Tuesday, April 1, 2014

ಉಳಿದವರು ಕಂಡಂತೆ: ಕನ್ನಡ ಚಿತ್ರೋದ್ಯಮದ ಭರವಸೆಗಳು

‘ಉಳಿದವರು ಕಂಡಂತೆ’ ಚಿತ್ರ ನಿಮಗೆ ಹೊಸ ಜಗತ್ತೊಂದನ್ನು ಕಟ್ಟಿಕೊಡುತ್ತದೆ. ಕನ್ನಡ ಸಿನಿಮಾ ಲೋಕಕ್ಕೆ ತೀರಾ ಅಪರಿಚಿತವಾದ ದಕ್ಷಿಣ ಕನ್ನಡದ ಉಡುಪಿ ಆಸುಪಾಸಿನ ಜಗತ್ತು ಅದು. ಕನ್ನಡದ ಸಿನಿಮಾಗಳು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಅಪರಾಧ ಲೋಕವನ್ನು ಕಟ್ಟಿಕೊಡುತ್ತಿರುವ ಸಂದರ್ಭದಲ್ಲಿ, ಭಿನ್ನ ಪರಿಸರವೊಂದರಲ್ಲಿ, ಒಂದು ಅಪರಾಧವನ್ನು ವಿವಿಧ ಕೋನಗಳಲ್ಲಿ ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ನಿರೂಪಿಸಲಾಗಿದೆ. ಉಡುಪಿ, ಮಲ್ಪೆ ಪರಿಸರ, ಕಡಲು, ಹುಲಿವೇಷ ಮತ್ತು ಅಲ್ಲಿನ ಮ್ಯಾನರಿಸಂನ್ನು ಒಟ್ಟೊಟ್ಟಿಗೇ ಚಿತ್ರದ ಕತೆಯ ಭಾಗವಾಗಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಜೋಡಿಸಿದ ಚಿತ್ರ ಇದು. ಈ ಚಿತ್ರಕ್ಕೆ ಕತೆಯಿಲ್ಲ. ಒಂದು ಘಟನೆಯನ್ನು ಕೇಂದ್ರವಾಗಿರಿಸಿ, ಅದನ್ನು ವಿವಿಧ ಕಣ್ಣುಗಳ ಮೂಲಕ ನೋಡುವ ಪ್ರಯತ್ನವನ್ನು ಈ ಚಿತ್ರ ಮಾಡುತ್ತದೆ. ಸಣ್ಣ ಪುಟ್ಟ ತೊಡಕುಗಳ ನಡುವೆಯೂ, ಎಲ್ಲವನ್ನು ಒಟ್ಟಾಗಿ ಜೋಡಿಸಿ ಅದಕ್ಕೆ ಒಂದು ಸಿನಿಮಾ ಚೌಕಟ್ಟು ನೀಡುವ ಕೆಲಸ ಹಗ್ಗದ ನಡಿಗೆಯೇ ಸರಿ. ನಿರ್ದೇಶಕ ರಕ್ಷಿತ್ ಶೆಟ್ಟಿಯವರು ಎಲ್ಲೂ ಆಯ ತಪ್ಪದೆ ಗುರಿ ಮುಟ್ಟುವಲ್ಲಿ ಸಫಲರಾಗಿದ್ದಾರೆ. 

ಚಿತ್ರ ಮುಖ್ಯವಾಗಿ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ಒಂದು ರಾಘು. ಇನ್ನೊಬ್ಬ ರಿಚ್ಚಿ. ಮಗದೊಬ್ಬ ಮುನ್ನಾ. ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಸ್ಪಷ್ಟ ಕಾರಣವೇ ಇಲ್ಲದೆ ಈ ಮೂವರು ಒಬ್ಬರಿಂದ ಒಬ್ಬರು ಎನ್ನುವಂತೆ ಕೊಲೆಯಾಗುತ್ತಾರೆ. ಅಥವಾ ಹಾಗೆಂದು ಕೆಲವರು ನಂಬಿದ್ದಾರೆ. ಇದರಲ್ಲಿ ರಾಘುವನ್ನು ಕೊಂದಿರುವುದು ರಿಚ್ಚಿ ಎಂದು ಕೆಲವು ಪಾತ್ರಗಳು ಹೇಳಿದರೆ, ‘ರಾಘು-ರಿಚ್ಚಿ ಬಾಲ್ಯ ಸ್ನೇಹಿತರು. ಅವನೇಕೆ ರಾಘುವನ್ನು ಕೊಲ್ಲುತ್ತಾನೆ’ ಎಂದು ಇನ್ನೊಂದು ಪಾತ್ರ ಹೇಳುತ್ತದೆ. ರಿಚ್ಚಿಯನ್ನು ಒಂದು ತಪ್ಪು ಗ್ರಹಿಕೆಯಲ್ಲಿ ಮುನ್ನಾ ಕೊಂದು ಹಾಕುತ್ತಾನೆ. ಇವೆಲ್ಲದಕ್ಕೂ ನಿಮಿತ್ತವಾಗುವುದು ಬಾಲು ಎನ್ನುವ ಹುಲಿವೇಷ ಪಾತ್ರಧಾರಿ. ಮತ್ತು ಅವನಿಗೆ ಆಕಸ್ಮಿಕವಾಗಿ ಕಡಲಿನಲ್ಲಿ ಸಿಗುವ ನಿಧಿ.

   ರಿಚ್ಚಿ (ರಕ್ಷಿತ್ ಶೆಟ್ಟಿ) ಪಾತ್ರವಂತೂ ಕನ್ನಡಕ್ಕೆ ಹೊಸ ಬಗೆಯದು. ಮಂಗಳೂರಿನ ಮ್ಯಾನರಿಸಂನ್ನು ಸೂಕ್ಷ್ಮವಾಗಿ ಗ್ರಹಿಸಿ ಕಡೆದ ಪಾತ್ರ ಅದು. ರಕ್ಷಿತ್ ಶೆಟ್ಟಿ ಅವರ ಅತ್ಯಂತ ಲವಲವಿಕೆಯ ನಟನೆ ಚಿತ್ರವನ್ನು ನೋಡುವಂತೆ ಮಾಡುತ್ತದೆ. ಎದೆಯನ್ನೇ ಇರಿಯುವ  ತಣ್ಣಗಿನ ಕ್ರೌರ್ಯವನ್ನು ರಿಚ್ಚಿ ತನ್ನ ಮ್ಯಾನರಿಸಂ ಮೂಲಕ ಅಭಿವ್ಯಕ್ತಿಗೊಳಿಸಿದ ರೀತಿ ಅನನ್ಯವಾದುದು. ತಲ್ಲಣಗೊಳಿಸುವಂತಹದು. ರಿಚ್ಚಿಯ ಬಳಿಕ ಅತ್ಯಂತ ಇಷ್ಟವಾಗುವ ಪಾತ್ರ ಮುನ್ನಾ(ಕಿಶೋರ್)ನದು. ಉತ್ತರಕರ್ನಾಟಕದಿಂದ ಮಂಗಳೂರಿಗೆ ಬಂದಿರುವ ಮುನ್ನಾ, ಆತನ ಬೈಕು, ತನ್ನ ಕನಸಿನಲ್ಲಿ ಆತ ಪ್ರೀತಿಸುವ ಹುಡುಗಿ ಹಾಗೂ ಮುನ್ನಾನ ಸಂಗಡಿಗ ಎಳೆ ಹುಡುಗ ಡೆಮಾಕ್ರಸಿ ಇವೆಲ್ಲ ಎದೆಮುಟ್ಟುತ್ತವೆ. ಒರಟು ಮುಖವಾದರೂ ಎದೆಯಲ್ಲಿ ತಣ್ಣಗೆ ಪ್ರೀತಿಯನ್ನು ಬಚ್ಚಿಟ್ಟು ತಿರುಗುವ ಮುನ್ನಾನೇ ಚಿತ್ರಕ್ಕೆ ಒಂದು ಅನಿರೀಕ್ಷಿತ ಅಂತ್ಯವನ್ನು ನೀಡುತ್ತಾನೆ.  ರಾಘು ಪಾತ್ರದಲ್ಲಿ ರಿಷಬ್ ತನ್ನ ಗಾಂಭೀರ್ಯವನ್ನು ಉಳಿಸಿಕೊಂಡಿದ್ದಾರೆ. ಪಾತ್ರ ಸಣ್ಣದಾದರೂ ಭವನಗಳನ್ನು ಬಡಿದೆಬ್ಬಿಸುವಂಥದ್ದು. ಈತನ ತಾಯಿಯಾಗಿ ತಾರ ನೀಡಿದ ಅಭಿನಯ ಕೂಡ ಅಷ್ಟೇ ತೀವ್ರವಾಗಿದೆ.  ಬಾಲು ಪಾತ್ರದಲ್ಲಿ ಅಚ್ಯುತ್ ಇನ್ನೊಂದು ಹೆಗ್ಗಳಿಕೆ. ಹುಲಿವೇಷಧಾರಿಯಾಗಿದ್ದ ಬಾಲುವನ್ನು ರಿಚ್ಚಿ ಥಳಿಸುವುದು, ಹುಲಿಯನ್ನು ರಿಕ್ಷಾದಲ್ಲಿ ಹಾಕಿ ಒಯ್ಯೋದು...ತಮಾಷೆ, ಕ್ರೌರ್ಯ ಜೊತೆ ಜೊತೆಯಾಗಿ ನಮ್ಮನ್ನು ಕಲಕುತ್ತದೆ.
  
ಇಡೀ ಚಿತ್ರ ತನ್ನ ಭಿನ್ನ ನಿರೂಪಣೆಯಿಂದಾಗಿ ಹಲವೆಡೆ ಕೆಲವರಿಗೆ ತೀರ ಗೊಂದಲ ಎನ್ನಿಸಬಹುದು. ಅತ್ಯಂತ ಖೇದಕರ ಸಂಗತಿಯೆಂದರೆ ಈ ಗೊಂದಲವನ್ನು ಉಪೇಂದ್ರನ ಅಭಿರುಚಿ ಹೀನ ಚಿತ್ರಗಳಿಗೆ ಕೆಲವರು ಹೋಲಿಸಿರುವುದು. ಹಾಗೆ ನೋಡಿದರೆ, ಒಂದು ಘಟನೆಯನ್ನು ಭಿನ್ನ ಕಣ್ಣುಗಳಿಂದ ನಿರೂಪಿಸುವ ತಂತ್ರವನ್ನು ತಮಿಳಿನಲ್ಲಿ ಹಲವರು ಬಳಸಿದ್ದಾರೆ.  ಇಂಗ್ಲಿಷ್‌ನಲ್ಲೂ ಹಲವು ಚಿತ್ರಗಳು ಈ ತಂತ್ರಗಳಿಂದಾಗಿಯೇ ಭಿನ್ನವಾಗಿ ಗುರುತಿಸಲ್ಪಟ್ಟಿದೆ. ಅಷ್ಟೇ ಏಕೆ, ಅಕಿರೋ ಕುರಸೋವಾನ ರಾಶಮನ್ ಒಂದು ಕೊಲೆಯನ್ನು ಮೂರು ವಿಭಿನ್ನ ಜನರ ಮೂಲಕ ನೋಡುವ ಚಿತ್ರ. ಮತ್ತು ಜಗತ್ತಿನ ಶ್ರೇಷ್ಟ ಚಿತ್ರವೂ ಹೌದು. ಈ ನಿಟ್ಟಿನಲ್ಲಿ ಉಳಿದವರು ಕಂಡಂತೆ  ಕನ್ನಡದ ಪಾಲಿಗೆ ಅಪ್ಪಟ ಪ್ರತಿಭೆಗಳಿಂದ ಸಿದ್ಧಗೊಂಡ ಒಂದು ಹೊಸ ಪ್ರಯೋಗ. ಏಕತಾನತೆಯಿಂದ ನರಳುತ್ತಿರುವ  ಕಮರ್ಶಿಯಲ್ ಚಿತ್ರಗಳ ನಡುವೆ ಹೊಸ ಪ್ರಯೋಗಗಳಿಗೆ  ಕೆಲವು ತರುಣರು ತೆರೆದು ಕೊಳ್ಳುತ್ತಿದ್ದಾರೆ. ಅದಕ್ಕಾಗಿ ತಮ್ಮ ಪ್ರತಿಭೆ, ಶ್ರಮ, ಹಣ, ಭವಿಷ್ಯ ಎಲ್ಲವನ್ನೂ ಹೂಡಲು ಸಿದ್ಧರಾಗಿದ್ದರೆ. ಇದು ಕನ್ನಡ ಚಿತ್ರೋದ್ಯಮದ ಭಾಗ್ಯ. ಇಂತಹ ಸಂದರ್ಭದಲ್ಲಿ ವಿಮರ್ಶಕರು
ಅತುರದಿಂದ ತೀರ್ಪು ನೀಡೂದು ತಪ್ಪು. ಆ ಮೂಲಕ ತಮ್ಮ ಗೊಂದಲಗಳನ್ನು ಇತರರ ಮೇಲೆ ಹೇರಿದಂತಾಗಬಹುದು. ಒಂದು ಚಿತ್ರದ ಪ್ರಾಮಾಣಿಕ ಪ್ರಯತ್ನವನ್ನು ಒಂದು ಸಾಲಿನಲ್ಲಿ ಗೀಚಿ ಎಸೆಯುವುದು ನಿಜಕ್ಕೂ ಅಪಾಯಕಾರಿ. ಅದು ಮುಂದಿನ ದಿನಗಳಲ್ಲಿ, ಹೊಸ ಆಲೋಚನೆಗಳಿಗೆ ತಲೆ ಒಡ್ಡುವ ತರುಣರನ್ನ್ನು ಕಟ್ಟಿ ಹಾಕಲು ಕಾರಣವಾಗಬಹುದು.

 ‘‘ಉಳಿದವರು ಕಂಡಂತೆ’ ಒಂದು ಕತೆಯಾಗಿ ಕೆಲವರಿಗೆ  ದಕ್ಕದಿರಬಹುದು. ಆದರೆ ಒಂದು ಸಿನಿಮಾ ಆಗಿ ನಿಮ್ಮ ಮನದಲ್ಲಿ ಖಂಡಿತವಾಗಿ ಉಳಿಯುತ್ತದೆ. ರಿಚ್ಚಿ, ಮುನ್ನಾ, ರಾಘು ಮತ್ತು ಬಾಲು ಇವರಂತೂ ಉಳಿದೇ ಉಳಿಯುತ್ತಾರೆ.ಅದ್ಭುತ ಛಾಯಾಗ್ರಹಣ, ಎದೆ ಮುಟ್ಟುವ ಹಿನ್ನೆಲೆ ಸಂಗೀತ ಚಿತ್ರವನ್ನು ನಿಮ್ಮ ಪಾಲಿಗೆ ಒಂದು ಹೊಸ ಅನುಭವವಾಗಿಸುತ್ತದೆ.  ಇಷ್ಟರ ಮಟ್ಟಿಗೆ ನಾನು ನಿಮಗೆ ಭರವಸೆ ನೀಡಬಲ್ಲೆ. 

10 comments:

  1. ಒಮ್ಮೆ ನೋಡಬೇಕು ಅನಸ್ತಿದೆ.

    ReplyDelete
  2. Feels very proud of course to see our kannada movies gaining strength by artist/directors coming up with whole new pattern of movies with a high standard. Movies like U.Kandante, Lucia, etc.. are educating the audience to a high standards!Kudos to Rakshit and his team. We will definitely watch and encourage others to watch also. All this proves, we do have lot talented kids in our Karnataka!

    ReplyDelete
  3. One of the best movie i have ever seen ....

    ReplyDelete
  4. This will definitely hit all AWARDS!!!!!!!!!!!!!!!!

    ReplyDelete
  5. Gandhi Nagarada dusta sanchugalinda haagu karavaliyetara patrakartara shadyantradinda adondu ketta cinema anta review barediddare, swatha patrakartanaagi bengalorenalliruva nanage idu chennagi gottu. nimma vastunista review ge danyavadagalu- Vageesh kumar G.A.

    ReplyDelete
  6. 'ಉಳಿದವರು ಕಂಡಂತೆ' ಒಳ್ಳೆಯ ಪ್ರಯತ್ನ. ಎಲ್ಲರೂ ಉತ್ತಮ ಅಭಿನಯ ನೀಡಿದ್ದಾರೆ. ಫೋಟೋಗ್ರಫಿ, ಸಂಗೀತ ತುಂಬಾ ಚೆನ್ನಗಿದೆ. ಆದರೆ, ಸಿನೆಮಾದ ಪ್ರತಿ ಫ್ರೆಮಿನಲ್ಲೂ ಸಿಗರೆಟ್ ಮತ್ತು ಬೀಡಿ ಹೊಗೆ ಸೇರಿಕೊಂಡು, ಬಹಳಷ್ಟು ಸಲ ಅನಿಸುತ್ತದೆ, ಇದು ಸಿಗರೆಟ್ ಕಂಪನಿಗಳ ಪ್ರಚಾರದ ಸಿನಿಮಾನಾ ಅಂತ!!!

    ReplyDelete
  7. ಕಥೆ ಹೇಗೆ ಹೇಳುವುದು ಅನ್ನುವುದರ ಬಗ್ಗೆ ನಮಗೆ ಪಾಠ ಬೇಡ. ಅದು ನಿಮ್ಮ ತಲೆನೋವು. ನಮಗೆ ಕಥೆಯನ್ನು ಚೆನ್ನಾಗಿ ಹೇಳಿದ್ದಾರೆ ಅನ್ನಿಸಿದರೆ ಅಸ್ಟೆ ಸಾಕು. ಈ ಸಿನೆಮ ಕನ್ನಡದಲ್ಲಿ ಉತ್ತಮ ಪ್ರಯತ್ನ ಅನ್ನಿಸುತ್ತದೆ. ಮುಂದಿನ ಸಿನಿಮಾ, 'ಈ ಸಿನೆಮಾ ತುಂಬಾ ಚೆನ್ನಾಗಿದೆ' ಅನ್ನಿಸುವಂತೆ ಬರಲಿ!

    ReplyDelete