ ರೋಗಕ್ಕೆ ಮದ್ದು ಭಾರತದಲ್ಲಿ ಕಂಡು ಹಿಡಿದಿರುವುದಿಲ್ಲ. ಆದರೆ ಚೀನಾದವರು ಈ ಮದ್ದನ್ನು ಸಿದ್ಧುಪಡಿಸಿಕೊಂಡಿರುತ್ತಾರೆ. ಹೇಗೆ ಗೊತ್ತೆ? 1600 ವರ್ಷಗಳ ಹಿಂದೆ
ಚೀನಾದಲ್ಲಿ ಮಾರಕ ರೋಗ ಬಂದಿತ್ತಲ್ಲ, ಆಗ ಬೋಧಿಧರ್ಮ ಅವರನ್ನೆಲ್ಲ ವಾಸಿ ಮಾಡಿದ್ದನಲ್ಲ ಅದೇ ಮದ್ದು. ಭಾರತದಲ್ಲಿ ಲಕ್ಷಾಂತರ ಜನ ಸಾಯುವಾಗ ಈ ಮದ್ದಿಗಾಗಿ ಚೀನ ಹೇಳಿದಂತೆ ಭಾರತ ಕೇಳಬೇಕಾಗುತ್ತದೆ. ಇದು ಆಪರೇಷನ್ ರೆಡ್‌ನ ಗುರಿ.

ಇತ್ತ ಅರವಿಂದ್‌ನ ಡಿಎನ್‌ಎಯ ಮೂಲಕ ಬೋಧಿಧರ್ಮನನ್ನು ಮತ್ತೆ ತರಲು ಸಾಧ್ಯವೇ ಎನ್ನುವ ಸಂಶೋಧನೆಯನ್ನು ಶುಭಾ ಮಾಡುತ್ತಿರುವುದು ಚೀನಾಕ್ಕೆ ಸಿಟ್ಟು ತರಿಸುತ್ತದೆ. ಆಕೆಯನ್ನು ಕೊಲ್ಲುವುದಕ್ಕೆ ಏಜೆಂಟ್ ಡೋಂಗ್ಲಿ ನಿರ್ಧರಿಸುತ್ತಾನೆ. ಇದರ ಜೊತೆಗೆ ಡೋಂಗ್ಲಿ ನಾಯಿಯ ಮೂಲಕ ಹರಡಿದ ರೋಗ ತಮಿಳು ನಾಡಿನಾದ್ಯಂತ ಹರಡುತ್ತದೆ. ಇದರ ಕಾರಣ ಏನು ಎನ್ನುವುದು ಶುಭಾ ಮೂಲಕ ಅರವಿಂದ್‌ನಿಗೂ ಗೊತ್ತಾಗುತ್ತದೆ. ಶುಭಾ ಹೇಳುವ ಮಾ
ತನ್ನು ಯಾವ ವೈದ್ಯರೂ ನಂಬುತ್ತಿಲ್ಲ. ಆದುದರಿಂದ ಇವರು ಪ್ರತ್ಯೇಕ ಪ್ರಯೋಗಾಲಯದಲ್ಲಿ ಅರವಿಂದ್‌ನನ್ನು ಇಟ್ಟುಕೊಂಡು ಮತ್ತೆ ಬೋಧಿಧರ್ಮನಿಗೆ ಪುನರ್‌ಜ್ಜೀವ ಕೊಡುವ ಪ್ರಯತ್ನ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ಡೋಂಗ್ಲಿಯೂ ಇವರನ್ನು ಹುಡುಕುತ್ತಾ ಬರುತ್ತಾನೆ. ಚಿತ್ರದ ಕೊನೆಯಲ್ಲಿ ಡೋಂಗ್ಲಿ ಮತ್ತು ಬೋಧಿಧರ್ಮರ ನಡುವೆ ಮುಖಾಮುಖಿಯಾಗುತ್ತದೆ. ಕತೆ ಕೇಳಿ ಸುಸ್ತಾಯಿತೆ?

ಕನಿಷ್ಠ ತನ್ನ ಎಂದಿನ ಬಿಗಿ ನಿರೂಪಣೆ, ನಿರ್ದೇಶನದ ಮೂಲಕವಾದರೂ ಈ ಚಿತ್ರವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆಯೋ ಎಂದರೆ ಅದೂ ಇಲ್ಲ. ಸಡಿಲವಾದ ನಿರ್ದೇಶನ. ಜಾಳು ನಿರೂಪಣೆ. ಕತೆಯ ಓಘ ಕೃತಕವಾಗಿದೆ. ಸೂರ್ಯನ ನಟನೆ ಪೇಲವವಾಗಿದೆ. ಶೃತಿ ಹಾಸನ್ ಗೊಂಬೆಯಂತೆ ನಟಿಸಿದ್ದಾರೆ. ಮುಖದಲ್ಲಿ ಭಾವನೆಗಳೇ ಇಲ್ಲ. ಅವರು ಆಡುವ ಇಂಗ್ಲಿಷ್ ತಮಿಳನ್ನು ಕೇಳಿದರೆ ಕಮಲ್ ಹಾಸನ್ ಮುಖಮುಚ್ಚಿಕೊಳ್ಳಬೇಕು. ಎಲ್ಲಕ್ಕಿಂತ ವಿಚಿತ್ರವೆಂದರೆ, ಅಂತ್ಯದಲ್ಲಿ ಚಿತ್ರವನ್ನು ಒಂದು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವುದು. ಸರ್ಕಸ್‌ನಲ್ಲಿ ಸಿಬ್ಬಂದಿಯಾಗಿರುವ ಅರವಿಂದ್, ತಮಿಳರ ಮೇಲೆ ಜಗತ್ತಿನಾದ್ಯಂತ ನಡೆ
ಯುತ್ತಿರುವ ಶೋಷಣೆ, ದೌರ್ಜನ್ಯದ ಕುರಿತಂತೆ ಆಗಾಗ ಭಾಷಣ ಕೊರೆಯತೊಡಗುತ್ತಾನೆ. ತಮಿಳರು ತಮ್ಮ ಅಸ್ಮಿತೆಯನ್ನು ಮರೆತಿದ್ದಾರೆ. ತಮ್ಮ ರಕ್ತಕಣಗಳಲ್ಲಿ ಬೋಧಿಧರ್ಮರಂತಹ ಮಹಾತ್ಮರಿದ್ದಾರೆ, ಅವರಿಗೆ ಜೀವ ನೀಡಬೇಕು....ಎಂಬಿತ್ಯಾದಿಯಾಗಿ...ಹೇಳಿಕೆ ನೀಡುವುದು. ಕ್ಯಾಪ್ಟನ್ ಪ್ರಭಾಕರನ್ ಅವರ ಹತ್ಯೆಯ ಕುರಿತಂತೆಯೂ ಈತ ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ ‘‘ಒಂಬತ್ತು ದೇಶಗಳು ಸೇರಿ ಒಬ್ಬನನ್ನು ಕೊಲ್ಲುವುದು ಯುದ್ಧವಲ್ಲ, ದ್ರೋಹ’’ ಎಂಬೆಲ್ಲ ಘೋಷಣೆಗಳು ಆಗಾಗ ಕೇಳಿ ಬರುತ್ತದೆ. ಚಿತ್ರ ಹಳಿ ತಪ್ಪಿರುವುದು ನಿರ್ದೇಶಕನ ಗಮನಕ್ಕೆ ಬಂದಿದೆ. ಆದುದರಿಂದಲೇ ಚಿತ್ರ ಮನರಂಜನೆಯ ಹಳಿಯಿಂದ ಜಾರಿ, ರಾಜಕೀಯ ಉದ್ದೇಶಕ್ಕೆ ವಾಲಿಕೊಳ್ಳುತ್ತದೆ. ಚಿತ್ರದಲ್ಲಿ ಅರವಿಂದ್‌ನ ಡಿಎನ್‌ಎಯಯಿಂದ ಬೋಧಿಧರ್ಮನನ್ನು ಜಾಗೃತಿಗೊಳಿಸುವುದಂತೂ ತಮಾಷೆಯಾಗಿದೆ. ವಿಜ್ಞಾನವೋ, ಜಾದುವೋ, ಮಂತ್ರವೋ ಒಂದೂ ಅರ್ಥವಾಗುವುದಿಲ್ಲ. ಅಂತೂ ಬೋಧಿಧರ್ಮ ಮತ್ತೆ ಬಂದು ಡೋಂಗ್ಲಿಯನ್ನು ಕೊಂದು, ಮಾರಕರೋಗವನ್ನು ವಾಸಿ ಮಾಡುತ್ತಾನೆ. ಜೊತೆಗೆ, ತಮಿಳರನ್ನು ಜಾಗೃತಿಗೊಳಿಸುವ ಕೆಲಸವನ್ನೂ ಮಾಡುತ್ತಾನೆ. ಇರುವುದರಲ್ಲಿ ಚೀನಾ ನಟ ಜೋ ಟ್ರಿಯ ಡೋಂಗ್ಲಿ ಪಾತ್ರ ಫೈಟಿಂಗ್ ನೋಡುವಂತಿದೆ.
ಮುರುಗದಾಸ್ ಒಂದು ಒಳ್ಳೆಯ ಕಲ್ಪನೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ಅನುಮಾನವಿಲ್ಲ. ಆದರೆ ಯಾವುದೇ ಹೋಮ್‌ವರ್ಕ್‌ಗಳನ್ನು ಮಾಡಿಕೊಂಡಂತಿಲ್ಲ. ಅವರ ಅತಿ ಆತ್ಮವಿಶ್ವಾಸ ಅವರಿಗೆ ಕೈಕೊಟ್ಟಿದೆ. ಹ್ಯಾರಿಸ್ ಜಯರಾಜ್ ಅವರ ಸಂಗೀತದಲ್ಲೂ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಮುರುಗದಾಸ್ ಈ ಚಿತ್ರದ ಮೂಲಕ ಮೂರ್ಖದಾಸ್ ಆಗಿದ್ದಾರೆ.


ವೀಡಿಯೋ ಗೇಮ್ ಮಟ್ಟದಿಂದ ಮೇಲೇರದ ‘ರಾ-ವನ್’

‘ರಾ-ವನ್’ ಚಿತ್ರಕ್ಕೆ ಶಾರುಕ್ ತಂಡ ಈ ಬಗೆಯ ಪ್ರಚಾರ, ಹಣ, ವದಂತಿಗಳನ್ನು ಸುರಿಯದೇ ಇದ್ದಿದ್ದರೆ ನಾವು ಈ ಚಿ
ತ್ರವನ್ನು ಒಮ್ಮೆ ನೋಡಿ ‘ಪರವಾಗಿಲ್ಲ’ ಎಂದು ಹೇಳಿ ಮರೆತು ಬಿಡಬಹುದಿತ್ತು. ಆದರೆ ಅದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದಾರೆ ಸ್ವತಃ ಶಾರುಕ್ ಎನ್ನುವ ಸ್ಟಾರ್ ನಟ. ಸಿನಿಮಾವೊಂದನ್ನು ಪ್ರಚಾರದ ಮೂಲಕವೇ ಗೆಲ್ಲಿಸಲು ಮುಂದಾದರೆ, ಒಂದು ಚಿತ್ರದ ತೂಕಕ್ಕಿಂತ ಭಾರವಾದ ನಿರೀಕ್ಷೆಗಳನ್ನು, ವದಂತಿಗಳನ್ನು ಮಾಧ್ಯಮಗಳ ಮೂಲಕ ಬಿತ್ತಿದರೆ ಏನಾಗಬಹುದೇ ಅದೇ ‘ರಾ-ವನ್’ಗೂ ಆಗಿದೆ. ಒಂದು ವೀಡಿಯೋ ಗೇಮ್‌ಗೆ ಸರಿಗಟ್ಟಬಹುದಾದ ಚಿತ್ರಕ್ಕೆ ಈ ಪರಿಯಾದ ಪ್ರಚಾರಕವನ್ನು ಶಾರುಕ್ ಯಾಕೆ ಕೊಟ್ಟರು? ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ಸ್ಟಾಂಪ್ ಸೈಝ್‌ನ ಫೋಟೋಗೆ ಆಕಾಶದೆತ್ತರದ ಚೌಕಟ್ಟು ನಿರ್ಮಿಸಿದಂತಿದೆ, ರಾ-ವನ್ ಪ್ರಚಾರಕ್ಕಾಗಿ ಶಾರುಕ್ ಸುರಿದ ಹಣ.
ಈಗಾಗಲೇ ರಜನೀಕಾಂತ್ ‘ಎಂದಿರನ್’ ಅಥವಾ ‘ರೋಬೊಟ್’ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಜನೀಕಾಂತ್ ಅವರ ಚಿಟ್ಟಿ ರೋಬೋಟ್ ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಏಕಕಾಲದಲ್ಲಿ ಒಳಿತು-ಕೆಡುಕಿನ ಪಾತ್ರಗಳನ್ನು ಆವಾಹಿಸಿಕೊಂಡ ಚಿಟ್ಟಿ, ತನ್ಮೂಲಕ ಮನುಷ್ಯ ಜಗತ್ತಿಗೆ ಹೃದಯಸ್ಪರ್ಶಿಸಂದೇಶವೊಂದನ್ನು ನೀಡುತ್ತಾನೆ. ಪ್ರೀತಿಗಾಗಿ ಹಪಹಪಿಸುವ ಯಂತ್ರವೊಂದು, ಅಂತಿಮವಾಗಿ ಅದನ್ನು ದಕ್ಕಿಸುವುದಕ್ಕಾಗಿ ಮನುಷ್ಯನ ಮೂಲಕವೇ ವಿಲನ್ ಆಗಿ ಪರಿವರ್ತನೆ ಹೊಂದುತ್ತದೆ. ಪ್ರೀತಿಗಾಗಿ ಮನುಷ್ಯನ ಜೊತೆಗೆ ಸ್ಪರ್ಧೆಗೆ ನಿಂತು ವಿಫಲವಾಗುತ್ತದೆ. ಅಂತಿಮವಾಗಿ, ತನ್ನನ್ನು ತಾನೇ ನ್ಯಾಯಾಲಯದಲ್ಲಿ ಕೊಂದುಕೊಳ್ಳುತ್ತದೆ. ಹಣ, ಸಾಹಸ ಮತ್ತು ಹೃದಯಸ್ಪರ್ಶಿ ಕತೆ. ಇದನ್ನು ಬೆಸೆದ ಸೂಪರ್‌ಸ್ಟಾರ್ ರಜನೀಕಾಂತ್. ರೋಬೊಟ್‌ನ್ನು ಮೆಚ್ಚಲು ಇದಕ್ಕಿಂತ ಹೆಚ್ಚೇನು ಬೇಕು?

ಶಾರುಕ್‌ಖಾನ್ ಮಾಡಿದ ಮೊದಲ ತಪ್ಪು, ರಜನೀಕಾಂತ್ ಅವರ ರೋಬೊಟ್ ಜೊತೆಗೆ ‘ರಾ-ವನ್’ನ್ನು ಸ್ಪರ್ಧೆಗಿಳಿಸಿದ್ದು. ಇದು ಎರಡು ಸೂಪರ್ ಸ್ಟಾರ್‌ಗಳ, ಸೂಪರ್ ಪವರ್‌ಗಳ ಜಂಗೀಕುಸ್ತಿಯಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾ-ವನ್ ಮೂಲಕ ಜನರು ಭಾರೀ ದೊಡ್ಡದನ್ನೇ ನಿರೀಕ್ಷಿಸಿದರು. ಅಂದರೆ ರೋಬೋಟ್‌ಗಿಂತಲ್ಲೂ ಸಮರ್ಥನಾದ ಸೂಪರ್‌ಮ್ಯಾನ್‌ನ ನಿರೀಕ್ಷೆಯಲ್ಲಿದ್ದರು. ಆದರೆ ಗೋಮಟನ ನಿರೀಕ್ಷೆಯಲ್ಲಿರುವ ಜನರ ಕೈಗೆ ವೀಡಿಯೋ ಗೇಮೊಂದರ ವಿಸಿಡಿಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ ಶಾರುಕ್. ಕತೆಯಲ್ಲಾಗಲಿ, ಪಾತ್ರಗಳಲ್ಲಾಗಲಿ ಜೀವಂತಿಕೆಯಿಲ್ಲ. ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಕತೆ. ನಾಯಕ, ಖಳನಾಯಕ. ಇವರ ಮಧ್ಯೆ ಒಂದು ಮಗು. ರಾ-ವನ್ ಅರ್ಥಾತ್ ರಾವಣ್ ಎಂಬ ಖಳನಾಯಕನಿಂದ ಈ ಮಗುವನ್ನು ರಕ್ಷಿಸುವ ಸೂಪರ್ ಪವರ್ ಉಳ್ಳ ಜಿ-ವನ್ ಅರ್ಥಾತ್ ಜೀವನ್.
ಶೇಖರ್ ಸುಬ್ರಹ್ಮಣ್ಯನ್ (ಶಾರುಕ್‌ಖಾನ್) ತನ್ನ ಮಗ ಪ್ರತೀಕ್‌ನಿಗಾಗಿಯೇ ಒಂದು ವಿಶೇಷ ವೀಡಿಯೋ ಗೇಮ್‌ನ್ನು ಮಾಡುವುದಕ್ಕೆ ಹೊರಡುತ್ತಾನೆ. ಮಗನಿಗೆ ನಾಯಕನಿಗಿಂತ ಖಳನಾಯಕನ ಮೇಲೆಯೇ ಇಷ್ಟ. ಆದುದರಿಂದ ಸೂಪರ್ ಪವರ್ ಉಳ್ಳ ಖಳನಾಯಕ ‘ರಾ-ವನ್’ನ್ನು ಸಿದ್ಧಪಡಿಸಲು ಮುಂದಾಗುತ್ತಾನೆ. ಜೊತೆಗೆ ಅವನನ್ನು ಎದುರಿಸಲು ಜಿ-ವನ್‌ನ್ನು ಕೂಡ. ಆದರೆ ರಾ-ವನ್ ಶೇಖರ್‌ನ ಕೈ ಮೀರುತ್ತದೆ. ಅದರ ಬಿಡುಗಡೆಯ ಸಮಾರಂಭದ ವೇಳೆ, ಬಾಲಕ ಪ್ರತೀಕ್ ರಾ-ವನ್ ಜೊತೆ ಆಡುವುದಕ್ಕೆ ಮುಂದಾಗುತ್ತಾನೆ. ಒಂದು ಹಂತದಲ್ಲಿ ಪ್ರತೀಕ್ ಆಟವನ್ನು ನಿಲ್ಲಿಸ ಬಯಸಿದರೂ ರಾ-ವನ್ ಆಟವನ್ನು ನಿಲ್ಲಿಸುವುದಕ್ಕೆ ಒಪ್ಪುವುದಿಲ್ಲ. ಅದು ಪ್ರತೀಕ್‌ನನ್ನು ಕೊಲ್ಲುವುದಕ್ಕೆ ನಿರ್ಧರಿಸುತ್ತದೆ. ಅಂದರೆ ಆಟದಿಂದ ಹೊರಗೆ ಪ್ರತೀಕ್‌ನನ್ನು ಹುಡುಕಿಕೊಂಡು ಬರುತ್ತದೆ. ಈ ಹಂತದಲ್ಲಿ ಪ್ರತೀಕ್‌ನ ತಂದೆ ಶೇಖರ್‌ಸುಬ್ರಹ್ಮಣ್ಯನನ್ನು ಕೊಂದು ಹಾಕುತ್ತದೆ. ಅಂತಿಮವಾಗಿ ರಾ-ವನ್ ವಿರುದ್ಧ ಜಿ-ವನ್‌ನನ್ನು ಸಿದ್ಧಪಡಿಸಬೇಕಾಗುತ್ತದೆ. ಜೀ-ವನ್ ಪ್ರತೀಕ್‌ನನ್ನು ರಕ್ಷಿಸಲು ಗೇಮ್ಸ್‌ನಿಂದ ಹೊರ ಬರುತ್ತಾನೆ. ಉಳಿದಂತೆ ಒಳಿತು-ಕೆಡುಕುಗಳ ನಡುವೆ ತಿಕ್ಕಾಟ. ಅಂತಿಮವಾಗಿ ಜಿ-ವನ್ ರಾವಣ್‌ನನ್ನು ಕೊಲ್ಲಲೇ ಬೇಕಲ್ಲ?

ದೃಶ್ಯ, ದೃಶ್ಯಗಳಲ್ಲೂ ವಿಶೇಷವನ್ನು ಅರಸಿಹೋದ ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಯಾಕೆಂದರೆ, ರಾ-ವನ್ ಆಗಲಿ, ಜೀ-ವನ್ ಆಗಲಿ ಎಲ್ಲೂ ರಜನೀಕಾಂತ್ ಅವರ ರೋಬೊಟ್ ಚಿಟ್ಟಿಯನ್ನು ಸರಿಗಟ್ಟುವುದಿಲ್ಲ. ಎಂದಿರನ್‌ನ ಅರ್ಧಕ್ಕೂ ಬರುವುದಿಲ್ಲ ಶಾರುಕ್ ಅವರ ‘ರಾ-ವನ್’. ಇಲ್ಲಿ ಪಾತ್ರಗಳಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ಈ ಕಾರಣದಿಂದಲೇ ಇಡೀ ಚಿತ್ರ ವೀಡಿಯೋ ಗೇಮ್ ಮಟ್ಟಕ್ಕಿಂತ ಮೇಲೇರುವುದಿಲ್ಲ. ಕರೀನಾ ಕಪೂರ್, ಶಾರುಕ್ ಖಾನ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ ಎನ್ನುವುದನ್ನಷ್ಟೇ ಹೇಳಬಹುದು.

ಸಾಹಸ ದೃಶ್ಯಗಳ ಮೂಲಕವಾದರೂ ಗಮನ ಸೆಳೆಯುತ್ತದೆಯೋ ಎಂದರೆ ಅದೂ ಇಲ್ಲ. ಕ್ಲೈಮಾಕ್ಸ್ ರೈಲಿನ ಸಾಹಸ ದೃಶ್ಯ, ಛತ್ರಪತಿ ಟರ್ಮಿನಸ್ ಕುಸಿಯುವ ದೃಶ್ಯ ಒಂದಿಷ್ಟು ಪರಿಣಾಮಕಾರಿಯಾಗಿದೆ. ಅನುಭವ್ ಸಿನ್ಹಾ ಅವರಂತಹ ಅನನುಭವಿ ನಿರ್ದೇಶಕನ ಕೈಯಲ್ಲಿ ವಿಶೇಷ ಸ್ಕೋಪ್ ಇಲ್ಲದ ಕತೆಯೊಂದನ್ನು ಕೊಟ್ಟರೆ ಏನಾಗಬೇಕೇ ಅದೇ ಆಗಿದೆ. ರಾ-ವನ್ ಈ ದೀಪಾವಳಿಗೆ ಶಾರುಕ್ ಹಾರಿಸಿ ಬಿಟ್ಟ ಠುಸ್ ಪಟಾಕಿ.

3 comments:

  1. ಎರಡು ಪಟಾಕಿಗಳು ಠುಸ್ ಎಂದಿತೇ.. ಒಳ್ಳೆ ವಿಮರ್ಷೆ :)

    ReplyDelete
  2. ಸಿನಿಮಾ ನಿರ್ಮಾಣವು ಐಲು ಮಟ್ಟ ಮುಟ್ಟಿಬಿಟ್ಟಿದೆ ಸಾರ್!

    ಒಳ್ಳೆಯ ಸಾಂದರ್ಭಿಕ ಲೇಖನ.

    ನಿರ್ಮಾಪಕ ಸಿನಿಮಾ ಶಾಸ್ತ್ರದ ಅನಕ್ಷರಸ್ಥ ಆದಷ್ಟೂ, ಸಿನಿಮಾ ತೋಪೆ? ಒಂದು ರೋಬೋ ಮಗಧೀರಾ ಬಾತೂ ಅಂದರೆ ಅದೇ ಹಳಸಲಿನ ೪೦ ಚಿತ್ರಗಳು ಬಾಲಂಗೋಚಿ.

    ಕ್ಯಾಮರ ಕೈಚಳಕ, ಜಿಮ್ಮ ಜಿಪ್, ವೈಡ್ ಯಾಂಗಲ್ ಲೆನ್ಸ್, ಫಿಲ್ಟರ್ಸ್, ಡಿ.ಐ, ಗ್ರಾಫಿಕ್ಸ್, ಬೆಳಕು ವಿನ್ಯಾಸ ಮತ್ತು ಕಿವಿ ಕಿತ್ತು ಹೋಗೋ ಎಲ್ಲೋ ಕದ್ದ ಸಂಗೀತದ ಡಿ.ಟಿ.ಎಸ್ ಮಾತ್ರ ಸಿನಿಮಾ ಗೆಲ್ಲಿಸಲಾರದು. ಕಥೆಯಲ್ಲೇ ಸತ್ವವಿಲ್ಲದೆ ಎಂಥಾ ಸಿನಿಮಾ ಮಾಡಿದರೇನು?

    ReplyDelete
  3. ವಿಮರ್ಷೆ ಚೆನ್ನಾಗಿದೆ. ಮಲ್ಟಿಪ್ಲೆಕ್ಸ್ ಜನತೆ ಇ೦ತಹ ಚಿತ್ರಗಳನ್ನು ನೋಡಿ ಪಶ್ಚಾತಾಪ ಪಡುವುದು ಮಾತ್ರ ಕೊನೆಯಿಲ್ಲದ ಕಥೆ. ಅಷ್ಟರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ದುಡ್ದು ನು೦ಗಿ, ಪ್ರೋಡ್ಯೂಸರ್ 'ಪಾರ್ಟ್ 2' ಮಾಡಲು ಶುರು ಮಾಡಿರುತ್ತಾನೆ

    ReplyDelete