Thursday, November 8, 2012

ಬಿಲ್ಲವರ ತಲೆಯ ಮೇಲೆ ಉಳ್ಳವರ ಪಾದ!

ಜನಾರ್ದನ ಪೂಜಾರಿ
(ಕಳೆದ ವಾರದ ‘ಮುಂಬಯಿ ಕನ್ನಡಿಗರು, ಕುದ್ರೋಳಿ ದೇವಸ್ಥಾನ ಮತ್ತು ವೈದಿಕ ಹುನ್ನಾರಗಳು’ ಬರಹದ ಮುಂದುವರಿದ ಭಾಗ)

ಪುರಾಣದ ಬಲಿಚಕ್ರವರ್ತಿಯ ದುರಂತ ಕತೆ ನಿಮಗೆ ಗೊತ್ತಿರಬಹುದು. ವಾಮನನೆಂಬ ಪುಟ್ಟ ವೈದಿಕನಿಗೆ ಮೂರು ಹೆಜ್ಜೆಗಳನ್ನು ಇಡಲು ಅವಕಾಶ ನೀಡಿದ್ದಕ್ಕಾಗಿ ಬಲಿಚಕ್ರವರ್ತಿ ತನ್ನ ರಾಜ್ಯ, ಸಂಪತ್ತು, ನೆಲೆ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗ ಬೇಕಾಯಿತು. ವೈದಿಕರಿಗೆ ಒಂದು ಹೆಜ್ಜೆಯನ್ನು ತಲೆಯ ಮೇಲೆ ಇಡಲು ಅವಕಾಶ ನೀಡಿದ ತಪ್ಪಿಗೆ ಇಂದಿಗೂ ಅಧಿಕಾರ, ನೆಲೆ, ವರ್ಚಸ್ಸು ಎಲ್ಲವನ್ನು ಕಳೆದುಕೊಂಡು ಬೀದಿಪಾಲಾಗಿರುವ ಕರಾವಳಿಯ ಬಲಿಚಕ್ರವರ್ತಿ ಜನಾರ್ದನ ಪೂಜಾರಿ. ಇಂದಿರಾ ಗಾಂಧಿಯ ಕಾಲದಲ್ಲಿ ಜನಾರ್ದನ ಪೂಜಾರಿಯವರು, ಹಣಕಾಸು ಸಚಿವರಾಗಿ ಮಾಡಿದ ಕ್ರಾಂತಿ ಇಂದಿಗೂ ನಾವು ನೆನಪು ಮಾಡಿಕೊಳ್ಳುವಂತಹದ್ದು. ಬಡವರು, ದೀನ ದಲಿತರಿಗೆ ಬ್ಯಾಂಕ್‌ನ ಬಾಗಿಲು ತೆರೆದುದು ಇದೇ ಜನಾರ್ದನ ಪೂಜಾರಿಯವರ ದೆಸೆಯಿಂದ. ಒಂದಿಷ್ಟು ದುರಹಂಕಾರಿ, ತುಸು ನಾಟಕೀಯ ವ್ಯಕ್ತಿ ಎಂದು ಬಿಂಬಿತಗೊಂಡಿದ್ದರೂ ಜನಾರ್ದನ ಪೂಜಾರಿ ಎಂದೂ ಭ್ರಷ್ಟರಾಗಿರಲಿಲ್ಲ. ಅವರ ಪ್ರಾಮಾಣಿ ಕತೆಯ ಕುರಿತಂತೆ ಅನುಮಾನ ಪಡಲು ಯಾವ ಕಾರಣಗಳೂ ಇಲ್ಲ. ‘ಸಾಲ ಮೇಳ’ ಮಾಡುವ ಮೂಲಕ ಬ್ಯಾಂಕ್‌ನ್ನು ಬಡವರಿಗೇನೋ ಅವರು ತೆರೆದುಕೊಟ್ಟರು. ಆದರೆ ಅದರಿಂದಾಗಿ ವ್ಯಾಪಕವಾಗಿ ಮೇಲ್ವರ್ಣೀಯ ಜನರ ವಿರೋಧವನ್ನು ಕಟ್ಟಿಕೊಂಡರು. ಯಾಕೆಂದರೆ ದೇಶದ ಬ್ಯಾಂಕ್ ತಿಜೋರಿಗಳ ಬೀಗದ ಕೈಗಳಿರುವುದು ಮೇಲ್ವರ್ಣೀಯರ ಬಳಿ. ಇತ್ತ ಸಾಲ ಪಡೆದು ಕೊಂಡವರೂ ಬರಕತ್ತಾಗಲಿಲ್ಲ. ದನ, ಎಮ್ಮೆಯನ್ನು ಕೊಂಡು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಲ್ಲಿ ವಿಫಲ ರಾದರು.ಜನರು ಇದರಿಂದ ಬ್ಯಾಂಕ್‌ನ ಸಾಲಗಾರರಾಗಬೇಕಾಯಿತು. ‘ಜನಾರ್ದನ ಪೂಜಾರಿ ಬಡವರನ್ನು ಸಾಲಗಾರರನ್ನಾಗಿ ಮಾಡಿದರು’ ಎಂದು ಬ್ಯಾಂಕಿನ ಮೆನೇಜರ್‌ಗಳಿಂದ ಹಿಡಿದು ಗುಮಾಸ್ತರವರೆಗೆ ಅಪಪ್ರಚಾರ ಮಾಡಿಕೊಂಡು ಓಡಾಡ ತೊಡಗಿದರು.ತನ್ನ ಸಮಾಜಕ್ಕೆ ಒಳಿತು ಮಾಡುವ ಅವರ ಆತುರದ ನಿರ್ಣಯಗಳೆಲ್ಲ ಅವರಿಗೇ ಕೊನೆಯಲ್ಲಿ ಮುಳುವಾಯಿತು. ಇಂತಹದೊಂದು ಆತುರದ ನಿರ್ಣಯವನ್ನು ಅವರು ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆಯೂ ತೆಗೆದು ಕೊಂಡರು.

ಕುದ್ರೋಳಿ ದೇವಸ್ಥಾನದ ಮರು ನವೀಕರಣ ಕಾಮಗಾರಿ ಕೆಲಸ ನಡೆದುದು ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ. ಅದನ್ನು ಕೇವಲ ಬಿಲ್ಲವರ, ಶೂದ್ರರ ದೇವಸ್ಥಾನ ಮಾತ್ರವಲ್ಲ ಎಲ್ಲರ ದೇವಸ್ಥಾನವಾಗಿ ಪರಿವರ್ತಿಸುತ್ತೇನೆ ಎಂದು ಅವರು ಹೊರಟರು. ಅದರ ಹಿಂದೆ ಅವರ ರಾಜಕೀಯ ದುರುದ್ದೇಶವೂ ಇತ್ತು. ‘ಎಲ್ಲರ ದೇವಸ್ಥಾನ’ ಎಂದರೆ, ಅದರ ಕೀಲಿಕೈಯನ್ನು ವೈದಿಕರ ಕೈಗೆ ಕೊಡುವುದು. ಹಾಗೆಂದು, ದೇವಸ್ಥಾನದ ಪುನರ್ನವೀಕರಣ ಕಾರ್ಯಕ್ರಮವನ್ನು ಶೃಂಗೇರಿ ಸ್ವಾಮೀಜಿಯ ಕೈಯಲ್ಲಿ ನೆರವೇರಿಸಲು ಅವರು ಮುಂದಾದರು. ಇದು ನಡೆದುದು ಸುಮಾರು 1989ರಲ್ಲಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮುಖ್ಯ ಅತಿಥಿ. ಶೃಂಗೇರಿ ಸ್ವಾಮೀಜಿಯನ್ನು ಕರೆಸುವ ಜನಾರ್ದನ ಪೂಜಾರಿಯ ನಿರ್ಧಾರಕ್ಕೆ ಬಿಲ್ಲವರೊಳಗೇ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮೇಲುಕೀಳುಗಳೆಂಬ ಭೇದವನ್ನು ಅಳಿಸುವುದಕ್ಕಾಗಿ ನಾರಾಯಣ ಗುರುಗಳು ಕುದ್ರೋಳಿ ದೇವಸ್ಥಾನದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಇದೀಗ ಮತ್ತೆ ಅದನ್ನು ವೈದಿಕ ಸ್ವಾಮೀಜಿಗಳ ಕೈಗೆ ಕುದ್ರೋಳಿ ದೇವಸ್ಥಾನವನ್ನು ಒಪ್ಪಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಹಲವರು ಎತ್ತಿದರು. ಮುಂಬಯಿಯ ಚಿಂತಕ ರವಿ. ರಾ. ಅಂಚನ್ ಪತ್ರಿಕೆಯಲ್ಲಿ ಬಹಿರಂಗ ಪತ್ರದ ಮೂಲಕ ಅದನ್ನು ಪ್ರಶ್ನಿಸಿದರೆ, ಮುಂಗಾರಿನಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಅಮೀನ್ ಮಟ್ಟು ಮೊದಲಾದವರು ಬಹಿರಂಗವಾಗಿ ಉಪವಾಸ ಕೂರುವ ಬೆದರಿಕೆ ಹಾಕಿದರು.ಆದರೆ ಈ ಆಕ್ರೋಶವನ್ನು ಕಾಲಲ್ಲಿ ತುಳಿದು, ಜನಾರ್ದನ ಪೂಜಾರಿ ಶೃಂಗೇರಿ ಸ್ವಾಮೀಜಿಯ ಪಾದಕ್ಕೆ ತನ್ನ ತಲೆಯನ್ನು ಒಪ್ಪಿಸಿದರು. ಕುದ್ರೋಳಿ ದೇವಸ್ಥಾನದ ಈ ನಿರ್ಣಯದಿಂದ ಅಸಮಾಧಾನಗೊಂಡು ನಾರಾಯಣ ಗುರುಗಳು ಸ್ಥಾಪಿಸಿದ ಶಿವಗಿರಿ ಪೀಠಸ್ಥ ಸ್ವಾಮೀಜಿಗಳು ಅಂದಿನ ಕಾರ್ಯಕ್ರಮ ವನ್ನು ಬಹಿಷ್ಕರಿಸಿದರು. ಮಾಜಿ ಹಿರಿಯ ಸ್ವಾಮೀಜಿಗಳು ಆ ಕಾರ್ಯಕ್ರಮಕ್ಕೆ ಆಗಮಿಸ ಬೇಕಾಯಿತು.ನಡೆದದ್ದು ಇಷ್ಟೇ ಅಲ್ಲ.ಮೊದಲ ಬಾರಿ ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಅಷ್ಟಮಂಗಲ ಪ್ರಶ್ನೆಯನ್ನು ಇಡಲಾಯಿತು. ಮತ್ತು ದೇವಸ್ಥಾನದ ಮುಂಭಾಗದಲ್ಲಿ ವಿಷ್ಣು ದೇವರನ್ನು ಪ್ರತಿಷ್ಠಾಪಿಸಬೇಕು ಎಂದು ವೈದಿಕ ಮುಖಂಡರು ತಿಳಿಸಿದರು. ಅಂತೆಯೇ ಕುದ್ರೋಳಿ ದೇವಸ್ಥಾನದಲ್ಲಿ ನಾರಾಯಣ ಗುರುಗಳ ಆಶಯದ ವಿರುದ್ಧ ಶ್ರೀಕೃಷ್ಣ ದೇವರನ್ನು ಬಾಗಿಲ ಬಳಿ ಪ್ರತಿಷ್ಠಾಪಿಸ ಲಾಯಿತು. ಇದೀಗ ಕೃಷ್ಣನಿಗೆ ಕೈ ಮುಗಿದೇ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಶಿವಲಿಂಗದತ್ತ ಭಕ್ತರು ಮುಂದುವರಿಯಬೇಕು. ಇಂತಹದೊಂದು ಸ್ಥಿತಿಯನ್ನು ಬಿಲ್ಲವ ಶೂದ್ರರಿಗೆ ನಿರ್ಮಾಣ ಮಾಡಿಕೊಟ್ಟವರು ಜನಾರ್ದನ ಪೂಜಾರಿ.

ಇತ್ತ ಕುದ್ರೋಳಿ ದೇವಸ್ಥಾನ ಪುನರ್‌ನವೀಕರಣಕ್ಕೆ ಶೃಂಗೇರಿ ಸ್ವಾಮೀಜಿಯೇನೋ ಒಪ್ಪಿದ್ದರು. ಆದರೆ, ಅವರು ಹಲವು ನಿಂಬಂಧನೆಗಳನ್ನು ಹಾಕಿದ್ದರು. ಅದರಲ್ಲಿ ಮುಖ್ಯ ವಾದುದು, ತಾನು ಮತ್ತು ತನ್ನ ಶಿಷ್ಯರು ಅಭಿಷೇಕ ಮಾಡಿದ ಬಳಿಕವಷ್ಟೇ ಉಳಿದವರು ಪ್ರವೇಶಿಸ ಬಹುದು. ಆದನ್ನು ಯಥಾವತ್ ಪಾಲಿಸಲಾಯಿತು.ಸ್ವಾಮೀಜಿಗಳು ಮತ್ತು ಶಿಷ್ಯರಿರುವ ಕಟ್ಟಡಕ್ಕೆ ಯಾವ ಬಿಲ್ಲವರಿಗೂ ಪ್ರವೇಶವಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಶೃಂಗೇರಿ ಸ್ವಾಮೀಜಿಗಳು ಹಾರಾರ್ಪಣೆ ಮಾಡಲಿಲ್ಲ. ಖುದ್ದು ರಾಜೀವ್ ಗಾಂಧಿ ಆಹ್ವಾನಿಸಿದಾಗಲೂ, ಔಪಚಾರಿಕವಾಗಿ ನಾರಾಯಣ ಗುರುಗಳನ್ನು ಗೌರವಿಸಲೂ ಶೃಂಗೇರಿ ಸ್ವಾಮೀಜಿಗಳು ಸಿದ್ಧರಿರಲಿಲ್ಲ.ಮೇಲು ಕೀಳುಗಳೆಂಬ ಭೇದವನ್ನು ಅಳಿಸಿ, ಎಲ್ಲ ಭಕ್ತರು ದೇವರಿಗೆ ಒಂದೇ ಎಂಬ ಆಶಯದಿಂದ ನಾರಾಯಣ ಗುರುಗಳು ದೇವಸ್ಥಾನವನ್ನು ಕಟ್ಟಿದರೆ, 1989ರಲ್ಲಿ ಅದರೊಳಗೆ ವೈದಿಕರು ಪ್ರವೇಶಿಸುವುದಕ್ಕೆ ಸ್ವತಃ ಜನಾರ್ದನ ಪೂಜಾರಿಯೇ ಕಾರಣರಾದರು. ನಿಧಾನಕ್ಕೆ ಕುದ್ರೋಳಿಯ ಹಿಡಿತ ಬಿಲ್ಲವರ ಕೈ ತಪ್ಪಿತು. ಹೆಸರಿಗಷ್ಟೇ ಜನಾರ್ದನ ಪೂಜಾರಿ ಅದರ ನೇತೃತ್ವವನ್ನು ವಹಿಸಿಕೊಂಡಿದ್ದರೂ, ಒಳಗಿಂದ ಸಂಘಪರಿವಾರ ಅದರ ಲಾಭಗಳನ್ನು ತನ್ನದಾಗಿಸಿಕೊಳ್ಳತೊಡಗಿತು. ಕುದ್ರೋಳಿ ದಸರಾ ಪ್ರತಿ ವರ್ಷ ನಡೆಯುತ್ತಿತ್ತಾದರೂ ಇಡೀ ಮಂಗಳೂರು ಕೇಸರಿ ಬಾವುಟಗಳ ಆವಾಸಸ್ಥಾನ ವಾಗುತ್ತಿತ್ತು.

ಕುದ್ರೋಳಿ ದೇವಸ್ಥಾನವನ್ನು ಹೊರಗಿನಿಂದ ವೈದಿಕರು, ಸಂಘ ಪರಿವಾರ ನಿಯಂತ್ರಿಸತೊಡಗಿದಂತೆ, ಬಿಲ್ಲವ ಹುಡುಗರು ನಿಧಾನಕ್ಕೆ ಸಂಘ ಪರಿವಾರದ ಪಾಲಾಗತೊಡಗಿದರು. ಪ್ರತಿ ಚುನಾವಣೆಯಲ್ಲೂ ಜನಾರ್ದನ ಪೂಜಾರಿಗೆ ಸೋಲೇ ಗತಿಯಾಯಿತು. ಬಹುಸಂಖ್ಯಾತ ಬಿಲ್ಲವರಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದಬಾರಿ ಸುಮಾರು 40 ಸಾವಿರಕ್ಕೂ ಅಧಿಕ ಮತಗಳಿಂದ ಜನಾರ್ದನ ಪೂಜಾರಿ ಸೋತರು. ಇಂದು ಸಂಘಪರಿವಾರ ಬಿಲ್ಲವ ತರುಣರನ್ನು ಕರಾವಳಿಯಲ್ಲಿ ತನ್ನ ಕಾಲಾಳುಗಳಾಗಿ ಬಳಸುತ್ತಿದೆ. ಇಷ್ಟು ಪ್ರಬಲವಾದ ಸಮುದಾಯ, ರಾಜಕೀಯವಾಗಿ ಸಂಪೂರ್ಣವಾಗಿ ಸೋತು ನೆಲಕಚ್ಚಿದೆ. ಒಂದು ಕಾಲದಲ್ಲಿ ಇಬ್ಬರು ಲೋಕಸಭಾ ಸದಸ್ಯರು ಸೇರಿದಂತೆ ಏಳು ಮಂದಿ ಬಿಲ್ಲವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರು. ಈಗ ನೋಡಿದರೆ  ಈ ಸಮುದಾಯವನ್ನು ಪ್ರತಿನಿಧಿಸುವ ಒಬ್ಬನೇ ಒಬ್ಬ ಸಚಿವ ದ.ಕ.ಜಿಲ್ಲೆಯಲ್ಲಿಲ್ಲ. ಬಿಲ್ಲವ ಮುಖಂಡರು ತಲೆಯೆತ್ತುತ್ತಾರೆಂದಾಕ್ಷಣ ಅವರನ್ನು ಬಿಲ್ಲವರ ಕೈಯಿಂದಲೇ ಸಂಘ ಪರಿವಾರ ಬಗ್ಗುಬಡಿಯುತ್ತಿದೆ. ಸುನೀಲ್ ಕುಮಾರ್, ರುಕ್ಮಯ ಪೂಜಾರಿ ಸೇರಿದಂತೆ ಹಲವು ನಾಯಕರನ್ನು ಬಿಜೆಪಿ ಬಳಸಿ ಎಸೆಯುತ್ತಿದೆ. ಇತ್ತೀಚೆಗೆ ಅನಿವಾರ್ಯ ಎನ್ನುವ ಹೊತ್ತಿನಲ್ಲಿ ಉಡುಪಿಯ ಕೋಟಾ ಶ್ರೀನಿವಾಸ ಪೂಜಾರಿಗೆ ಒಂದು ಸಚಿವ ಸ್ಥಾನ ಸಿಕ್ಕಿತು. ಅದೂ ಮುಜರಾಯಿ ಇಲಾಖೆ.ಆ ಇಲಾಖೆಯ ಮೂಲಕ ಶ್ರೀನಿವಾಸ ಪೂಜಾರಿಯವರು ವೈದಿಕರ ಚಾಕರಿಯನ್ನೇ ಮಾಡುತ್ತಿದ್ದಾರೆ. ಬಿಲ್ಲವ ಸಮುದಾಯಕ್ಕೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಇತ್ತ ಬಹುಸಂಖ್ಯೆಯ ಬಿಲ್ಲವ ಯುವಕರು ಕೋಮುಗಲಭೆಗಳಲ್ಲಿ ಭಾಗವಹಿಸಿ ಆರೋಪಿಗಳಾಗಿ ಜೈಲು, ಕೋರ್ಟು ಎಂದು ಅಲೆಯುತ್ತಿದ್ದಾರೆ.

ಇದೆಲ್ಲದಕ್ಕೂ ಪರೋಕ್ಷವಾಗಿ ಜನಾರ್ದನ ಪೂಜಾರಿಯವರೇ ಕಾರಣರಾಗಿದ್ದಾರೆ. ಈ ಸತ್ಯವನ್ನು ಅವರು ನಿಧಾನಕ್ಕಾದರೂ ಅರ್ಥ ಮಾಡಿಕೊಂಡಂತಿದೆ. ಇದರ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕುದ್ರೋಳಿ ದಸರಾ ಸಂದರ್ಭದಲ್ಲಿ ಕೇಸರಿ ಬಾವುಟವನ್ನು ಹಾರಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ನಾರಾಯಣಗುರುಗಳನ್ನು ಮುಂದಿಟ್ಟುಕೊಂಡು, ಹಳದಿ ಬಾವುಟ ನಿಧಾನಕ್ಕೆ ರಾರಾಜಿಸ ತೊಡಗಿದೆ. ಆದರೆ ಅದರಿಂದಷ್ಟೇ ಜನಾರ್ದನ ಪೂಜಾರಿಯವರ ಅಥವಾ ಬಿಲ್ಲವ ಮುಖಂಡರ ಕರ್ತವ್ಯ ಮುಗಿಯುವುದಿಲ್ಲ. ರಾಜಕೀಯವಾಗಿ ಸಂಪೂರ್ಣ ಹತಾಶ ಸ್ಥಿತಿಯಲ್ಲಿರುವ ಬಿಲ್ಲವರನ್ನು ಮತ್ತೆ ತಲೆಯೆತ್ತಿ ನಿಲ್ಲಿಸುವ ಕೆಲಸ ಜನಾರ್ದನ ಪೂಜಾರಿಯವರ ಹೊಣೆಯಾಗಿದೆ. ಈ ಕಾರಣಕ್ಕಾಗಿ ಜನಾರ್ದನ ಪೂಜಾರಿಯವರು ಮಾಡಬೇಕಾದ ಮೊದಲ ಕೆಲಸ, ರಾಜಕೀಯದಿಂದ ದೂರ ಸರಿಯುವುದು. ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದು. ಕಾಂಗ್ರೆಸ್ ವರಿಷ್ಠರು ಜನಾರ್ದನ ಪೂಜಾರಿಗೆ ಮಾಡಬೇಕಾದ ಅತಿ ದೊಡ್ಡ ಉಪಕಾರವೆಂದರೆ ಅವರಿಗೆ ಟಿಕೆಟ್ ಕೊಡದೇ ಇರುವುದು. ಹಾಗೆಯೇ ಒಂದಾನೊಂದು ಕಾಲದಲ್ಲಿ ಪೂಜಾರಿ ಕರಾವಳಿಯಲ್ಲಿ ಕಾಂಗ್ರೆಸ್‌ನ್ನು ಕಟ್ಟಿ ಬೆಳೆಸಿದವರು. ಸಾಧ್ಯವಾದರೆ ಅವರಿಗೆ ಯಾವುದಾದರೂ ಉನ್ನತ ಹುದ್ದೆಯನ್ನು ನೀಡಬೇಕಾಗಿದೆ. ಕನಿಷ್ಠ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಮಾಡಿದರೂ ಸರಿಯೇ. ಆಸ್ಕರ್‌ರಂತಹ ನಾಯಕರು ದಿಲ್ಲಿಯಲ್ಲಿ ನಿರಾಯಾಸವಾಗಿ ಅಧಿಕಾರ ಅನುಭವಿಸುತ್ತಿರುವಾಗ, ಇಂದಿರಾಗಾಂಧಿಯ ಕಾಲದಿಂದಲೇ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಗುರುತಿಸಿಕೊಂಡ ಜನಾರ್ದನ ಪೂಜಾರಿಯನ್ನು ವರಿಷ್ಠರು ಕೈ ಬಿಡಬಾರದು. ಯಾವುದೂ ಸಾಧ್ಯವಿಲ್ಲವೆಂದಾದರೆ ಹಿಂದಿನಂತೆ, ರಾಜ್ಯಸಭಾ ಸದಸ್ಯರನ್ನಾಗಿಯಾದರೂ ಮಾಡಬೇಕು.

ಇದೇ ಸಂದರ್ಭದಲ್ಲಿ, ಮುಖ್ಯವಾಹಿನಿಯಿಂದ ದೂರ ಸರಿದು, ಕಲ್ಲಡ್ಕ ಪ್ರಭಾಕರ ಭಟ್ಟರ ಚಾಕರಿ ಮಾಡುತ್ತಾ, ಕ್ರಿಮಿನಲ್ ಹಣೆಪಟ್ಟಿ ಹೊತ್ತುಕೊಂಡು ತಿರುಗಾಡುತ್ತಿರುವ ಬಿಲ್ಲವ ತರುಣರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು, ಅವರನ್ನು ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಮುನ್ನಡೆಸುವುದು ಪೂಜಾರಿಯ ಕರ್ತವ್ಯವಾಗಿದೆ. ಇತ್ತೀಚೆಗೆ ಪೂಜಾರಿಯವರು ವಿಧವೆ ಮಹಿಳೆಯರ ಕೈಯಲ್ಲಿ ರಥವನ್ನು ಎಳೆಸಿ, ಪೂಜೆಯನ್ನು ಮಾಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದರು. ಇದು ನಿಜಕ್ಕೂ ನಾರಾಯಣಗುರುಗಳು ಮೆಚ್ಚುವ ಕೆಲಸ. ಇದನ್ನು ರಾಜಕೀಯ ಕಾರಣಕ್ಕಾಗಿ ಮಾಡದೆ, ಕನಿಷ್ಠ ತನ್ನ ಸಮುದಾಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಜನಾರ್ದನ ಪೂಜಾರಿಯವರು ಮಾಡಬೇಕಾಗಿದೆ.ಬಿಲ್ಲವ ತರುಣರಿಗೆ, ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಪರಿಚಯವನ್ನು ಮಾಡಿಸುವ ಕೆಲಸವೂ ಅವರಿಂದಲೇ ಆಗಬೇಕಾಗಿದೆ. ಅವರ ಕ್ರಾಂತಿ ಸಂದೇಶವನ್ನು ಕೇವಲ ಬಿಲ್ಲವರಲ್ಲಿ ಮಾತ್ರವಲ್ಲ, ಕರಾವಳಿಯ ಎಲ್ಲ ತರುಣರ ಎದೆಯಲ್ಲಿ ಬಿತ್ತುವ ಕೆಲಸ ನಡೆಯಬೇಕಾಗಿದೆ. ಕುದ್ರೋಳಿ ದೇವಸ್ಥಾನದ ವತಿಯಿಂದಲೇ ನಾರಾಯಣ ಗುರುಗಳ ಬದುಕು, ಆಶಯಗಳನ್ನು ತಿಳಿಸಿಕೊಡುವ ಸಣ್ಣಪುಟ್ಟ ಕೃತಿಗಳನ್ನು ಹೊರತರಬೇಕು. ಅಥವಾ ಇದಕ್ಕಾಗಿ ಪ್ರತ್ಯೇಕವಾದ ಒಂದು ಪ್ರತಿಷ್ಠಾನವನ್ನು ಮಾಡಿದರೂ ಆದೀತು.

ಮುಂಬಯಿಯಂತಹ ಶಹರದಲ್ಲಿ ಬಿಲ್ಲವರು ಸಂಘಟಿತರಾಗಿ ಶಾಲೆಗಳನ್ನು ಬ್ಯಾಂಕುಗಳನ್ನು, ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಅದು ಮಂಗಳೂರಿನ, ಉಡುಪಿಯ ಬಿಲ್ಲವರಿಗೂ ಸಾಧ್ಯವಾಗಬೇಕು. ಮುಂಬಯಿ ಬಿಲ್ಲವರ ಸಾಧನೆ ಯಾರ ಭಿಕ್ಷೆಯೂ ಅಲ್ಲ. ನಾರಾಯಣ ಗುರುಗಳ ಮಾಗದರ್ಶನದಲ್ಲಿ ಸಂಘಟಿತರಾದುದರಿಂದ ಈ ಅಭಿವೃದ್ಧಿ ಸಾಧಿಸುವುದಕ್ಕೆ ಬಿಲ್ಲವರಿಗೆ ಸಾಧ್ಯವಾಯಿತು.  ಇದೀಗ ಪ್ರಭಾಕರ ಭಟ್ಟರ ದಂಡು ಮುಂಬಯಿಗೆ ತೆರಳಿ, ಅಲ್ಲಿನ ಬಿಲ್ಲವರು, ಬಂಟರಿಂದ ‘ಭಾರತ ಭಾರತಿ’ ಸಮ್ಮೇಳನದ ಹೆಸರಿನಲ್ಲಿ ಅನಧಿಕೃತವಾಗಿ ಸುಮಾರು ಎರಡು ಕೋಟಿ ರೂಪಾಯಿಯಷ್ಟು ಕಪ್ಪ ವಸೂಲು ಮಾಡಿಕೊಂಡು ಬಂದಿದೆ. ಪ್ರಭಾಕರ ಭಟ್ಟರ ಬಳಗ ಮುಂಬಯಿ ಕನ್ನಡಿಗರಿಂದ ಹಫ್ತಾ ವಸೂಲು ಮಾಡಿಕೊಂಡು ಬಂದಿರುವ ಸಂಗತಿ, ಇದೀಗ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಇಲ್ಲಿ ಗುಟ್ಟೆಂಬುದು ಉಳಿದೇ ಇಲ್ಲ.ಮುಂಬಯಿ ಕನ್ನಡಿಗರು ತಾವು ಕಟ್ಟಿ ಬೆಳೆಸಿದ ಭವ್ಯ ನಿರ್ಮಾಣಕ್ಕೆ, ಹೊರಗಿನ ಹಾವುಗಳನ್ನು ಯಾವ ಕಾರಣಕ್ಕೂ ನುಸುಳಲು ಬಿಡಬಾರದು. ಒಮ್ಮೆ ನುಸುಳಲು ಬಿಟ್ಟರೆ, ಅದರೊಳಗಿರುವ ನಿಜವಾದ ಕನ್ನಡಿಗರೆಲ್ಲ ಹೊರಬರುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಆದುದರಿಂದ, ಇಂತಹ ಕ್ಷುದ್ರ ರಾಜಕೀಯ ಕೀಟಗಳಿಂದ ಮುಂಬಯಿ ಕನ್ನಡ ಸಂಸ್ಕೃತಿಯನ್ನು ರಕ್ಷಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ.

ಅಭಿವೃದ್ಧಿ ಮತ್ತು ಸೌಹಾರ್ದ ಒಂದೇ ನಾಣ್ಯದ ಎರಡು ಮುಖಗಳು. ಬಿಲ್ಲವರು, ಬಂಟರು, ಮೊಗವೀರರು  ಮತ್ತು ಬ್ಯಾರಿಗಳು ಜೊತೆಗೂಡದೆ ತುಳುನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ತುಳುನಾಡಿಗೆ ವೈದಿಕರು ಕಾಲಿಡುವ ವೊದಲಿನ ಉಚ್ಛ್ರಾಯ ದಿನಗಳನ್ನು ಇವರೆಲ್ಲ ನೆನೆದುಕೊಳ್ಳಬೇಕಾಗಿದೆ.ಅಬ್ಬಕ್ಕರಾಣಿಯ ಸೇನಾಪಡೆಯಲ್ಲಿ ಒಂದಾಗಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ದಿನಗಳನ್ನು ಸ್ಮರಿಸಬೇಕಾಗಿದೆ. ಬಪ್ಪಬ್ಯಾರಿಯ ಸೌಹಾರ್ದ ಕನಸುಗಳಿಗೆ ನೀರೆರೆಯಬೇಕಾಗಿದೆ.ಎಣ್ಮೂರು, ಪಂಜ, ಉಳ್ಳಾಲ ಹೀಗೆ ಎಲ್ಲಿ ನೋಡಿದರಲ್ಲಿ ಈ ಎಲ್ಲ ಸಮುದಾಯಗಳ ಕೊಡುಕೊಳ್ಳುವಿಕೆಯೇ ಕಾಣ ಸಿಗುತ್ತದೆ. ಇವರೆಲ್ಲ ಒಂದಾಗಿಲ್ಲದ ತುಳುನಾಡನ್ನು ಕಲ್ಪಿಸಲೂ ಸಾಧ್ಯವಿಲ್ಲ. ಅದನ್ನು ಒಂದಾಗಿಸುವ ಭಾಗವಾಗಿ, ಕಳಚಿಕೊಂಡ ಬಹುಮುಖ್ಯ ಕೊಂಡಿ, ಬಿಲ್ಲವರನ್ನು ಮತ್ತೆ ಜೋಡಿಸುವ ಕೆಲಸ ಕುದ್ರೋಳಿ ದೇವಸ್ಥಾನದಿಂದಲೇ ಆರಂಭವಾಗಬೇಕಾಗಿದೆ. ಈ ಮೂಲಕ ಕರಾವಳಿಯಾದ್ಯಂತ ನಾರಾಯಣ ಗುರುಗಳ ಹಳದಿ ಧ್ವಜ ಹಾರಾಡಬೇಕಾಗಿದೆ.

8 comments:

  1. ಒಬ್ಬ ಬಿಲ್ಲವನಾಗಿ ಕೆಲವು ಅಂಶಗಳ ನ್ನು ಖಂಡಿತ ಒಪ್ಪುತ್ತೇನೆ . ನಾರಾಯಣ ಗುರುಗಳ ಆದರ್ಶ ಇಂದು ಕೇವಲ ಹಾರಿಕೆಯ ಮಾತಾಗಿದೆ.

    ReplyDelete
  2. ಶಿವಕುಮಾರNovember 8, 2012 at 2:38 AM

    ಈಗಿನ ಬಿ.ಜೆ.ಪಿ. ಎಂ.ಪಿ. ಕೂಡ ಬಿಲ್ಲವರೇ ಅಲ್ಲವಾ? ಅಂದಮೇಲೆ.... ?

    ReplyDelete
  3. ಶಿವಕುಮಾರNovember 8, 2012 at 2:41 AM

    ಬರಹದ ತುಂಬಾ ಎಲ್ಲಾರನ್ನೂ ವೈದಿಕರ ವಿರುದ್ಧ ಎತ್ತಿಕಟ್ಟು ಹುನ್ನಾರವೇ ಇದೆ ಹೊರತು ಸೌಹಾರ್ದತೆ ಇಲ್ಲ. ಮತ್ತು ಸಂಘಪರಿವಾರದ ಬಗ್ಗೆ ನಿಮ್ಮ ವಿರೋಧೀ ಧೋರಣೆ ಇದೆ.

    ReplyDelete
  4. "BOMB is in Right Place" good.... really good.

    ReplyDelete
  5. ಬಶೀರರ ಮಾತು ಕೇಳಿದರೆ ಅಷ್ಟೇ ...... ಪಡ್ಚ

    ReplyDelete
  6. ನಿಜ ನಾರಾಯಣ ಗುರುಗಳ ಒಂದೇ ಜಾತಿ....ಒಂದೆ ಮತ.....ಒಂದೇ ದೈವ...ಮನುಜ ಮತದ ಪ್ರತಿಪಾದನೆಯನ್ನು ಮತ್ತೆ ನಾಗರೀಕ ಪ್ರಪಂಚಕ್ಕೆ ಬಿತ್ತಿ ತೋರಿಸಬೇಕಾದ ಅನಿವಾರ್ಯತೆ ಪ್ರಸಕ್ತ ಕಾಲಘಟ್ಟದಲ್ಲಿ ಎದ್ದು ಕಾಣುತ್ತಿದೆ. ಇದು ಕೇವಲ ಬಿಲ್ಲವರಿಂದ ಮಾತ್ರವಲ್ಲ...ಹಿಂದುಳಿದ ವರ್ಗದ ಎಲ್ಲರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಾರಾಯಣ ಗುರುಗಳ ಆಶಯಗಳನ್ನು ಪಾಲಿಸಬೇಕಾಗಿದೆ.

    ReplyDelete
  7. EE lekhandha uddeshsha billavarannu sangha privaradha virrudha kattalu. Naanu sangha alla. Sangha privaradha viruddhi galu shri Basheer ravarannu bahala chanakya dhindha upayohisidsnthe kaanuthadhe.

    ReplyDelete
  8. EE lekhandha uddeshsha billavarannu sangha privaradha virrudha kattalu. Naanu sangha alla. Sangha privaradha viruddhi galu shri Basheer ravarannu bahala chanakya dhindha upayohisidsnthe kaanuthadhe.

    ReplyDelete