Saturday, November 17, 2012

ಮನುಷ್ಯತ್ವ ಮತ್ತು ಇತರ ಕತೆಗಳು

 ಮಾತು
‘‘ಮಾತನಾಡುವುದನ್ನು ಬೇಗ ಮಾತನಾಡಿ ಮುಗಿಸು...ನನ್ನಲ್ಲಿ ಕರೆನ್ಸಿ ತುಂಬಾ ಕಡಿಮೆ ಇದೆ...’’ ಆ ಕಡೆಯಿಂದ ಗೆಳೆಯ ಹೇಳುತ್ತಿದ್ದ.
‘‘ಮುಗಿಸುವುದಕ್ಕಿರುವ ಮಾತುಗಳನ್ನು ಆಡದೇ ಇರುವುದೇ ಒಳ್ಳೆಯದು’’ ಈ ಕಡೆಯಿಂದ ಗೆಳೆಯ ಮಾತನಾಡಿ ಮುಗಿಸಿದ.

ವ್ಯಾಪಾರ
ಅದು ಸುಡುವ ಬಿಸಿಲಿನ ದಿನಗಳು.
ಒಬ್ಬ ಮರದಡಿಯಲ್ಲಿ ಬೋರ್ಡ್ ಹಾಕಿ ಕುಳಿತಿದ್ದ.
‘‘ಇಲ್ಲಿ ನೆರಳನ್ನು ಮಾರಲಾಗುತ್ತದೆ. ಒಂದು ಗಂಟೆಯ ನೆರಳಿಗೆ ನೂರು ರೂ.’’

ಜೇನು
ನಾಳೆಗಿರಲಿ ಎಂದು ನೊಣಗಳು ಜೇನು ಸಂಗ್ರಹಿಸಿದವು.
ಮನುಷ್ಯ ಅದನ್ನು ದೋಚಿ ಅವುಗಳಿಗೆ ಬುದ್ಧಿ ಹೇಳಿದ ‘‘ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ’’

ಮರ
ನೂರಾರು ವರ್ಷ ಬಾಳಿ ಬದುಕಿದ್ದ ಬೃಹತ್ ಮರವೊಂದು ಉರುಳಿ ಬಿತ್ತು.
‘‘ಗುರುಗಳೇ ಪುರಾತನ ಮರ ಬಿದ್ದು ಬಿಟ್ಟಿತು’ ಮರುಕದಿಂದ ಶಿಷ್ಯರು ಹೇಳಿದರು.
ಸಂತ ಖೇದದಿಂದ ಉತ್ತರಿಸಿದ ‘‘ನನಗೆ ದುಃಖ ಆ ಮರದ ಬಗ್ಗೆಯಲ್ಲ. ಅದರ ಸುತ್ತಮುತ್ತ ಹಲವು ಸಣ್ಣು ಪುಟ್ಟ ಗಿಡಗಳು ಮರವಾಗುವ ಕನಸು ಕಾಣುತ್ತಿದ್ದವು. ಪುರಾತನ ಮರ ಅವುಗಳ ಮೇಲೆಯೇ ಬಿದ್ದು ಬಿಟ್ಟಿತು’’

ಗೆಳೆಯರು
‘‘ನನಗೆ ಜಾತಿ, ಧರ್ಮ ಇತ್ಯಾದಿಗಳಲ್ಲಿ ನಂಬಿಕೆಯಿಲ್ಲ. ನನಗೆ ಮುಸ್ಲಿಮ್ ಗೆಳೆಯರಿದ್ದಾರೆ, ಕ್ರಿಶ್ಚಿಯನ್ ಗೆಳೆಯರಿದ್ದಾರೆ, ಹಿಂದೂ ಗೆಳೆಯರಿದ್ದಾರೆ, ಬ್ರಾಹ್ಮಣ ಗೆಳೆಯರಿದ್ದಾರೆ, ದಲಿತ ಗೆಳೆಯರಿದ್ದಾರೆ...’’ ಅವನು ಹೇಳಿದ.
‘‘ಹೌದಾ? ನನಗೆ ಬರೇ ಗೆಳೆಯರು ಮಾತ್ರ ಇದ್ದಾರೆ’’ ಇವನು ಉತ್ತರಿಸಿದ.


ಸೆಕೆ
‘ಯಾಕೋ ಒಡಲು ಉರಿಯುವಂತೆ ವಿಪರೀತ ಸೆೆಕೆ...ಯಾಕಿರಬಹುದು...?’
ಅವನು ಕೇಳಿದ.
‘ಬಹುಶಃ ಮಳೆಯಾಗುವ ಸೂಚನೆಯದು.. ಸಹನೆಯಿರಲಿ.’ ಇವನು ಸಂತೈಸಿದ.

ಕುಡುಕ
‘‘ಸಾರ್...ನನ್ನ ಕಿಡ್ನಿ ಮಾರ್ತಾ ಇದ್ದೇನೆ....ತಗೋತೀರಾ ಸಾರ್?’’
‘‘ಯಾಕೆ ಅಷ್ಟು ಹಣದ ಅಗತ್ಯ?’’
‘‘ಕುಡಿಯೋದಕ್ಕೆ ಹಣ ಬೇಕಾಗಿದೆ ಸಾರ್...ಹೇಗೂ ಕುಡಿದ್ರೆ ಕಿಡ್ನಿ ಹೋಗುತ್ತೆ ಅಂತ ಹೇಳ್ತಾರೆ...ಅದಕ್ಕೆ ಮೊದಲೇ ಅದನ್ನು ಮಾರಿ ಕುಡಿಯೋಣ ಅಂತ ಸಾರ್...’’

ಮನುಷ್ಯತ್ವ
‘‘ಅಮ್ಮಾ ನಿಮ್ಮ ಮಗನಿಗೆ ಅರ್ಜಂಟಾಗಿ ಆಪರೇಷನ್ ಮಾಡಬೇಕಾಗಿದೆ. ಹತ್ತು ಲಕ್ಷ ರೂ. ತೆಗೊಂಡು ಬಾ...’’
‘‘ಅಷ್ಟು ಹಣ ನನ್ನಲ್ಲಿ ಇಲ್ಲ ಕಣಪ್ಪ...’’
‘‘ಸರಿ ಹಾಗಾದ್ರೆ...ಮಾತ್ರೆ ಬರ್ದುಕೊಡ್ತೀನಿ...ನಿನ್ನ ಮಗನ್ನ ಕರ್ಕೊಂಡು ಹೋಗು’’
‘‘ಹಾಗಾದ್ರೆ ಆಪರೇಷನ್...’’
‘‘ಅದಕ್ಕೆ ಬೇರೆ ಪೇಷಂಟನ್ನು ನೋಡ್ಕೋತೀನಿ...ನಮಗೂ ಮನುಷ್ಯತ್ವ ಅನ್ನೋದು ಇದೆ...’’

1 comment: