Wednesday, July 1, 2015

ಒಂದಿಷ್ಟು ಹೊಳೆದದ್ದು

1
ತನ್ನ ಆರರ ಹರಯದ 
ಮಗುವಿನ ಮನಸು, ಕನಸುಗಳಿಗೆ 
ಸ್ಪಂದಿಸದ ತಾಯಿ 
ಊರಿಡೀ ಪಾಯಸ ಹಂಚಿದರೇನು ?
ಅದರಲ್ಲಿ ಉಪ್ಪೇ ಇರಲಿಲ್ಲ !
2
ಮನೆಯೊಳಗೆ 
ತಂಗಿ-ತಾಯಿಯ ಜೊತೆ 
ಮೆದು ಮಾತನಾಡಲು 
ಅರಿಯದಾತನ 
ಸಿಹಿ ಮಾತುಗಳ ನಾನು ಹೇಗೆ ನಂಬಲಿ? 
3
ಹಿತ್ತಿಲಲ್ಲಿ ಗುಡ್ಡೆ ಬಿದ್ದು 
ನಾರುತ್ತಿರುವ ಉಪದೇಶಗಳ ಗೊಬ್ಬರ 
ಬಿತ್ತೂದಕ್ಕೆ ಬೀಜವಿಲ್ಲ, 
ಉಳೂದಕ್ಕೆ ಗದ್ದೆಯಿಲ್ಲ
4
ಮೇಲೇರೂದಕ್ಕೆ ಹೆದರುತ್ತಾ 
ಒಂದೊಂದೇ ಮೆಟ್ಟಿಲೇರಿ 
ತುದಿ ತಲುಪಿದವನಿಗೆ 
ನೆಲ ನೋಡೂದಕ್ಕೀಗ ಭಯ !

Tuesday, June 30, 2015

ಪ್ರೇಮ ಎನ್ನುವ ವಿಸ್ಮಯ!

ಈ ಜಗತ್ತಿನ ಅತ್ಯಂತ ವಿಸ್ಮಯ ಯಾವುದು? ಎಂಬ ಪ್ರಶ್ನೆಗೆ ನಿಸ್ಸಂಶಯವಾಗಿ ಉತ್ತರಿಸಬಹುದು, ಅದು ಪ್ರೇಮ!
ದೇವರ ಎಲ್ಲಾ ಸೃಷ್ಟಿಗಳೂ ಅರ್ಥಪೂರ್ಣತೆಯನ್ನು ಪಡೆದುಕೊಳ್ಳುವುದು ಪ್ರೇಮದಿಂದ. ಕಡಲನ್ನು ಸೇರಲು ತಹತಹಿಸುತ್ತಾ ಓಡುವ ನದಿಗಳು, ನದಿಗಳನ್ನು ಸೇರಲು ತಹತಹಿಸುವ ತೊರೆಗಳು, ಮುಗಿಲ ಮೋಡವಾಗಲು ಹಂಬಲಿಸುವ ಕಡಲು, ಭೂಮಿಯನ್ನು ಸೇರಲು ತವಕಿಸುವ ಮಳೆ...ಈ ಎಲ್ಲ ಪ್ರಕ್ರಿಯೆಗಳು ಪ್ರೇಮಕ್ಕೆ ರೂಪಕಗಳಾಗಿವೆ. ಮರಗಿಡಗಳು  ಪರಸ್ಪರ ಪ್ರೇಮದ ಕಾರಣದಿಂದಲೇ ಈ ಭೂಮಿಯ ಮೇಲೆ ಹರಡಿಕೊಂಡವು. ಜೊತೆ ಜೊತೆಗೇ ಕೀಟಗಳು, ಪಕ್ಷಿಗಳು, ಪ್ರಾಣಿಗಳು,ಡೈನಾಸರ್‌ಗಳು...ಅಂತಿಮವಾಗಿ ಮನುಷ್ಯ...ಹೀಗೆ ಭೂಮಿಯ ವ್ಯಾಖ್ಯಾನ ವಿಸ್ತಾರವಾಗುವುದಕ್ಕೆ ಕಾರಣವಾದದ್ದು ಪ್ರೇಮ. ಪ್ರೇಮ ಎಲ್ಲಿದೆ? ಕೆಲವರು ಎದೆಯನ್ನು ಮುಟ್ಟಿಕೊಳ್ಳುತ್ತಾರೆ. ಮನಸ್ಸು, ಬುದ್ಧಿ, ಮೆದುಳು ಹೀಗೆ ಬಗೆ ಬಗೆಯ ರೂಪದಲ್ಲಿ ಅದು ಬಚ್ಚಿಟ್ಟುಕೊಂಡಿದೆ ಎನ್ನುತ್ತಾರೆ. ರಕ್ತ, ಮಾಂಸದಲ್ಲೇ ಅದು ಹರಿಯುತ್ತಿದೆ ಎನ್ನುವವರೂ ಇದ್ದಾರೆ. ಆದರೆ ಎಲ್ಲ ಅಂಗಗಳನ್ನು ಮುಟ್ಟಿ ಸ್ಪಷ್ಟಪಡಿಸಿಕೊಳ್ಳುವಂತೆ ಪ್ರೀತಿಯನ್ನು ಸ್ಪಷ್ಟಪಡಿಸುವುದು ಸಾಧ್ಯವಿಲ್ಲ. ಇನ್ನೊಂದು ಜೀವವನ್ನು ಪ್ರೀತಿಸಬೇಕು ಎಂದು ನಮಗೆ ಅನ್ನಿಸುವ ಕಾರಣಗಳು ಯಾವುವು? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಈವರೆಗೆ ದೊರಕಿಲ್ಲವಾದುದರಿಂದಲೇ ಪ್ರೀತಿ ಬಗೆ ಬಗೆಯಲ್ಲಿ ವ್ಯಾಖ್ಯಾನಗೊಳ್ಳುತ್ತಲೇ ಇದೆ. 

ಮನುಷ್ಯ  ತನ್ನ ವಿಜ್ಞಾನ, ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃತಕವಾಗಿ ನೂರಾರು ವಸ್ತುಗಳನ್ನು ಸೃಷ್ಟಿಸಿದ್ದಾನೆ. ಆದರೆ ಅವನ ಸೃಷ್ಟಿ ಪರಸ್ಪರ ಪ್ರೀತಿಸಲಾರವು. ಒಂದು ಫ್ರಿಜ್ಜು ಇನ್ನೊಂದು ಪ್ರಿಜ್ಜಿನ ಜೊತೆಗೆ ಪ್ರೀತಿಗೊಳಗಾಗಿ ಮರಿ ಫ್ರಿಜ್ಜೊಂದನ್ನು ಸೃಷ್ಟಿಸಲು ಅವುಗಳಿಗೆ ಸಾಧ್ಯವಿಲ್ಲ. ಒಂದು ರೋಬೊಟ್ ಇನ್ನೊಂದು ರೋಬೊಟ್‌ನ್ನು ಪ್ರೀತಿಸಿ ಮಗದೊಂದು ಮರಿ ರೋಬಟ್‌ನ್ನು ಸೃಷ್ಟಿಸಲಾರದು. ಒಂದು ಕಣ್ಣನ್ನು ಮಾದರಿಯಾಗಿಟ್ಟುಕೊಂಡು ಮನುಷ್ಯ ಶತಶತಮಾನಗಳಿಂದ ಸಂಶೋಧನೆ ನಡೆಸಿ ಕ್ಯಾಮರಾವೊಂದನ್ನು ಸೃಷ್ಟಿಸಿದ. ಅವನ ಜೀವನವೆಲ್ಲವನ್ನೂ ಸವೆಸಿದರೂ ಒಂದು ಕಣ್ಣನ್ನು ಸರಿಗಟ್ಟುವ ಕ್ಯಾಮರಾವನ್ನು ಸೃಷ್ಟಿಸಲಾರ. ಇದೇ ಸಂದರ್ಭದಲ್ಲಿ ಇಬ್ಬರು ಪ್ರೇಮಿಗಳು ಪ್ರೇಮಿಸುವ ಐದು ನಿಮಿಷದ ಗಳಿಗೆಯಲ್ಲಿ ಕಣ್ಣು ಮಾತ್ರವಲ್ಲ, ಮೆದುಳು, ಹೃದಯಗಳೆನ್ನುವ ಅತ್ಯದ್ಭುತ ತಂತ್ರಜ್ಞಾನಕ್ಕೆ ವೇದಿಕೆ ನಿರ್ಮಾಣವಾಗಿ ಬಿಡುತ್ತದೆ. ತಾನು ಪ್ರೀತಿಸುವ ಗಳಿಗೆಯಲ್ಲಿ ತಾನೊಂದು ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದೇನೆ ಎನ್ನುವ ಅರಿವೂ ಇಲ್ಲದ ಹೊತ್ತಿನಲ್ಲಿ, ಅವನು ಅತ್ಯದ್ಭುತವಾದ ಸೃಷ್ಟಿಯೊಂದಕ್ಕೆ ಕಾರಣನಾಗುತ್ತಾನೆ. ಇದಕ್ಕೆ ಅವನು ವಿಜ್ಞಾನಿಯಾಗಬೇಕಾಗಿಲ್ಲ, ತಂತ್ರಜ್ಞಾನಿಯಾಗಬೇಕಾಗಿಲ್ಲ, ಚಿಂತಕನಾಗಬೇಕಾಗಿಲ್ಲ. ಬರೇ ಪ್ರೇಮಿಯಾಗಿರಬೇಕು ಅಷ್ಟೇ. ಪ್ರೇಮವೆನ್ನುವುದು ಸೃಷ್ಟಿಕ್ರಿಯೆಯ ಭಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿಯೇ ಗಂಡು ಮತ್ತು ಹೆಣ್ಣು ಕೂಡಿದಾಗಲೇ ಪ್ರೇಮವೆನ್ನುವುದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುವುದು. ಆದರೆ ಇದೇ ಸಂದರ್ಭದಲ್ಲಿ ಇವಷ್ಟೇ ಸತ್ಯ ಆಗಬೇಕಾಗಿಲ್ಲ. ಕೆಲವೊಮ್ಮೆ ಪ್ರಕೃತಿಗೆ ತನಗೆ ಎಲ್ಲವೂ ಗೊತ್ತು ಎನ್ನುವುದನ್ನು ತೋರಿಸುವ ಚಪಲ ಇರುತ್ತದೆ. ಮನುಷ್ಯನಿಗೆ ಅವನೊಳಗಿರುವ ಸಾಧನಗಳ ಮಹತ್ವ ಅರಿವು ಮಾಡುವ ಉದ್ದೇಶ ಇದರ ಹಿಂದಿರಬಹುದು. ಕಣ್ಣನ್ನೇ ತೆಗೆದುಕೊಳ್ಳೋಣ. ಕಣ್ಣಿನ ಅರಿವನ್ನು ಮನುಷ್ಯನಿಗೆ ಅರಿವು ಮಾಡಿಕೊಡಲೋ ಎಂಬಂತೆ ಕೆಲವೊಮ್ಮೆ ಹುಟ್ಟುಕುರುಡರನ್ನು ಪ್ರಕೃತಿ ಸೃಷ್ಟಿಸಿ ಬಿಡತ್ತೆ. ಮನುಷ್ಯನೆಂದ ಮೇಲೆ ಅವನಿಗೆ ಕಣ್ಣಿರತ್ತೆ. ಇವನು "ಹುಟ್ಟುಕುರುಡ" ಎಂದ ಮೇಲೆ ಮನುಷ್ಯನಿಗೆ ಹೊರತಾದವನು ಎಂದು ಅವನ ಮೇಲೆ ತಪ್ಪನ್ನು ಹೊರಿಸುವಂತಿಲ್ಲ. ಎಲ್ಲರಿಗೂ ಕಾಣುವ ಜಗತ್ತು ಅವನಿಗೆ ಕಾಣುವುದಿಲ್ಲ ಎನ್ನುವುದನ್ನು, ಪ್ರಕೃತಿಗೆ ವಿರೋಧವಾದುದು, ಅವನು ಪ್ರಕೃತಿ ವಿರೋಧಿ ಎಂದು ಜರೆಯುವುದಕ್ಕಾಗುವುದಿಲ್ಲ. ಸಮಾಜದಿಂದ ದೂರವಿಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಸ್ವತಃ ಪ್ರಕೃತಿಯೇ ಆತನನ್ನು ತನ್ನದೊಂದು ಭಾಗವಾಗಿ ಸೃಷ್ಟಿಸಿದೆ. ಉಳಿದ ಮನುಷ್ಯರೆಲ್ಲರೂ ಅವನನ್ನು ಒಪ್ಪಿಕೊಂಡು ಅವನ ಬದುಕನ್ನು ಗೌರವಿಸಬೇಕಾಗುತ್ತದೆ. ಗೌರವಿಸುತ್ತಾರೆ. ಅದುವೂ ಪ್ರೀತಿಯ ಒಂದುಭಾಗವೇ ಆಗಿದೆ. 

ಮನುಷ್ಯ ಮೂಲತಃ ಒಂದು ತಲೆಯವನು. ಆದರೆ ಪ್ರಕೃತಿ ತನಗೆ ಎರಡು ತಲೆಯವನನ್ನು ಸೃಷ್ಟಿಸಲೂ ಗೊತ್ತು ಎನ್ನುವ ಕಾರಣಕ್ಕಾಗಿ, ಅಪರೂಪಕ್ಕೆ ಸಯಾಮಿಗಳು, ಎರಡು ತಲೆಯ ಜೀವಿಗಳನ್ನು ಸೃಷ್ಟಿಸಿ ಬಿಡುತ್ತದೆ. ಹಿಂದೆ ಹೀಗೆ ಹುಟ್ಟಿದವರನ್ನು ದೆವ್ವ ಎಂಬ ಭೀತಿಯಿಂದ ಕೊಂದು ಬಿಟ್ಟದ್ದೂ ಇದೆ. ಮನುಷ್ಯ ತನಗೆ ಸಾಧ್ಯವಿದ್ದಷ್ಟೂ ಮಿತಿಯಲ್ಲಿ ಆ ಮಗುವಿಗೆ ಬದುಕುವುದಕ್ಕೆ ನೆರವಾಗುತ್ತಾನೆ.ನೆರವಾಗಬೇಕು. ಅದು ಮನುಷ್ಯನ ಕರ್ತವ್ಯ ಕೂಡ.
    
ಇದೇ ಸಂದರ್ಭದಲ್ಲಿ ಇನ್ನೊಂದು ಸೃಷ್ಟಿ ವೈಚಿತ್ರವೊಂದು ನಮಗೆ ಸವಾಲಾಗಿದೆ. ಅದು ಮತ್ತೆ ಪ್ರೇಮಕ್ಕೆ ಸಂಬಂಧಪಟ್ಟದ್ದು. ಗಂಡು-ಹೆಣ್ಣು ಪ್ರೀತಿಸಿದರಷ್ಟೇ ಪ್ರೇಮವೇ? ಎಂದು ಏಕಾಏಕಿ ಪ್ರಕೃತಿ ಪ್ರಶ್ನಿಸುತ್ತದೆ. ತನ್ನ ಸೃಷ್ಟಿ ಪ್ರಕ್ರಿಯೆಯನ್ನು ಅದು ತಾನೇ ಪ್ರಶ್ನಿಸಿ ಕೊಳ್ಳುತ್ತದೆ. ಆಗ ಗೇ ಅಥವಾ ಸಲಿಂಗ ಪ್ರೇಮಿ ಎನ್ನುವ ನತದೃಷ್ಟ ಹುಟ್ಟುತ್ತಾನೆ. ಪ್ರೇಮವೆನ್ನುವುದು 'ಸೃಷ್ಟಿಕ್ರಿಯೆ'ಗೆ ಪೂರಕವಾದದ್ದು. ಮತ್ತು ಅದು ಆಡಂ ಮತ್ತು ಈವ್ ನಡುವೆ ನಡೆದಾಗಷ್ಟೇ ಅರ್ಥಪೂರ್ಣವಾಗುತ್ತದೆ ಎನ್ನುವುದನ್ನು ಕಲಿಸಿರುವುದು ಪ್ರಕೃತಿಯೇ. ಆದರೆ ಈಗ ಗೇಗಳನ್ನು ಸೃಷ್ಟಿಸಿ ಆ ಪ್ರಕ್ರಿಯೆಯನ್ನು ಪರೀಕ್ಷೆಗೊಡ್ಡುತ್ತಿರುವುದೂ ಪ್ರಕೃತಿಯೇ. ಇಲ್ಲಿ ಮನುಷ್ಯನ ಸ್ವಯಂಕೃತಾಪರಾಧವಿಲ್ಲ. ಹೇಗೆ ಮನುಷ್ಯ ಕಣ್ಣನ್ನು ಸ್ವಯಂ ಸೃಷ್ಟಿಸಿಕೊಳ್ಳಲಾರನೋ, ಹಾಗೆಯೇ ಪ್ರೇಮವನ್ನು ಕೂಡ ಸ್ವಯಂ ಸೃಷ್ಟಿಸಿಕೊಳ್ಳಲಾರ. ಪ್ರೇಮವೆನ್ನುವುದು ಬೋಧನೆಯಲ್ಲ. ಕಾನೂನು, ಕಾಯ್ದೆಗಳಿಂದ ಹುಟ್ಟುವಂತಹದಲ್ಲ. ಅದು ದೇಹದೊಳಗಿನ ಸಹಜಾತಿ ಸಹಜ ಅನುಭೂತಿ. ನೀನು ಇಂಥವರನ್ನು ಪ್ರೇಮಿಸಬೇಕು ಎಂದು ಕಲಿಸುವುದು ಮನುಷ್ಯನಲ್ಲ. ಒಬ್ಬ ಗೇ ಆಗಿರುವ ಗಂಡು ಅಥವಾ ಲೆಸ್ಬಿಯನ್ ಆಗಿರುವ ಹೆಣ್ಣು ಪರಸ್ಪರ ಪ್ರೇಮಿಸಲು ಹೊರಡುವುದು ಪ್ರಕೃತಿಯ ಲಯಕ್ಕೆ ಮೀರಿದ್ದಾಗಿರಬಹುದು. ಸೃಷ್ಟಿ ಕ್ರಿಯೆಯನ್ನು ವಿರೋಧಿಸುವಂತಹದ್ದೂ ಆಗಿರಬಹುದು. ಆದರೆ ಆ ಪ್ರಕೃತಿ ವಿರೋಧಿ ಗುಣವನ್ನು ಅವನು ಅಥವಾ ಅವಳಲ್ಲಿ ಬಿತ್ತಿರುವುದು ಸ್ವತಹ ಪ್ರಕೃತಿಯೇ ಆಗಿದೆ. ಸಲಿಂಗ ಪ್ರೇಮಿಯ ಮುಂದೆ ದೇವತೆಯಂತಹ ತರುಣಿಯೊಬ್ಬಳು ಹಾದು ಹೋದರೂ ಅವನು ಅದಕ್ಕೆ ಪ್ರೇಮ ರೂಪದಲ್ಲಿ ಪ್ರತಿಕ್ರಿಯಿಸಲಾರ. ಇದೇ ಸಂದರ್ಭದಲ್ಲಿ ಒಬ್ಬ ಗಂಡು ಅವನ ಮುಂದೆ ಹಾದು ಹೋದಾಕ್ಷಣ ಅವನೆದೆಯಲ್ಲಿ ಬಿರುಗಾಳಿಯೇ ಏಳಬಹುದು. ಅವನ ಬದುಕು ಚಂಡಮಾರುತಕ್ಕೆ ಸಿಕ್ಕ ದೋಣಿಯಂತಾಗಬಹುದು. ಆ ಒಬ್ಬ ಹುಡುಗನನ್ನು ನೋಡಿದಾಕ್ಷಣ ಇನ್ನೊಬ್ಬ ಹುಡುಗನ ಎದೆಯಲ್ಲಿ ಪ್ರೇಮವನ್ನು ಬಿತ್ತಿದ್ದು ಯಾರು? ಈಗ ಅವನೇನು ಮಾಡಬೇಕು? ಒಂದು ವೇಳೆ ಅವನು ಎದುರಾದ ಹುಡುಗನೂ ಗೇ ಆಗಿದ್ದು ಇಬ್ಬರೂ ಪರಸ್ಪರ ಪ್ರೇಮಿಸತೊಡಗಿದರೆ ಅದು ಯಾರ ತಪ್ಪು? ಭಾರತದ ಕಾನೂನು ಅದನ್ನು ತಪ್ಪು ಎಂದು ಹೇಳುತ್ತದೆ. ಅದು ಪ್ರಕೃತಿ ವಿರೋಧಿಯಾದುದು ಎಂದು ವ್ಯಾಖ್ಯಾನಿಸುತ್ತದೆ. ಪರಸ್ಪರ ಪ್ರೇಮಿಸಿದ ಕಾರಣಕ್ಕಾಗಿಯೇ ಇಬ್ಬರು ಹುಡುಗರು ಜೈಲು ಸೇರಬೇಕಾದಂತಹ ವಾತಾವರಣ ನಾಗರಿಕತೆಗೆ ಒಪ್ಪುವಂತಹದೆ? ಎನ್ನುವ ಪ್ರಶ್ನೆ ಪ್ರೇಮಕ್ಕೆ ಒಂದು ಅಗ್ನಿಪರೀಕ್ಷೆಯೇ ಸರಿ. 
ನಾಗರಿಕ ಕಾನೂನು ಹೇಳುತ್ತದೆ, ''ಒಬ್ಬ ಹುಡುಗ ಇನ್ನೊಂದು ಹುಡುಗಿಯನ್ನೇ ಪ್ರೀತಿಸಬೇಕು. ಹುಡುಗ ಇನ್ನೊಬ್ಬ ಹುಡುಗನನ್ನು ಪ್ರೀತಿಸುವುದು ಅಪರಾಧ".  ಸರಿ, ಅದನ್ನು ಒಪ್ಪಿ ಒಬ್ಬ ಹುಡುಗ ಇನ್ನೊಂದು ಹುಡುಗಿಯನ್ನು ಪ್ರೀತಿಸುವುದಕ್ಕೆ ಸಾಧ್ಯವೋ ಎಂದು ಶ್ರಮಿಸಬಹುದು. ಪ್ರೇಮವೆನ್ನುವುದು ಶ್ರಮದಿಂದ ಹುಟ್ಟುವಂತಹದಲ್ಲ ಎನ್ನುವುದು ಗೊತ್ತಿದ್ದೂ ಅದಕ್ಕಾಗಿ ಆತ ಶ್ರಮಿಸಬಹುದು. ಬಾಬಾ ರಾಮ್‌ದೇವ್‌ನಂತಹ ಬಾಬಗಳ  ನಕಲಿ ಕಂಪನಿಗಳಿಂದ ನಕಲಿ ಔಷಧಿಗಳನ್ನು ಸೇವಿಸಿ ಮೋಸ ಹೋಗಬಹುದು. ಕಟ್ಟಕಡೆಗೆ ವಿಫಲನಾಗಿ ಹತಾಶನಾಗಬಹುದು. ಒಬ್ಬ ಹುಡುಗನ ಜೊತೆಗಿನ ತನ್ನ ಪ್ರೀತಿಯನ್ನು ಅದುಮಿಕ್ಕಲು ಅವನು ಬದುಕಿನುದ್ದಕ್ಕೂ ತನ್ನೊಳಗಿನ ಪ್ರೇಮದ ಅನುಭೂತಿಯ ಜೊತೆಗೆ ಹೋರಾಡಬೇಕಾಗಬಹುದು. ಒಬ್ಬ ತನಗೆ ಕುರಿ ಇಷ್ಟ, ಕೋಳಿ ಇಷ್ಟ, ತರಕಾರಿ ಇಷ್ಟ ಎಂದು ಇಷ್ಟಪಟ್ಟಂತಲ್ಲ ಪ್ರೇಮ ಎನ್ನುವುದು. ತಾನು ಸಲಿಂಗ ಪ್ರೇಮಿ ಎನ್ನುವುದನ್ನು ನಿರ್ಧರಿಸುವುದು ಸ್ವಯಂ ಅವನಲ್ಲ. ಕಾನೂನು ರೂಪಿಸುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗೇ ಎಂದರೆ ಏನು? ಅವನ ಮನಸ್ಸು ಹೇಗಿರುತ್ತದೆ? ಮತ್ತು ಅದಕ್ಕಿರುವ ಹಿನ್ನೆಲೆ ಏನು? ಎನ್ನುವುದನ್ನು ಒಬ್ಬ ಮನಶ್ಶಾಸ್ತ್ರಜ್ಞನಾಗಿ ಅರ್ಥ ಮಾಡಿಕೊಳ್ಳದೇ 'ಗೇ' ಗಳ ವಿರುದ್ಧ ಕಾನೂನನ್ನು ರೂಪಿಸಿದರೆ, ಅದು ಪರೋಕ್ಷವಾಗಿ ಮನುಷ್ಯನೊಬ್ಬ ಪ್ರೇಮಿಸಿದ ಕಾರಣಕ್ಕೆ ಜೈಲು ಪಾಲಾಗುವ ಪರಿಸರವನ್ನು ನಿರ್ಮಾಣ ಮಾಡಿ ಬಿಡುತ್ತದೆ.

    ನಾನಿಲ್ಲಿ ಬೈ ಸೆಕ್ಷುಯಲ್ ಬಗ್ಗೆ ಚರ್ಚಿಸುತ್ತಿಲ್ಲ. ಪೂರ್ತಿ ಗೇ ಆದವನ ಸಂಕಟಗಳು ಹೇಗಿರಬಹುದು ಎನ್ನುವುದನ್ನು ಮಾತ್ರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಬೈ ಸೆಕ್ಷುವಲ್‌ಗೆ ಒಬ್ಬ ಹುಡುಗಿಯ ಜೊತೆಗೂ ಪ್ರೀತಿಸುವ ಅವಕಾಶ ಇರುತ್ತದೆ. ಅಂತವನಿಗೆ ಕನಿಷ್ಟ ಒಬ್ಬ ಹುಡುಗಿಯ ಜೊತೆಗೂ ಕಾಮ-ಪ್ರೇಮ ಯಾವುದಾದರೊಂದು ಹೆಸರಲ್ಲಿ ಬದುಕುವ ಅವಕಾಶವಿರುತ್ತದೆ. ಆದರೆ ಒಬ್ಬ ಪೂರ್ಣ 'ಗೇ' ಒಬ್ಬನ ಸಂಕಟ ಭಿನ್ನವಾದುದು.ಆತ ತನ್ನ ನೆರೆಯ ಹುಡುಗನನ್ನೇ ಪ್ರೀತಿಸುತ್ತಿರಬಹುದು. ತಾನು ಪ್ರೀತಿಸಿದವನೂ ಗೇ ಆಗಿದ್ದರೆ ಅದು ಅವನ ಅದಷ್ಟ. ಆದರೆ ತಾನು ಪ್ರೀತಿಸಿದ ನೆರೆಯ ಹುಡುಗ 'ಗೇ' ಅಲ್ಲದೇ ಇದ್ದರೆ,ಬದುಕಿನುದ್ದಕ್ಕೂ ತನ್ನ ಪ್ರೀತಿಯನ್ನು ಮನದಲ್ಲೇ ಇಟ್ಟುಕೊಂಡು ಅವನೊಂದಿಗೆ ಒಡನಾಡಬೇಕಾಗುತ್ತದೆ.ಸಾಧಾರಣವಾಗಿ ಅಸಂಖ್ಯ ಗೇಗಳು ಹೀಗೆಯೇ ಬದುಕುತ್ತಿರುತ್ತಾರೆ.ಒಂದು ಅಶಾಂತ್ಮ ಆತ್ಮದಂತೆ. ತಾನು ಇಷ್ಟಪಟ್ಟವನ ಜೊತೆಗೆ ಬದುಕಲೂ ಆಗದೆ, ಸಮಾಜದಲ್ಲಿ ನಾಗರಿಕರ ವೇಷದಲ್ಲಿರುವವರಿಂದ ಲೈಂಗಿಕವಾಗಿ ಶೋಷಣೆಗೊಳಗಾಗುವ 'ಗೇ'ಗಳೂ ಇದ್ದಾರೆ. ಒಂದು ವೇಳೆ ಎದುರಿನವನೂ ಗೇ ಆಗಿರಬಹುದು.ಆದರೆ ಅದನ್ನು ವಿಚಾರಿಸಿ ಪರಸ್ಪರ ಹಂಚಿಕೊಳ್ಳುವಷ್ಟು ದೊಡ್ಡ ಹೃದಯದ ಸಮಾಜ ನಮ್ಮದಲ್ಲ. ಯಾವುದೋ ಅದಷ್ಟಕ್ಕ್ಕೆ ಒಬ್ಬ ಗೇಗೆ ಪ್ರೀತಿಸುವ ಇನ್ನೊಬ್ಬ ಗೇ ದೊರಕಬಹುದು.ಅವರಿಬ್ಬರು ತಮ್ಮ ಬದುಕನ್ನು,ಪ್ರೀತಿಯನ್ನು ಹಂಚಿಕೊಳ್ಳಬಹುದು. ಅದೂ ಸಮಾಜದಿಂದ ಗುಟ್ಟಾಗಿ. ಆದರೆ ವಿಪರ್ಯಾಸ ಗಮನಿಸಿ. ಒಂದು ವೇಳೆ ಯಾರಾದರೂ ಅವರ ಮೇಲೆ ದೂರು ಕೊಟ್ಟದ್ದೇ ಆದಲ್ಲಿ ಪ್ರೀತಿಸಿದ ಕಾರಣಕ್ಕಾಗಿ ಅವರು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗಬಹುದು.


   ಹಾಗಾದರೆ ಸಮಾಜ ಗೇಗಳಿಗೆ ಏನನ್ನು ನಿರ್ದೇಶಿಸುತ್ತದೆ? ಇಬ್ಬರು ಹುಡುಗರು ಪ್ರೀತಿಸುವುದು ಅಪರಾಧ ಎಂದು ಹೇಳುತ್ತದೆ. ಸರಿ. ಹಾಗಾದರೆ ಒಬ್ಬ ಗೇಗೆ ತನ್ನ ಬದುಕಿನುದ್ದಕ್ಕೂ ಪ್ರೀತಿಸುವ ಅವಕಾಶವೇ ಇಲ್ಲವೆ? ನೀನು ಹುಡುಗಿಯನ್ನು ಪ್ರೀತಿಸು ಎನ್ನುತ್ತದೆ ನಮ್ಮ ಕಾನೂನು, ಸಮಾಜ. ಆದರೆ ಯಾವ ಹುಡುಗಿಯೂ ಅವನ ಮನದಲ್ಲಿ ನವಿರುಭಾವನೆಗಳನ್ನೇ ಹುಟ್ಟಿಸುತ್ತಿಲ್ಲವೆ!? ಹಾಗಾದರೆ ನೀನು ಷಂಡ ಇರಬೇಕು ಎನುತ್ತದೆ ಸಮಾಜ.

ಆದರೆ ಗೇ ಷಂಡನಲ್ಲ. ಅದುವೇ ಅವನ ಸಮಸ್ಯೆ. ಒಬ್ಬ ಷಂಡ ಇಲ್ಲಿ ಯಾವ ಸಮಸ್ಯೆ,ಬಿಕ್ಕಟ್ಟಿಲ್ಲದೆ ಬದುಕಬಲ್ಲ.ಆದರೆ ಗೇ ಹಾಗೆ ಬದುಕುವುದಕ್ಕೆ ಸಾಧ್ಯವಿಲ್ಲ.ಯಾಕೆಂದರೆ,ಅವನಿಗೆ ಪ್ರೀತಿಸುವುದು ಗೊತ್ತು. ಯಾರನ್ನು ನೋಡಿದಾಗ ಅವನ ಎದೆಯಲ್ಲಿ ನವಿರು ಭಾವನೆ ಹುಟ್ಟುತ್ತದೆಯೋ ಅವನನ್ನು ಮಾತ್ರ ಪ್ರೀತಿಸುವುದಕ್ಕೆ ಗೊತ್ತು. ಕಾನೂನು ಹೇಳಿದವನನ್ನು ಪ್ರೀತಿಸುವುದು ಅಸಾಧ್ಯ.ನಿಜಕ್ಕೂ ಇಂಥವರನ್ನು ಪ್ರೀತಿಸಿ ಎಂದು ಕಾನೂನು ನಿರ್ದೇಶಿಸುವುದೇ ಪ್ರಕೃತಿ ವಿರೋಧವಾದುದು. ಈ ದೇಶದಲ್ಲಿ ಗೇ ಗಳನ್ನು ಬೆಂಬಲಿಸೋದು ಎಂದರೆ, ಅಂಥಹ ಪ್ರೇಮಗಳಿಗೆ ಉತ್ತೇಜನ ನೀಡೋದು ಎಂಬ ತಪ್ಪು ಕಲ್ಪನೆ ಇದೆ. ಕುರುಡರನ್ನು ಬೆಂಬಲಿಸೋದು ಎಂದರೆ ಅದರರ್ಥ ಕುರುಡುತನ ಸರಿ ಎಂದಲ್ಲ. ಎಲ್ಲರೂ ಕುರುಡರಾಗಿ ಹುಟ್ಟಲಿ ಎಂಬ ಹಂಬಲಿಕೆಯೂ ಅಲ್ಲ. ಅವರಿಗೆ ಅವರ ಸ್ಥಿತಿಯಲ್ಲಿ ಅತ್ಯುತ್ತಮವಾಗಿ ಬದುಕಲು ಅವಕಾಶ ಕಲ್ಪಿಸಿ ಕೊಡೋದು ಇದರ ಉದ್ದೇಶ. ಇಲ್ಲಿ ಯಾರು ಗೇ ಪ್ರೇಮವನ್ನು, ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿಲ್ಲ. ಬದಲಿಗೆ ಅವರು ಇರುವ ಸ್ಥಿತಿಯಲ್ಲಿ ಅವರಿಗೆ ಪರ್ಯಾಯ ದಾರಿಯನ್ನು ಸಮಾಜ ಹುಡುಕಿ ಕೊಡುವವರೆಗೆ ಅವರ ಹಕ್ಕುಗಳನ್ನು ಗೌರವಿಸೋದು ನಮ್ಮ ಕರ್ತವ್ಯ. ಇದೆ ಸಂದರ್ಭದಲ್ಲಿ ಪುರುಷ-ಪುರುಷರ ನಡುವೆ ಅಥವಾ ಹೆಣ್ಣು-ಹೆಣ್ಣಿನ ನಡುವೆ ಮದುವೆ ಸಂಬಂಧ ಎಲ್ಲಿಯವರೆಗೆ ಉಳಿದುಕೊಳ್ಳುತ್ತದೆ ಎನ್ನುವ ಅನುಮಾನ ಉಳಿದೇ ಇದೆ. ಪ್ರಕೃತಿ ಸರ್ವ ರೀತಿ ಪೂರಕವಾಗಿದ್ದು ನಡೆಯುವ ಗಂಡು- ಹೆಣ್ಣಿನ ಮದುವೆಯೇ ಉಳಿಯೋದಿಲ್ಲ. ಹೀಗಿರುವಾಗ ಗೆ ಗಳ ನಡುವಿನ ಮದುವೆ ಮುರಿದು ಬೀಳಲು ಹೆಚ್ಚು ಸಮಯ ಬೇಕಾಗಿಲ್ಲ. ಮಕ್ಕಳು, ಕುಟುಂಬ ಎಂದು ಅವರ ಸಂಬಂಧಗಳನ್ನು ಬಿಗಿ ಗೊಳಿಸುವ ಪ್ರಾಕೃತಿಕ ಸಹಾಯ, ಕೊಡುಗೆ   ಅವರಿಗಿಲ್ಲವಾದುದರಿಂದ, ಸಮಾಜದ ವಿರೋಧವೂ ಇರೋದರಿಂದ ಮದುವೆ ಎನ್ನುವ ವ್ಯವಸ್ಥೆಯೊಳಗೆ ಕಾಲಿಡುವಾಗ ಅವರು ಸಾವಿರ ಬಾರಿ ಯೋಚಿಸ ಬೇಕಾಗುತ್ತದೆ. ಅದು ಅಂತಿಮವಾಗಿ ಅವರಿಗೇ ಉರುಳಾಗುವ ಸಾಧ್ಯತೆಯೂ ಇದೆ. 

ಸಮಾಜ ನೆನಪಿಟ್ಟುಕೊಳ್ಳ ಬೇಕಾದ ಇನ್ನೊಂದು ವಿಷಯವಿದೆ.  ಗೇ ಗಳ ಬಗ್ಗೆ ಭಾರೀ ತಪ್ಪು ಕಲ್ಪನೆಗಳಿವೆ.ಗೇ ಹಕ್ಕುಗಳಿಗಾಗಿ ಬೀದಿಯಲ್ಲಿ  ವಿಚಿತ್ರ ವೇಷಭೂಣಗಳೊಂದಿಗೆ ಒಯ್ಯಾರದಿಂದ ಹೆಜ್ಜೆ ಇಡುವವರನ್ನೇ ಗೇಗಳೆಂದು ತಿಳಿದುಕೊಂಡವರಿದ್ದಾರೆ. ಮಂಗಳ ಮುಖಿಯರನ್ನು ಗೇ ಗಳು ಎಂದು ತಪ್ಪು ಭಾವಿಸುವವರೂ ನಮ್ಮ ನಡುವೆ ಇದ್ದಾರೆ. ಗೇಗಳು ಎಲ್ಲರಂತೆ ಸಹಜವಾಗಿರುವ ಮನುಷ್ಯರು. ನಿಮ್ಮ ಮನೆಯಲ್ಲಿ ಅತ್ಯಂತ ದೃಢ ಮೈ ಕಟ್ಟಿರುವ,ಗಂಭೀರವಾದ ಅಜಾನುಭಾಹು ಅಣ್ಣ ನೇ ಗೇ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯುವ ಆಗಿಲ್ಲ. ಅಥವಾ ಆರೋಗ್ಯಪೂರ್ಣವಾಗಿರುವ, ಮೋಹಕವಾಗಿರುವ ಒಬ್ಬ ಸುಂದರ ಹೆಣ್ಣು ಲೆಸ್ಬಿಯನ್ ಆಗಿರುವ ಸಾಧ್ಯತೆಗಳಿರುತ್ತವೆ.


ಗೇ ಯನ್ನು ಗುರುತಿಸುವುದು ಇನ್ನೊಬ್ಬ ಗೇ ಗೆ ಮಾತ್ರ ಸಾಧ್ಯ. ನಾವು ಅವನನ್ನು ಊಹಿಸಿ, ಕಲ್ಪಿಸಿ, ಟೀಕಿಸ ಬಲ್ಲೆವು. ಅಸಹ್ಯಪಟ್ಟುಕೊಳ್ಳಬಲ್ಲೆವು. ಆದರೆ ಅಂತಿಮವಾಗಿ ಒಬ್ಬ ಗೇ ಯ ಒಳಗಿನ ಸುಳಿಗಳನ್ನು ಕಾಣಬಲ್ಲವನು ಇನ್ನೊಬ್ಬ ಗೇ ಮಾತ್ರ. ಪ್ರಕೃತಿ ಸಹಜವಾಗಿ ಬದುಕುತ್ತಿದ್ದೇವೆ ಎಂಬ ದುರಹಂಕಾರಿಗಳು, ಯಾವಾಗ ಇದನ್ನು ಅರ್ಥ ಮಾಡಿಕೊಳ್ಳುತಾರೋ ಆಗ ಅವರು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪ್ರೇಮವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಗೇಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ಗೌರವಿಸಲೂ ಶುರು ಮಾಡುತ್ತಾರೆ. ಗೆ ಪ್ರೇಮ ಸಂಬಂಧ ಪ್ರಕೃತಿಯ ಹಲವು ವಿಸ್ಮಯಗಳಲ್ಲಿ ಒಂದು ಎನ್ನೋದನ್ನು ವಿನೀತವಾಗಿ ಒಪ್ಪಿಕೊಳ್ಳುತ್ತಾರೆ. 


Wednesday, April 15, 2015

ಹಲೋ ಹಲೋ

1
ಬರೆದ ಕಾಗದಕ್ಕಿಂತ 
ಖಾಲಿ ಕಾಗದವನ್ನು ಇಷ್ಟ ಪಡುವೆ 
ಯಾಕೆಂದರೆ ಅದರೊಳಗೆ 
ನಾನು ಬರೆಯದೆ ಉಳಿದ 
ಕವಿತೆಗಳಿವೆ
2
ಹಾಸಿಗೆ ಹಿಡಿದ 
ಹೆತ್ತ ತಾಯಿಯ
ತಿರುಗಿ ನೋಡದ ಈತ 
ಗೋಮಾತೆಯ ಹೆಸರಲ್ಲಿ 
ಹೇಸಿಗೆ ಮಾಡಿಕೊಂಡು 
ಜೈಲು ಸೇರಿದ್ದಾನೆ !
3
ನನಗೆ ಚಹಾ ಅಂದರೆ 
ಒಂದಿಷ್ಟೂ ಇಷ್ಟವಿಲ್ಲ 
ಆದರೆ ಚಹಾ ಕುಡಿಯಬಾರದು 
ಎಂದು ನೀನು ನನ್ನ ಕೈಗಳನ್ನು ಕಟ್ಟಿದರೆ 
ಚಹಾ ಕುಡಿಯುವ ನನ್ನ ಹಕ್ಕಿಗಾಗಿ 
ನಾನು ಪ್ರಾಣವನ್ನೇ ಕೊಡಬಲ್ಲೆ
4
ಜಾತಿ ಸಮೀಕ್ಷೆಗೆಂದು 
ಅಂಗಳ ತುಳಿದವನ ಜಾತಿ ಕೇಳಿ 
ಬೆಚ್ಚಿ 
ಜಾತ್ಯತೀತ ದೇಶದಲ್ಲಿ 
ಜಾತಿ ಸಮೀಕ್ಷೆಯೇ? ಎಂದು 
ಉಗಿದು ಕಳುಹಿಸಿ
ಅಂಗಳವನ್ನು ಗೋ ಮೂತ್ರದಿಂದ 
ಶುಚೀಕರಿಸಿದರು
5
ರಾತ್ರಿಯಿಡೀ ದುಡಿದು 
ಬಳಲಿದ ವೇಶ್ಯೆ 
ಹಗಲಲ್ಲಿ ಒಂದಿಷ್ಟು ನಿದ್ದೆ ಮಾಡಿ 
ಉಳಿದ ಸಮಯ ಕಳೆಯೋದಕ್ಕೆ 
ಗಾಂಧಿಯ ಆತ್ಮ ಚರಿತ್ರೆ ಓದಿ 
ಹೊಟ್ಟೆ ಹುಣ್ಣಾಗುವಂತೆ ನಗುವಳು !
6
ಯಾರೋ ಎಸೆದ ಕಲ್ಲೊಂದು 
ನನ್ನ ಮನೆಯ ಕಿಟಕಿಯ ಗಾಜನ್ನು 
ಚಿಲ್ ಎಂದು ಒಡೆಯಿತು 
ಒಡೆದ ಗಾಜಿನೊಳಗಿಂದ 
ನುಗ್ಗಿ ಬಂದ ಸೂರ್ಯನ ಕಿರಣ 
ನನ್ನ ಮನೆಗೆ ಇನ್ನಷ್ಟು ಬೆಳಕನ್ನು ತಂದಿತು
7
ನನ್ನನ್ನು ಸಹಿಸಿ ಕೊಳ್ಳಲಾಗದ ಮೌಲ್ವಿ 
ಒಂದು ದಿನ
ಬೆತ್ತ ಹಿಡಿದು ಬಲವಂತದಿಂದ 
ಮದರಸದಿಂದ ಹೊರ ದಬ್ಬಿದರು!
ನನ್ನ ಅಧ್ಯಾತ್ಮದ ಕಲಿಕೆ 
ಅಲ್ಲಿಂದಲೇ ಆರಂಭವಾಯಿತು
8
ಏರ್ ಟೆಲ್  ಟವರ್ 
ಮೇಲೆ ಕುಳಿತ 
ರೆಕ್ಕೆ ಹರಿದ ಒಂಟಿ ಗುಬ್ಬಚ್ಚಿ 
ಹಲೋ ಹಲೋ  ಎಂದು ಚೀರುತ್ತಿತ್ತು   
ಅತ್ತ ಕಡೆಯಿಂದ 
ನಾಟ್ ರೀಚಬಲ್ ಸದ್ದು 
ಕೇಳಿ ಬರುತ್ತಿತ್ತು !
9
ಓ ಸೂರ್ಯೋದಯ 
ಎಂದು ಈ ತೀರದಲ್ಲಿ ಕುಳಿತು 
ನಾನು ರೋಮಾಂಚನಗೊಳ್ಳುತ್ತಿರುವಾಗ 
ಆ ತೀರದಲ್ಲಿ ಕುಳಿತ ಆಕೆ 
ಸೂರ್ಯಾಸ್ತವನ್ನು ನೋಡುತ್ತಾ 
ನಿಟ್ಟುಸಿರುಡುತ್ತಿದ್ದಾಳೆ !
10
ಮೋಡದ 
ಕೋಡು ಸೀಳಿ 
ಚೆಲ್ಲಿದೆ ಹನಿ ಹನಿ ಮಳೆ 
ಹಿಗ್ಗಿದೆ ಇಳೆ
ಬೆಂದ ಮನದ ಕನಸು 
ಮಣ್ಣ ಪರಿಮಳಕ್ಕೆ 
ಮತ್ತೆ ಕೊನರಿದೆ
11
ಚದುರಿದ ದಾಳಿಂಬೆ
ಹಣ್ಣಿನ 
ಮಣಿಗಳ ಮರು ಜೋಡಿಸಲು 
ಕುಳಿತೆ 
ಒಂದು ಹಣ್ಣನ್ನು 
ಜೋಡಿಸುವಷ್ಟರಲ್ಲಿ 
ನಾನು ಹಣ್ಣಾಗಿದ್ದೆ !
12
ಲೆಕ್ಕ ಹಿಡಿದರೆ 
ನನಗೀಗ ನಲವತ್ತೆರಡು ವರ್ಷ 
ಆದರೆ ಕೆಲವು ದಿನಗಳನ್ನು ನಾನು 
ಹತ್ತಿಪ್ಪತ್ತು ವರ್ಷ ಬದುಕಿದ್ದೇನೆ
ಆದುದರಿಂದ ನನಗಿಷ್ಟೇ ವರ್ಷ 
ಎಂದು ಹೇಳೋದು ಕಷ್ಟ

Monday, March 23, 2015

ಅನೈತಿಕ ಪೊಲೀಸ್‌ಗಿರಿಗೆ ಟಿವಿ ವಾಹಿನಿಗಳ ಜೊತೆಗಾರಿಕೆ!

 ‘ಮಂಗಳೂರು ಹೋಮ್‌ಸ್ಟೇ ಪ್ರಕರಣ’ ಪದೇ ಪದೇ ಚರ್ಚೆಗೊಳಗಾಗುತ್ತವೆ. ಬರೇ ಅನೈತಿಕ ಪೊಲೀಸ್‌ಗಿರಿಯನ್ನು ಟೀಕಿಸುವುದಕ್ಕಾಗಿಯಷ್ಟೇ ಇದು ಚರ್ಚೆಯಾಗುತ್ತಿಲ್ಲ. ‘ಈ ಸಂದರ್ಭದಲ್ಲಿ ಟಿ.ವಿ. ವಾಹಿನಿಗಳು ನಡೆದುಕೊಂಡ ರೀತಿ ಎಷ್ಟರ ಮಟ್ಟಿಗೆ ಸರಿ?’ ಎನ್ನುವುದು ಪತ್ರಕರ್ತರ ನಡುವೆಯೇ ಅನೇಕ ಬಾರಿ ಚರ್ಚೆಗೊಳಗಾಗಿವೆ. ಇತ್ತೀಚೆಗೆ ಮೊಯ್ಲಿ ಪ್ರಶಸ್ತಿಗೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ ಟಿ. ವಿ. ವಾಹಿನಿಯ ವರದಿಗಾರ ನವೀನ್ ಸೂರಿಂಜೆ ಎನ್ನುವ ವರದಿಗಾರರ ಬಗ್ಗೆ ಫೇಸ್‌ಬುಕ್‌ನಲ್ಲಿ ಜಗದೀಶ್ ಕೊಪ್ಪ ಅವರು, ಎರ್ರಾಬಿರ್ರಿಯಾಗಿ ಎಗರಿ ಬಿದ್ದು, ಸ್ಟೇಟಸ್‌ನ್ನು ಹಾಕಿದ್ದರು. ವೀರಪ್ಪ ಮೊಯ್ಲಿಯವರ ಮಹಾಕಾವ್ಯವನ್ನು ವಿವೇಕರೈಗಳು ಬರೆದಿದ್ದರು ಎಂದು ಸೂರಿಂಜೆ ಹಾಕಿದ ಸ್ಟೇಟಸ್‌ಗೆ ಅವರು ಅಂದು ಅಷ್ಟು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ಕೊಪ್ಪ ಅವರು ಹಿರಿಯರು. ಅಷ್ಟು ರೋಷಾವೇಷದಿಂದ ತಮ್ಮ ಹೇಳಿಕೆಯನ್ನು ನೀಡುವ ಅಗತ್ಯವಿತ್ತೆ? ಅದೇನೇ ಹೇಳುವುದಿದ್ದರೂ ಯುವ ಪೀಳಿಗೆಗೆ ಅರ್ಥವಾಗುವ ರೀತಿಯಲ್ಲಿ ಸಹನೆಯಿಂದ ವಿವರಿಸಬಾರದಿತ್ತೆ? ಎಂದು ನನಗೆ ಅನ್ನಿಸಿತ್ತು. ರಾಮಾಯಣ ಮಹಾನ್ವೇಷಣ ಕೃತಿಯ ಕುರಿತಂತೆ ‘ಬರೆದದ್ದು ವಿವೇಕ ರೈಗಳು’ ಎಂದು ವ್ಯಂಗ್ಯವಾಗಿ ಬೀಸು ಮಾತುಗಳನ್ನು ಕೆಲವರು ಹಂಚಿಕೊಳ್ಳುತ್ತಿದ್ದರು. ಅದನ್ನೇ ಸೂರಿಂಜೆ ಅವರು ಉಲ್ಲೇಖಿಸಿರಬಹುದು. ಆದರೆ ಇದೇ ಸಂದರ್ಭದಲ್ಲಿ ಕೊಪ್ಪ ಅವರು ಪ್ರಸ್ತಾಪಿಸಿದ ಹೋಮ್ ಸ್ಟೇ ಪ್ರಕರಣವನ್ನು ಸೂರಿಂಜೆ ಅವರು ಸಮರ್ಥಿಸಿ ಮಾತನಾಡಿದರು. ಮತ್ತು ತಾನು ಮಾಡಿರುವ ಕೃತ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು. ಅವರ ಹೇಳಿಕೆ ಉಳಿದ ಯುವ ಟಿವಿ ವಾಹಿನಿ ವರದಿಗಾರರಿಗೆ ಮಾದರಿಯಾಗುವ ಅಪಾಯವಿರುವುದರಿಂದ ನಾನಿಲ್ಲಿ ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಹೊರತು ಯಾವುದೇ ಪೂರ್ವಗ್ರಹ ಪೀಡಿತನಾಗಿ ಅಲ್ಲ ಎನ್ನುವ ನಿರೀಕ್ಷಣಾ ಜಾಮೀನಿನ ಜೊತೆಗೇ ನನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನೆ. 
***
ಮಂಗಳೂರಿನಲ್ಲಿ ಎಂದಲ್ಲ ದೇಶದ ಹಲವೆಡೆ ಹೆಣ್ಣು ಮಕ್ಕಳ ಮೇಲೆ ಸಂಘಪರಿವಾರ ದುಷ್ಕರ್ಮಿಗಳು ಅನೈತಿಕ ಪೊಲೀಸರ ವೇಷದಲ್ಲಿ  ದಾಳಿ ನಡೆಸಿದಾಗ ಅವರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಟಿವಿ ವಾಹಿನಿಗಳು ಸಹಕರಿಸುತ್ತಾ ಬಂದಿವೆ. ಸ್ಪಷ್ಟವಾಗಿ ಹೇಳುವುದಾದರೆ ಅವರಿಗೆ ಜೊತೆಗಾರಿಕೆಯನ್ನು ನೀಡುತ್ತಾ ಬಂದಿವೆ. ಹಾಗೆಂದು ಟಿವಿ ವಾಹಿನಿಗಳು ಈ ಅನೈತಿಕ ಪೊಲೀಸ್‌ಗಿರಿಯ ಬೆಂಬಲಿಗರು ಎನ್ನಬೇಕಾಗಿಲ್ಲ. ಅವರಿಗೆ ರೋಚಕ ದೃಶ್ಯಗಳನ್ನು ತಮ್ಮ ನೋಡುಗರಿಗೆ ನೀಡಿ ತಮ್ಮ ಟಿಆರ್‌ಪಿಗಳನ್ನು ಹೆಚ್ಚಿಸುವ ತುರ್ತುಗಳಿವೆ. ಬ್ರೇಕಿಂಗ್ ನ್ಯೂಸ್‌ಗಳ ಬೆನ್ನು ಬೀಳುವ ಟಿವಿ ವಾಹಿನಿಗಳು ಸಂಘಪರಿವಾರದ ಅನೈತಿಕ ಪೊಲೀಸ್‌ಗಿರಿಯೊಂದಿಗೆ  ಪದೇ ಪದೇ ಭಾಗಿದಾರ ಆಗುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ, ಓದಿದ್ದೇವೆ. ಅನೈತಿಕ ಪೊಲೀಸ್‌ಗಿರಿಗೆ ಅದರಲ್ಲೂ ಮಹಿಳೆಯರ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಈ ದುಷ್ಕರ್ಮಿಗಳು ಮೊತ್ತ ಮೊದಲು ಸಂಪರ್ಕಿಸುವುದು ಟಿ.ವಿ. ವಾಹಿನಿಗಳನ್ನು. ಚಾನೆಲ್‌ಗಳ ವರದಿಗಾರರು ತಲುಪಿದ ಬಳಿಕವಷ್ಟೇ ಅಲ್ಲಿಗೆ, ದುಷ್ಕರ್ಮಿಗಳು ತಲುಪುತ್ತಾರೆ. ಮಂಗಳೂರಿನಲ್ಲಿ ಈ ಮೊದಲು ನಡೆದ ಪಬ್‌ದಾಳಿಯನ್ನೇ ಗಮನಿಸಿ. ಇಲ್ಲಿ ದಾಳಿಕೋರರು ದಾಳಿ ನಡೆಸುವ ಸಂದರ್ಭದಲ್ಲಿ ಟಿವಿ ವಾಹಿನಿಯ ಕ್ಯಾಮರಾಮಾನ್ ಗಳನ್ನು ಜೊತೆಗೇ ಒಯ್ದಿದ್ದರು. ಅಂದರೆ ಅವರ ಉದ್ದೇಶ ಬರೇ ದಾಳಿ ನಡೆಸುವುದು ಮಾತ್ರವಾಗಿರಲಿಲ್ಲ. ಆ ದಾಳಿಯನ್ನು ನಾಡಿನ ಉದ್ದಗಲಕ್ಕೂ ಎಚ್ಚರಿಕೆಯಾಗಿ ಹರಡುವುದು ಅವರ ಯೋಜನೆಯ ಒಂದು ಭಾಗವಾಗಿತ್ತು. ದಾಳಿ ನಡೆಸುವವರು ಕ್ರಿಮಿನಲ್ ಹಿನ್ನೆಲೆಯಿಂದ ಬಂದವರೇ ಆಗಿರುತ್ತಾರೆ. ಅವರಿಗೆ ಜೈಲು ಹೊಸದೇನೂ ಅಲ್ಲ. ಟಿವಿ ವಾಹಿನಿಯಲ್ಲಿ ಪ್ರಕಟವಾಗುತ್ತೇವೆ ಎಂದು ಗೊತ್ತಿದ್ದೇ ಅವರು ಟಿವಿ ವಾಹಿನಿಯವರಿಗೆ ಮುಂಚಿತವಾಗಿ ತಿಳಿಸಿ, ಅವರ ಕ್ಯಾಮರಾ ಆನ್ ಆದ ಬಳಿಕ ತಮ್ಮ  ದಾಳಿ ಆರಂಭಿಸುತ್ತಾರೆ. ಪಬ್‌ದಾಳಿಯಲ್ಲಿಯೂ ಇದೇ ಸಂಭವಿಸಿದೆ ಎನ್ನುವುದನ್ನು ಗಮನಿಸಬೇಕು. ದಾಳಿಯ ಯೋಜನೆ ರೂಪಿಸಿದ ನಾಯಕರು ತೆರೆಮರೆಯಲ್ಲಿರುತ್ತಾರೆ. ದಾಳಿ ನಡೆಸುವವರು ತಮ್ಮ ಕೆಲಸ ಮುಗಿಸಿ, ಅದಕ್ಕೆ ಪಡೆಯಬೇಕಾದುದನ್ನು ಪಡೆಯಬೇಕಾದವರಿಂದ ಪಡೆದು ಜೈಲು ಸೇರುತ್ತಾರೆ. ಅವರನ್ನು ಬಿಡಿಸುವುದಕ್ಕೆ  ಯೋಜನೆಗಳು ಮೊದಲೇ ರೂಪು ಗೊಂಡಿರುತ್ತವೆ ಆದುದರಿಂದ 'ದಾಳಿ ಮಾಡಿದವರನ್ನು ಪೊಲೀಸರು ಬಂಧಿಸಿದರು' ಎನ್ನುವುದರಿಂದಷ್ಟೇ, 'ಅಪರಾಧಿಗಳಿಗೆ ಶಿಕ್ಷೆಯಾಯಿತು' ಎನ್ನಲು ಬರುವುದಿಲ್ಲ.

 ಹೋಮ್ ಸ್ಟೇಯಲ್ಲಿ ಮಹಿಳೆಯರ ಮೇಲೆ ನಡೆದ ಬರ್ಬರ ದಾಳಿಯ ಪ್ರಕರಣವನ್ನೇ ತೆಗೆದುಕೊಳ್ಳೋಣ. ಆ ಸ್ಥಳಕ್ಕೆ ಮೊದಲು ತೆರಳಿದ್ದು ಟಿವಿ ವರದಿಗಾರ ನವೀನ್ ಸೂರಿಂಜೆ ಅವರು. ಬಳಿಕ ದಾಳಿಕೋರರು ಅಲ್ಲಿಗೆ ಆಗಮಿಸಿದರು. ಅರ್ಧಗಂಟೆಗೆ ಮೊದಲೇ ನವೀನ್ ಸೂರಿಂಜೆ ಅವರು ಆ ಸ್ಥಳದ ಸಮೀಪದಲ್ಲಿ ದಾಳಿಕೋರರಿಗಾಗಿ ಕಾಯುತ್ತಿದ್ದರು. ಬಹುಶಃ ಅಂದು ಮಹಿಳೆಯರ ಮೇಲೆ ದಾಳಿ ನಡೆಸಲು ದುಷ್ಕರ್ಮಿಗಳು ಬಳಸಿಕೊಂಡ ಮುಖ್ಯ ಅಸ್ತ್ರವೇ ಟಿವಿ ವಾಹಿನಿಯಾಗಿತ್ತು. ಯಾಕೆಂದರೆ, ಯಾವುದೋ ಮೂಲೆಯಲ್ಲಿ ಗುಟ್ಟಾಗಿ ನಾಲ್ಕು ಹೆಣ್ಣುಮಕ್ಕಳಿಗೆ ಥಳಿಸುವುದಷ್ಟೇ ಅವರು ಗುರಿಯಾಗಿರಲಿಲ್ಲ. ಅಲ್ಲಿರುವ ಹೆಣ್ಣು ಮಕ್ಕಳನ್ನು ಅವಮಾನಿಸಿ, ಅದನ್ನು ಟಿವಿಯಲ್ಲಿ ಪ್ರಕಟಿಸಿ, ನಾಡಿನ ಇಡೀ ಹೆಣ್ಣು ಮಕ್ಕಳಿಗೆ ಎಚ್ಚರಿಕೆಯನ್ನು ನೀಡುವುದೇ ಅವರ ಅಂದಿನ ಯೋಜನೆಯಾಗಿತ್ತು. ಆದುದರಿಂದಲೇ, ಮೊದಲು ತಮ್ಮ ಜನರ ಮೂಲಕ ಟಿವಿ ವಾಹಿನಿಯ ವರದಿಗಾರನಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಟಿ.ವಿ. ವರದಿಗಾರರೋ ಸದಾ, ರೋಚಕ ಸುದ್ದಿಯನ್ನು ಒದಗಿಸಬೇಕಾದಂತಹ ಒತ್ತಡದಲ್ಲಿರುತ್ತಾರೆ. ವಿಪರ್ಯಾಸವೆಂದರೆ ಪಬ್ ದಾಳಿಯ ಬಳಿಕ ಟಿ.ವಿ. ವಾಹಿನಿಗಳ ಕೆಲವು ವರದಿಗಾರರು ಸಂಘಪರಿವಾರದ ಮುಖಂಡರ ಜೊತೆಗೆ ‘‘ಅಣ್ಣಾ, ದಾಳಿ ಮಾಡುವಾಗ ನಮ್ಮ ಚಾನೆಲ್‌ಗೂ ಒಂದು ಮಾಹಿತಿಯನ್ನು ತಿಳಿಸಿ’’ ಎಂದು ಗೋಗರೆದವರ ಬಗ್ಗೆ ನನಗೆ ಗೊತ್ತು. 
‘‘ನಾನೇನು ಸಿನಿಮಾ ಹೀರೋನಂತೆ ದಾಳಿ ನಡೆಯುವವರನ್ನು ತಡೆಯಬೇಕಾಗಿತ್ತೇ?’’ ಎಂದು ನವೀನ್ ಸೂರಿಂಜೆ ಕೇಳುತ್ತಾರೆ. ಆದರೆ ಘಟನೆ ನಡೆದಂದು ಇವರು ಹೋದ ಎಷ್ಟೋ ಹೊತ್ತಿನ ಬಳಿಕವಷ್ಟೇ ಸಂಘಪರಿವಾರದ ದುಷ್ಕರ್ಮಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅದಕ್ಕೂ ಮೊದಲು ಅಲ್ಲಿರುವ ಒಂದೆರಡು ಅಮಾಯಕ ಹೆಣ್ಣು ಮಕ್ಕಳು ಮುಂದಿನ ಘಟನೆಯ ಮುನ್ಸೂಚನೆಯೇ ಇಲ್ಲದೆ ವರಾಂಡದಲ್ಲಿ ಓಡಾಡುತ್ತಿದ್ದರು. ತಮ್ಮ ಗೆಳೆಯನ ಹುಟ್ಟು ಹಬ್ಬ ಆಚರಿಸುವುದಕ್ಕಾಗಿ ಮನೆಯಿಂದ ಅನುಮತಿ ಪಡೆದು ಅಲ್ಲಿಗೆ ಅವರು ಆಗಮಿಸಿದ್ದರು. ಇದನ್ನು ಸ್ವತಃ ಸೂರಿಂಜೆಯವರೇ ಹಂಚಿಕೊಂಡಿದ್ದಾರೆ. ಒಂದು ವೇಳೆ ಅಂದು ಟಿವಿ ವಾಹಿನಿಯ ವರದಿಗಾರರು ಅಲ್ಲಿಗೆ ಸರಿಯಾದ ಸಮಯಕ್ಕೆ ತಲುಪದೇ ಇದ್ದಿದ್ದರೆ ಸಂಘಪರಿವಾರದ ದುಷ್ಕರ್ಮಿಗಳು ತಮ್ಮ ದಾಳಿಯನ್ನು ಇನ್ನೊಂದು ದಿನಕ್ಕೆ ಮುಂದೂಡುತ್ತಿದ್ದರೇನೋ. ಯಾಕೆಂದರೆ, ಮೊದಲೇ ಹೇಳಿದಂತೆ, ಕೇವಲ ಅರ್ಧ ಗಂಟೆ ದಾಳಿ ನಡೆಸುವುದಷ್ಟೇ ಅವರ ಗುರಿಯಾಗಿದ್ದಿರಲಿಲ್ಲ. ಅದನ್ನು ಚಿತ್ರೀಕರಿಸಿ ನಾಡಿನಾದ್ಯಂತ ಬಿತ್ತರಿಸಿ ಆ ಹೆಣ್ಣು ಮಕ್ಕಳ ಮಾನ ಹರಾಜು ಮಾಡುವುದು ಅವರ ದಾಳಿಯ ಒಂದು ಭಾಗವಾಗಿತ್ತು. ಆ ಬಳಿಕ ಏನು ನಡೆಯಿತು ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಅಂದು ಆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಒಂದು ನಡೆದಿಲ್ಲ ಎನ್ನುವುದು ಬಿಟ್ಟರೆ, ಸಕಲ ವಿಕೃತ ದೌರ್ಜನ್ಯಗಳನ್ನೆಲ್ಲ ದುಷ್ಕರ್ಮಿಗಳು ಎಸಗಿದ್ದಾರೆ. ಈ ಸಂದರ್ಭದಲ್ಲಿ ವರದಿಗಾರ ತನ್ನ ಗುಪ್ತ ಕ್ಯಾಮರಾದಿಂದ ಚಿತ್ರೀಕರಣ ಮಾಡಿರಲಿಲ್ಲ. ‘‘ಅಲ್ಲಿಗೆ ತೋರಿಸು...ಇಲ್ಲಿಗೆ ತೋರಿಸು...’’ ಎಂದು ಕ್ಯಾಮರಾಮೆನ್‌ಗೆ ಬಹಿರಂಗವಾಗಿ ನಿರ್ದೇಶನ ಕೊಡುತ್ತಿರುವುದು ಅದೇ ಕ್ಯಾಮರಾದಲ್ಲಿ ದಾಖಲಾಗಿದೆ ಎನ್ನುವುದು ಗಮನಾರ್ಹ ಅಂಶ. ತಮ್ಮ ಕೃತ್ಯ ಕ್ಯಾಮರಾದಲ್ಲಿ ಚಿತ್ರೀಕರಣಗೊಳ್ಳುತ್ತಿದೆ ಎನ್ನುವುದು ಗೊತ್ತಿದ್ದೇ ದುಷ್ಕರ್ಮಿಗಳು ಬರ್ಬರ ದೌರ್ಜನ್ಯವನ್ನು ಆ ಹೆಣ್ಣು ಮಕ್ಕಳ ಮೇಲೆ ಎಸಗಿದ್ದಾರೆ ಎಂದ ಮೇಲೆ, ‘ತನ್ನಿಂದಾಗಿ ಆ ಕೃತ್ಯ ಜಗತ್ತಿಗೆ ಗೊತ್ತಾಯಿತು’ ಎಂದು ನವೀನ್ ಸೂರಿಂಜೆ ಅವರು ಹೇಳುವುದರಲ್ಲಿ ಏನು ಅರ್ಥವಿದೆ?

   ದುಷ್ಕರ್ಮಿಗಳು ತಮ್ಮ ದಾಳಿಯನ್ನು ಸುಮಾರು ಅರ್ಧ ಗಂಟೆಗಳ ಕಾಲ ನಡೆಸಿದ್ದಾರೆ. ಆದರೆ ಟಿವಿ ವಾಹಿನಿಗಳ ಮೂಲಕ ಆ ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ? ಸುಮಾರು 48 ಗಂಟೆಗಳ ಕಾಲ ಟಿವಿ ವಾಹಿನಿಗಳಲ್ಲಿ ಅವರ ಮೇಲೆ ನಡೆದ ದೌರ್ಜನ್ಯ ಯಾವ ರೀತಿಯ ಮರೆ ಮಾಚುವಿಕೆ ಇಲ್ಲದೇ ನೇರವಾಗಿ ಪ್ರಸಾರವಾಗತೊಡಗಿತು. ಎರಡು ದಿನಗಳ ಕಾಲ ಅದನ್ನು ನೋಡುತ್ತಲೇ ಇರಬೇಕಾದ ಅನಿವಾರ್ಯ ಸ್ಥಿತಿಗೆ ಸಿಲುಕಿದ ಆ ತರುಣಿಯರ ಮನೆಯವರು, ಅವರ ಕುಟುಂಬಸ್ಥರು, ಗೆಳೆಯರು, ಗೆಳತಿಯರ ಸ್ಥಿತಿ ಏನಾಗಬೇಕು? ಅದರ ಕ್ಲಿಪ್ಪಿಂಗ್ಸ್‌ಗಳನ್ನು ಇಟ್ಟುಕೊಂಡು ಇಂದಿಗೂ ತಮ್ಮ ವಿಕೃತ ವಾಂಛೆಗಳನ್ನು ತಣಿಸಿಕೊಳ್ಳುವ ವಿಕಾರ ಮನಸ್ಥಿತಿಗಳನ್ನು ಯಾರು ತಡೆಯಬೇಕು? ಆ ಹೆಣ್ಣು ಮಕ್ಕಳು ಮತ್ತು ಕುಟುಂಬಸ್ಥರ ಮೇಲೆ, ಸಮಾಜದ ಮೇಲೆ ಆ ಕ್ಲಿಪ್ಪಿಂಗ್ಸ್‌ಗಳುಮಾಡಿರುವ ಗಾಯ ಒಣಗುವುದಕ್ಕೆ ಸಾಧ್ಯವೆ? ಇಂದಿಗೂ ಆ ಕ್ಲಿಪ್ಪಿಂಗ್ಸ್‌ಗಳಿಗೆ ಹೆದರಿ ಬದುಕುವ ಸನ್ನಿವೇಶದಲ್ಲಿ ಆ ಹುಡುಗಿಯರಿದ್ದಾರೆ. ಆ ತರುಣಿಯರ ಗೆಳೆಯರನ್ನು ಇಂದಿಗೂ ತಲೆಯತ್ತದಂತೆ ಮಾಡಿರುವುದು ಅದೇ ಕ್ಲಿಪ್ಪಿಂಗ್ಸ್‌ಗಳು. ನಾವೆಲ್ಲ ಅದನ್ನು ನೋಡಿ ಮರೆತಿರಬಹುದು. ಆದರೆ ಅದಕ್ಕೆ ಬಲಿಯಾದವರು ಅದನ್ನು ಮರೆಯಲು ಹೇಗೆ ಸಾಧ್ಯ?

 ನವೀನ್ ಸೂರಿಂಜೆ ಜೈಲಿಗೆ ಹೋಗಿರುವುದು ದಾಳಿಯನ್ನು ತಡೆದ ಕಾರಣಕ್ಕೋ ಅಥವಾ ದಾಳಿಯನ್ನು ಪ್ರಸಾರ ಮಾಡಿದ ಕಾರಣಕ್ಕೋ ಅಲ್ಲ. ಆ ದಾಳಿಯಲ್ಲಿ ಸಹಭಾಗಿಯಾಗಿರುವುದಕ್ಕೆ ಎನ್ನುವುದನ್ನು ನಾವು ಮತ್ತು ಹೊಸ ತಲೆಮಾರಿನ ಹುಡುಗರು ಗಮನಿಸಬೇಕಾಗಿದೆ. ಪತ್ರಿಕಾ ಧರ್ಮ-ಅಧರ್ಮದ ನಡುವಿನ ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಲು ವಿಫಲವಾದಾಗ ಮಾತ್ರ ಸೂರಿಂಜೆ ಮಾಡಿರುವುದು ಒಂದು ಸಾಹಸವಾಗಿ, ರೋಚಕ ವರದಿಯಾಗಿ ನಮಗೆ ಕಾಣಲು ಸಾಧ್ಯ. ಇಷ್ಟೆಲ್ಲ ಆದ ಬಳಿಕ ಪೊಲೀಸರು ಬಂಧಿಸುತ್ತಾರೆನ್ನುವಾಗ ‘ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸುವುದು’ ಹೊಣೆಗಾರಿಕೆ. ಆದರೆ ಸೂರಿಂಜೆ ಆ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಅಂದರೆ ತಾನು ಮಾಡಿರುವುದು ಸರಿ ಎನ್ನುವ ಗಾಢ ನಂಬಿಕೆಯೇ ಅದಕ್ಕೆ ಕಾರಣವಾಗಿರಬಹುದು. ಅಥವಾ, ಟಿ.ವಿ. ಪತ್ರಕರ್ತನಾಗಿ ಕಾಲಿಟ್ಟ ಆರಂಭದ ದಿನಗಳು ಅದಾಗಿರುವುದರಿಂದ, ನಡೆಯುತ್ತಿರುವುದೆಲ್ಲ ಅವರಿಗೆ ರೋಚಕವಾಗಿ ಕಂಡಿರಬೇಕು.

  ‘‘ದಾಳಿಗೊಳಗಾದ ಕುಟುಂಬಸ್ಥರು, ಸಂತ್ರಸ್ತರು ನನ್ನ ಪರವಾಗಿ ಹೇಳಿಕೆ ನೀಡಿದ್ದಾರೆ’’ ಎಂದು ಸೂರಿಂಜೆ ಹೇಳಿಕೊಳ್ಳುತ್ತಾರೆ. ಆದರೆ ಅಂತಹದೊಂದು ಹೇಳಿಕೆಯನ್ನು ಸಂತ್ರಸ್ತರ ಬಾಯಿಯಿಂದ ಹೊರಡಿಸುವುದಕ್ಕಾಗಿ ಅವರ ಗೆಳೆಯ, ರಾಷ್ಟ್ರೀಯ ಪತ್ರಿಕೆಯೊಂದರ ವರದಿಗಾರ ಎಷ್ಟು ಕಷ್ಟಪಟ್ಟಿದ್ದಾನೆ ಎನ್ನುವುದು ಆಪ್ತ ವಲಯದ ಎಲ್ಲರಿಗೂ ತಿಳಿದಿರುವ ಸಂಗತಿ. ಆರಂಭದಲ್ಲಿ ಸಂತ್ರಸ್ತರು ನವೀನ್ ಸೂರಿಂಜೆಯ ವಿರುದ್ಧ ತಮ್ಮ ಹೇಳಿಕೆಯನ್ನು ನೀಡಿದ್ದರು. ಆದರೆ ಆ ಬಳಿಕ ‘‘ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಇದೊಂದು ದಾಖಲೆ. ಅವರು ನಿಮಗೆ ಸಹಾಯ ಮಾಡಿರುವುದೇ ಹೊರತು, ನಿಮ್ಮ ವಿರುದ್ಧ ಪ್ರಸಾರ ಮಾಡಿರುವುದಲ್ಲ’’ ಎಂಬಿತ್ಯಾದಿಯಾಗಿ ಅವರ ಮನವೊಲಿಸಿದ ಪರಿಣಾಮ ಕುಟುಂಬಸ್ಥರು ನವೀನ್ ಸೂರಿಂಜೆಯ ಪರವಾಗಿ ಹೇಳಿಕೆಯನ್ನು ನೀಡಿದರು. ಆ ಹೇಳಿಕೆ ಮತ್ತು ಪತ್ರಕರ್ತ ಮಿತ್ರರ ಒತ್ತಡದ ಪರಿಣಾಮವಾಗಿ ನವೀನ್ ಸೂರಿಂಜೆ ಬಿಡುಗಡೆಯಾದರು. ಹೋಮ್‌ಸ್ಟೇ ಘಟನೆ ನಡೆದ ಮರುದಿನ ವಾರ್ತಾಭಾರತಿ ಪತ್ರಿಕೆಯಲ್ಲಿ ದುಷ್ಕರ್ಮಿಗಳ ಕೃತ್ಯವನ್ನೂ, ಟಿವಿ ವಾಹಿನಿಗಳ ಕೃತ್ಯವನ್ನೂ ಜೊತೆಯಾಗಿ ಸಂಪಾದಕೀಯದಲ್ಲಿ ಖಂಡಿಸಲಾಗಿತ್ತು. ಆಗ ಸೂರಿಂಜೆಯ ಮಿತ್ರರು ಹಲವರು ‘ನೀವು ಹೀಗೆ ಬರೆದದ್ದು ಯಾಕೆ? ತುಂಬಾ ಬೇಜಾರಾಯಿತು’ ಎಂದೆಲ್ಲ ದೂರವಾಣಿಯಲ್ಲಿ ತೋಡಿಕೊಂಡಿದ್ದರು. ಆದರೆ ನವೀನ್ ಸೂರಿಂಜೆಯ ಬಂಧನವಾದಾಗ ಆ ಬಂಧನದ ವಿರುದ್ಧ ನಿರಂತರ ಸುದ್ದಿಗಳನ್ನು ಪ್ರಕಟಿಸಿದ್ದೆವು. ಅವರ ಬಂಧನವನ್ನು ಖಂಡಿಸಿದ್ದು ಮಾತ್ರವಲ್ಲ, ಬಂಧನದ ವಿರುದ್ಧದ ಸುದ್ದಿಗಳನ್ನು ಆದ್ಯತೆಯ ಮೇಲೆ ವಾರ್ತಾಭಾರತಿ ಪ್ರಕಟಿಸಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ನವೀನ್ ಸೂರಿಂಜೆಯ ಬಿಡುಗಡೆ ಆಗಲೇಬೇಕು ಎಂದು ಒತ್ತಾಯಿಸಿ ಮತ್ತೊಮ್ಮೆ ಸಂಪಾದಕೀಯವನ್ನು ಬರೆದಿದ್ದೆವು. ಅವರು ಬಿಡುಗಡೆಯಾಗುವ ಸೂಚನೆ ದೊರಕಿದಾಗ, ಅವರು ಬಿಡುಗಡೆಯಾದಾಗ ಮುಖಪುಟದಲ್ಲಿ ಸುದ್ದಿಗಳನ್ನು ಛಾಪಿಸಿ ಸಂತೋಷ ಹಂಚಿಕೊಂಡಿದ್ದೆವು. ಈಗ ‘ತಾನು ಮಾಡಿದ ಕೆಲಸ ಕೆಟ್ಟದು ಎಂದು ತಿಳಿದೂ ನೀವು ಬೆಂಬಲಿಸಿರುವುದು ನಿಜವೇ ಆಗಿದ್ದರೆ ಅಂತಹ ಬೆಂಬಲ ನನಗೆ ಬೇಡ’ ಎಂದು ನವೀನ್ ಸೂರಿಂಜೆಯವರು ನಿರಾಕರಿಸಬಹುದು.
  ವೈಯಕ್ತಿಕವಾಗಿ ನವೀನ್ ಸೂರಿಂಜೆ ಬಿಡುಗಡೆಯಾಗಬೇಕು ಎಂದು ನಾನು ಬಯಸಿದ್ದಕ್ಕೆ ಮುಖ್ಯ ಕಾರಣವಿದೆ. ನವೀನ್‌ನೊಳಗೆ ಒಳ್ಳೆಯ ಪತ್ರಕರ್ತನೊಬ್ಬನಿದ್ದಾನೆ. ನವೀನ್‌ನಂತಹ ನೂರಾರು ಪತ್ರಕರ್ತರು ನಮ್ಮ ನಡುವೆ ಹಲವು ಗೊಂದಲ, ಬಿಕ್ಕಟ್ಟುಗಳ ನಡುವೆ ಓಡಾಡುವುದನ್ನು ಆತಂಕದಿಂದ ನೋಡುತ್ತಿದ್ದೇನೆ. ನವೀನ್‌ನಂತಹ ಪತ್ರಕರ್ತರು ಬರೇ ಇಷ್ಟರಲ್ಲೇ ಮುಗಿದು ಹೋಗಬಾರದು. ಅಂಥವರನ್ನು ಮುಗಿಸುವುದಕ್ಕೆ ನಾಲ್ದಿಕ್ಕುಗಳಲ್ಲಿ ದುಷ್ಕರ್ಮಿಗಳು ಹೊಂಚಿ ಕೂತಿರುವಾಗ, ಅವರ ಸಂಕಟಗಳಲ್ಲಿ ನಮ್ಮ ಮಿತಿಯಲ್ಲಿ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ಹೋಮ್ ಸ್ಟೇ ಘಟನೆಯಲ್ಲಿ ನವೀನ್ ಸೂರಿಂಜೆ ನೇರ ಭಾಗೀದಾರ ಅಲ್ಲ. ಆತ ಸಂಘಪರಿವಾರದ ಹುನ್ನಾರ ಮತ್ತು ಟಿವಿ ವಾಹಿನಿಗಳ ಸುದ್ದಿಗಳ ದಾಹಕ್ಕೆ ಬಲಿಪಶುವಾದ ಒಬ್ಬ ಉದಯೋನ್ಮುಖ, ಪ್ರತಿಭಾವಂತ ವರದಿಗಾರ. ದೊಡ್ಡದಾಗಿ ಬೆಳೆಯಬೇಕಾದ ಪತ್ರಕರ್ತನ ಹಾದಿಯಲ್ಲಿ, ಅವನಿಗೆ ಮುಂದಿನ ದಿನಗಳಲ್ಲಿ ಹಲವು ಪಾಠಗಳನ್ನು ಕಲಿಸಯಬಹುದಾದ ಒಂದು ತಪ್ಪಿನ ಹೆಸರು ‘ಹೋಮ್ ಸ್ಟೇ ಪ್ರಕರಣ’. ಈ ಪ್ರಕರಣ ಯಾವ ರೀತಿಯಲ್ಲೂ ಟಿವಿ ವಾಹಿನಿಯ ಹೊಸ ವರದಿಗಾರರಿಗೆ ಮಾದರಿಯಾಗದಿರಲಿ ಎಂಬ ಆಶಯದಿಂದ ಈ ಬರಹವನ್ನು ನಿಮ್ಮ ಮುಂದಿಡಬೇಕಾಯಿತು.

Sunday, March 22, 2015

ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಯಾಕೆ ಒಪ್ಪಿಸಬೇಕು?

ಶನಿವಾರ - ಮಾರ್ಚ್ -21-2015
ಕೃಪೆ-ವಾರ್ತಾಭಾರತಿ 
"ವಿರೋಧ ಪಕ್ಷದವರ ಅಪ್ರಾಮಾಣಿಕವಾದ ಹಾರಾಟ ಮೃತದೇಹದ ಮೇಲೆ ಮುಗಿಬಿದ್ದ ಹಸಿದ ರಣಹದ್ದುಗಳಂತಿದೆ. ಈ ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯ ನಾಯಕರು ತಮ್ಮ ಪಕ್ಷದ ಮಾಜಿ ಶಾಸಕ ರಘಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಲು ತಮ್ಮ ಶ್ರಮವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ರವಿ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಲು ಮುಂದಾಗಿರುವುದರಿಂದ, ಬಿಜೆಪಿ ನಾಯಕರು ತಮ್ಮ ಮುಂದಿನ ಹೋರಾಟವನ್ನು ಈ ಹತಭಾಗ್ಯ ಮಹಿಳೆಯರ ಕಡೆಗೆ ತಿರುಗಿಸಲಿ"

ಡಿ.ಕೆ. ರವಿ ಅವರ ನಿಗೂಢ ಸಾವಿನ ಪ್ರಕರಣ ಎರಡು ಮಹತ್ವದ ತಿರುವುಗಳಲ್ಲಿ ನಿಂತಿದೆ. ಅದರಲ್ಲಿ ಮುಖ್ಯವಾದುದು, ಕೊನೆಗೂ ಜನರ ಒತ್ತಡಕ್ಕೆ ಮಣಿದು ಸರಕಾರವು ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಇಂಗಿತ ವ್ಯಕ್ತಪಡಿಸಿದೆ. ಕಾಂಗ್ರೆಸ್‌ನ ಹೈಕಮಾಂಡ್ ಸೋನಿಯಾ ಗಾಂಧಿಯವರೂ ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಿರುವುದು ಈ ಇಂಗಿತಕ್ಕೆ ಪ್ರಮುಖ ಕಾರಣವಿರಬಹುದು. ಎರಡನೆಯದಾಗಿ, ರವಿ ಅವರ ಸಾವು ಕೊಲೆಯಲ್ಲ, ಆತ್ಮಹತ್ಯೆ ಎನ್ನುವುದನ್ನು ಹೇಳುವ ಮಹತ್ವದ ದಾಖಲೆಗಳು ಹೊರ ಬಿದ್ದಿರುವುದು. ರವಿ ಈಗಾಗಲೇ ಒಬ್ಬ ಐಎಎಸ್ ಸಹೋದ್ಯೋಗಿಯೊಂದಿಗೆ ಪ್ರೇಮಕ್ಕೆ ಬಿದ್ದಿದ್ದು, ಆಕೆ ಇವರ ಪ್ರೇಮಕ್ಕೆ ಬೆಲೆ ನೀಡದೇ ಇರುವುದು ಆತ್ಮಹತ್ಯೆಗೆ ಕಾರಣ ಎಂದು ಮೂಲಗಳು ಹೇಳುತ್ತಿವೆ. ಆ ಸಹೋದ್ಯೋಗಿ ಪೊಲೀಸರಿಗೆ ನೀಡಿರುವ ದಾಖಲೆಗಳು ಈ ವಾದವನ್ನು ಪುಷ್ಟೀಕರಿಸುತ್ತಿವೆ. ಸಾಯುವ ಮುನ್ನ ರವಿ ಅವರು ಈಕೆಯ ಜೊತೆಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಕೊನೆಯ ಎಸ್‌ಎಂಎಸ್ ಸಂದೇಶವನ್ನೂ ಕಳುಹಿಸಿದ್ದಾರೆ ಮತ್ತು ಈ ದಾಖಲೆಗಳನ್ನು ಆಕೆ ಪೊಲೀಸರಿಗೆ ಒಪ್ಪಿಸಿರುವ ವಿವರಗಳೂ ದೊರಕಿವೆ. ರವಿ ಅವರು ಈ ದಾಖಲೆಗಳನ್ನು ಕಳುಹಿಸಿರುವುದು ತಮ್ಮ ಮನೆಯಿಂದಲೇ ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಈ ಪ್ರೇಮ ಪ್ರಕರಣ ಅವರ ಕುಟುಂಬದೊಳಗೆ ಬಿಕ್ಕಟ್ಟನ್ನು ಸೃಷ್ಟಿ ಮಾಡಿತ್ತು ಎಂದೂ ಹೇಳಲಾಗುತ್ತಿದೆ. ಇವೆಲ್ಲವೂ ನಿಜವೇ ಆಗಿದ್ದರೆ, ಅವರ ಸಾವನ್ನು ಪೊಲೀಸರು, ಸಿಐಡಿ ಅಕಾರಿಗಳು ಆತ್ಮಹತ್ಯೆ ಎಂದು ಘೋಷಿಸುವುದಕ್ಕೆ ಹೆಚ್ಚಿನ ಶ್ರಮದ ಅಗತ್ಯವಿಲ್ಲ.
 ಒಂದು ವೇಳೆ ಸಿಐಡಿ ಅಕಾರಿಗಳು, ರಾಜ್ಯದ ಪೊಲೀಸರು ರವಿ ಅವರ ಸಾವನ್ನು ಆತ್ಮಹತ್ಯೆಯೆಂದು ಸ್ಪಷ್ಟವಾಗಿ ಸಾಕ್ಷ ಸಮೇತ ನಿರೂಪಿಸುವಲ್ಲಿ ಯಶಸ್ವಿಯಾದರು ಎಂದಿಟ್ಟುಕೊಳ್ಳೋಣ. ಆದರೂ ನಾಡಿನ ಜನತೆ ರವಿ ಸಾವಿನ ಕುರಿತಂತೆ ಇನ್ನಷ್ಟು ತನಿಖೆಯನ್ನು ಬಯಸುತ್ತಾರೆ ಎಂದರೆ, ಅದರ ಅರ್ಥ ಅವರು ರವಿಯಂತಹ ಒಬ್ಬ ಪ್ರಾಮಾಣಿಕ ಅಕಾರಿಯ ಕುರಿತಂತೆ ಅಗಾಧ ಪ್ರೀತಿಯಿಟ್ಟಿದ್ದಾರೆ ಎಂದಾಗಿದೆ. ಆ ಪ್ರೀತಿಯನ್ನು ಗೌರವಿಸಿ, ಜನರು ಬಯಸಿದಂತೆ ಇನ್ನೂ ದೊಡ್ಡ ಮಟ್ಟದ ತನಿಖೆಯನ್ನು ನಡೆಸಿ, ರವಿಯ ಸಾವಿನ ಸತ್ಯಾಸತ್ಯತೆಯನ್ನು ಜನರ ಮುಂದಿಡುವುದು ಸರಕಾರದ ಕರ್ತವ್ಯ. ರವಿ ಅವರು ಈ ನಾಡಿನ ಮಹತ್ವದ ಹುದ್ದೆಯನ್ನು ನಿರ್ವಹಿಸಿದವರು. ಆ ಹುದ್ದೆಯಲ್ಲಿ ದಕ್ಷರಾಗಿ, ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸಿದವರು. ಬೆಂಗಳೂರಿನ ಅತ್ಯಂತ ಬಲಾಢ್ಯ ಶಕ್ತಿಗಳನ್ನು ಎದುರು ಹಾಕಿಕೊಂಡು ಸರಕಾರಕ್ಕಾಗಿ ಕೆಲಸ ಮಾಡಿದವರು. ಅಂಥವರ ಸಾವು ಸಿಐಡಿ ಅಕಾರಿಗಳು ಬರೆಯುವ ‘ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ’ ಎಂಬ ಮೂರು ಶಬ್ದಗಳ ಷರಾದಲ್ಲಿ ಮುಗಿದು ಹೋಗಬಾರದು. ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಕೊಡುವುದೆಂದರೆ ಅದು ಅವರ ಪ್ರಾಮಾಣಿಕ, ದಕ್ಷತೆಗೆ ಕೊಡುವ ಗೌರವ. ಸರಕಾರದ ಈ ಕ್ರಮ ಅಳಿದುಳಿದ ಪ್ರಾಮಾಣಿಕ ಅಕಾರಿಗಳ ನೈತಿಕ ಬಲವನ್ನು ಹೆಚ್ಚಿಸುತ್ತದೆ. ರವಿಯಂತೆ ಕಾರ್ಯ ನಿರ್ವಹಿಸಲು ಧೈರ್ಯ ಕೊಡುತ್ತದೆ. ಆದುದರಿಂದ ಆತ್ಮಹತ್ಯೆ ಎನ್ನುವುದು ಗೊತ್ತಿದ್ದರೂ, ಮೇಲಿನ ಕಾರಣಕ್ಕಾಗಿ ಸರಕಾರ ರವಿ ಸಾವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು.
ರವಿಯ ಸಾವನ್ನು ಸಿಬಿಐಗೆ ಕೊಡುವುದರಿಂದ ಸರಕಾರಕ್ಕೂ ಒಳಿತಿದೆ. ಆ ಮೂಲಕ ರವಿಯ ಸಾವಿನ ಕಳಂಕದಿಂದ ಸರಕಾರ ಪಾರಾಗಬಹುದು. ಒಂದು ವೇಳೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸದಿದ್ದರೆ ಅದು ಸಹಜವಾಗಿಯೇ ಜನರ ಅನುಮಾನದ ಕಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಷ್ಟೇ ಅಲ್ಲ, ಒಂದು ವೇಳೆ ರವಿಯ ಸಾವು ಆತ್ಮಹತ್ಯೆ ಎಂದು ಸರಕಾರ ಇಷ್ಟು ಬೇಗ ಒಂದು ನಿರ್ಧಾರಕ್ಕೆ ಬಂದರೆ, ಅದು ತಮ್ಮ ವಿರುದ್ಧವಿರುವ ಪ್ರಾಮಾಣಿಕ ಅಕಾರಿಗಳನ್ನು ಕೊಲೆ ಮಾಡುವುದಕ್ಕೆ ದುಷ್ಕರ್ಮಿಗಳಿಗೆ ಪರೋಕ್ಷವಾಗಿ ಧೈರ್ಯ ನೀಡಬಹುದು. ಆದುದರಿಂದ, ರವಿಯ ಸಾವು ಬರೇ ಒಂದು ವಾರದ ತನಿಖೆಯಲ್ಲಿ ಮುಗಿದು ಹೋಗಬಾರದು. 
ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸುವುದರಿಂದ ಇನ್ನಷ್ಟು ಒಳಿತುಗಳಿವೆ. ಅದರಲ್ಲಿ ಮುಖ್ಯವಾಗಿ, ರವಿಗೆ ಬಂದಿರುವ ಫೋನ್  ಕರೆಗಳು, ಬೆದರಿಕೆ ಕರೆಗಳೆಲ್ಲವೂ ಈ ಸಂದರ್ಭದಲ್ಲಿ ವಿಚಾರಣೆಯಾಗುವ ಸಾಧ್ಯತೆಗಳಿವೆ. ಸಾವಿನ ಜೊತೆ ಸಂಬಂಧವಿರಲಿ, ಇಲ್ಲದಿರಲಿ, ರವಿಯ ಸಾವಿನಿಂದ ಒಳಗೊಳಗೇ ಖುಷಿ ಪಟ್ಟ ನೂರಾರು ದುಷ್ಟ ಶಕ್ತಿಗಳು ಬೆಂಗಳೂರಿನಲ್ಲಿವೆ. ಅವರಲ್ಲಿ ಕೆಲವರಾದರೂ ಸಿಬಿಐ ವಿಚಾರಣೆಯಿಂದಾಗಿ ಹಣೆಯ ಬೆವರೊರೆಸಿಕೊಳ್ಳುವಂತಾದರೆ ಬೆಂಗಳೂರಿಗೂ, ನಾಡಿಗೂ ಅದರಿಂದ ಒಳ್ಳೆಯದಾಗುತ್ತದೆ. ಸಿಬಿಐ ಕೇಂದ್ರದ ಆಧೀನದಲ್ಲಿರುವುದರಿಂದ ಸಿಬಿಐ ಅಕಾರಿಗಳನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ತೊಂದರೆ ಮಾಡಬಹುದೆಂಬ ಆರೋಪವಿದೆ. ಸರಕಾರ ಇಂದು ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಅಂಜುತ್ತಿರುವುದು ಇದೇ ಕಾರಣಕ್ಕೆ. ರಾಜಕಾರಣಿಗಳು, ಗಣಿದೊರೆಗಳು, ಬೆಂಗಳೂರಿನ ಕ್ರಿಮಿನಲ್‌ಗಳು ರವಿಯ ಜೊತೆ ಏನಾದರೂ ವ್ಯವಹಾರ ಇಟ್ಟುಕೊಂಡಿದ್ದರೆ, ಎಡವಟ್ಟುಗಳನ್ನು ಮಾಡಿಕೊಂಡಿದ್ದರೆ ಅವರು ವಿಚಾರಣೆಯನ್ನು ಎದುರಿಸಲೇಬೇಕು. ಈ ಕೊಲೆಯ ಜೊತೆಗೆ ಸಂಬಂಧ ಇದ್ದರೂ ಇಲ್ಲದಿದ್ದರೂ ಅವರು ಸಿಬಿಐಗೆ ಮುಖಾಮುಖಿಯಾಗುವುದು ಬೆಂಗಳೂರಿನ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗೆ ವಿಚಾರಣೆ ಎದುರಿಸುವಂತಹ ಎಡವಟ್ಟುಗಳನ್ನು ಮಾಡಿಕೊಂಡ ರಾಜಕಾರಣಿಗಳು ಸರಕಾರದೊಳಗೆ ಇದ್ದರೆ ಅವರನ್ನು ತಕ್ಷಣವೇ ದೂರ ಇರಿಸಿ ಸರಕಾರವನ್ನು, ತನ್ನನ್ನೂ ಕಾಪಾಡಿಕೊಳ್ಳುವುದು ಸಿದ್ದರಾಮಯ್ಯ ಅವರ ಕರ್ತವ್ಯ. ಸಿಬಿಐ ತನಿಖೆಯಿಂದ ಇತರರ ವ್ಯವಹಾರಗಳು ಬಹಿರಂಗವಾಗಬಹುದೆಂಬ ಭಯವಿದ್ದರೆ ಅದು ಮುಖ್ಯಮಂತ್ರಿಯ ವೈಯಕ್ತಿಕ ಸಮಸ್ಯೆಯೇ ಹೊರತು ನಾಡಿನ ಜನರದ್ದಲ್ಲ. 
ಇವೆಲ್ಲವುಗಳ ನಡುವೆ ರವಿ ಅವರು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿದ್ದಾರೆ ಎಂದೇ ಇಟ್ಟುಕೊಳ್ಳೋಣ. ನಿಜ. ಓರ್ವ ನಾಡಿನ ಹಿರಿಯ ಅಕಾರಿಯಾಗಿದ್ದಾನೆಂಬ ಕಾರಣಕ್ಕೆ ಆತ ವೈಯಕ್ತಿಕ ಅನುಭೂತಿಗಳನ್ನು ಹೊಂದಿರಬಾರದು ಎಂದಿಲ್ಲ. ಈ ಹಿನ್ನೆಲೆಯಲ್ಲಿ, ರವಿಯ ಸಾವಿಗೆ ಪ್ರೇಮ ಪ್ರಕರಣವೇ ಕಾರಣವಾಗಿರಬಹುದು. ಆದರೆ ಅದನ್ನು ರಾಜ್ಯ ಸರಕಾರದ ಅಧೀನದಲ್ಲಿರುವ ಸಿಐಡಿ ಹೇಳುವುದಕ್ಕಿಂತ ಕೇಂದ್ರದ ಅಧೀನದಲ್ಲಿರುವ ಸಿಬಿಐ ಹೇಳುವುದೇ ಹೆಚ್ಚು ಪರಿಣಾಮಕಾರಿ. ಹೆಚ್ಚು ಸಾಧುವಾದದ್ದು. 
ಇದೇ ಸಂದರ್ಭದಲ್ಲಿ ವಿರೋಧ ಪಕ್ಷದವರ ಅಪ್ರಾಮಾಣಿಕವಾದ ಹಾರಾಟ ಮೃತದೇಹದ ಮೇಲೆ ಮುಗಿಬಿದ್ದ ಹಸಿದ ರಣಹದ್ದುಗಳಂತಿದೆ. ಈ ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಬಿಜೆಪಿಯ ನಾಯಕರು ತಮ್ಮ ಪಕ್ಷದ ಮಾಜಿ ಶಾಸಕ ರಘಪತಿ ಭಟ್ಟರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಆತ್ಮಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಲು ತಮ್ಮ ಶ್ರಮವನ್ನು ವ್ಯಯಿಸಬೇಕಾಗಿದೆ. ಈಗಾಗಲೇ ರವಿ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಲು ಮುಂದಾಗಿರುವುದರಿಂದ, ಬಿಜೆಪಿ ನಾಯಕರು ತಮ್ಮ ಮುಂದಿನ ಹೋರಾಟವನ್ನು ಈ ಹತಭಾಗ್ಯ ಮಹಿಳೆಯರ ಕಡೆಗೆ ತಿರುಗಿಸಲಿ.

Wednesday, March 18, 2015

ಒಬಾಮ ಮಯ ಈ ಜಗ ಹೃದಯ


ರಸ ಋಷಿ ಕುವೆಂಪು ಅವರ ಕ್ಷಮೆ ಕೋರಿ ..........

ಒಬಾಮ ಮಯ ಈ ಜಗ ಹೃದಯ ಏತಕೆ ಭಯ ಮಾಣೋ 
ಸೂರ್ಯೋದಯ ಚಂದ್ರೋದಯ ದೊಡ್ಡಣ್ಣನ ದಯ ಕಾಣೋ

ಚಹಾ ಇದು ಬರಿ ಚಹವಲ್ಲವೋ 
ಅಣು ಒಪ್ಪಂದದ ಕೃಪೆ ಕಾಣೋ 
ಈ ಒಪ್ಪಂದವು ಬರಿ ಸ(ಸಿ)ಹಿ ಅಲ್ಲವೋ ಆ ಭ್ರಾಂತಿಯ ಮಾಣೋ

ಒಬಾಮ ವದನವು ಮೋದಿ ಸದನವು 
ಬರಿ ಕಣ್ಣದು ಮಣ್ಣು 
ಗಣರಾಜ್ಯದ ಸ್ವಾಯತ್ತೆಗೆ 
ಶವ ಮುಖದ ಕಣ್ಣು

ಉದಯದೊಳೇನ್ ಅಮೇರಿಕವ ಕಾಣ್ 
ಅದೇ ಅಭಿವ್ರುದ್ಧಿಯ ಹಣ್ಣೋ 
ಒಬಾಮ ಭಜನೆಗೆ ಜನ ಕುರುಡರೋ 
ಶವ ಕಾವ್ಯದ ಕಣ್ಣೋ

Monday, March 16, 2015

ಹೂಗುಚ್ಛ ಮತ್ತು ಇತರ ಕತೆಗಳು

ಹೂಗುಚ್ಛ
ಅವರೆಲ್ಲರೂ ಅವನ ಹುಟ್ಟು ಹಬ್ಬಕ್ಕೆಂದು ಆಗಮಿಸಿದ್ದರು.
ಕೈಯಲ್ಲಿ ಹೂಗುಚ್ಛವನ್ನು ಹಿಡಿದುಕೊಂಡು.
ಆದರೆ ಅಂದೇ ಅವನು ಹದಯಾಘಾತದಿಂದ ಮತಪಟ್ಟಿದ್ದ.
ಹೂಗುಚ್ಛ ವ್ಯರ್ಥವಾಗಲಿಲ್ಲ.

ತಟ್ಟೆ
ಒಬ್ಬ ಬಿಸಿಲಲ್ಲಿ ಪೆನ್ನು ಮಾರುತ್ತಿದ್ದ.
ಇನ್ನೊಬ್ಬ ಅವನ ಪಕ್ಕದಲ್ಲೇ ಭಿಕ್ಷೆ ಬೇಡುತ್ತಿದ್ದ.
ಸಂಜೆಯಾಗುವಷ್ಟರಲ್ಲಿ ಭಿಕ್ಷುಕನ ತಟ್ಟೆ ತುಂಬಿತ್ತು.
ಪೆನ್ನು ಮಾರುವವನು ಬರಿ ಗೈಯಲ್ಲಿ ನಿಂತಿದ್ದ.
ಭಿಕ್ಷುಕನಿಗೆ ಅದೇನನ್ನಿಸಿತೋ, ಅವನಿಂದ ಹತ್ತು ಪೆನ್ನುಗಳನ್ನು ಕೊಂಡುಕೊಂಡ.

ಮುಕ್ತಾಯ
ಒಬ್ಬ ಕಾದಂಬರಿಯೊಂದನ್ನು ಬರೆದು ಸಂತನಿಗೆ ಕೊಟ್ಟ.
ಇಡೀ ಕಾದಂಬರಿಯನ್ನು ಓದಿದ ಬಳಿಕ ಸಂತ ಹೇಳಿದ.
‘‘ನೋಡು...ಒಂದು ಕಾದಂಬರಿ ಮುಗಿಯಬಾರದು. ಬೆಳೆಯಬೇಕು. ಅದಕ್ಕಾಗಿ ಮುಕ್ತಾಯದ ಕೊನೆಯ ಪುಟವನ್ನು ಹರಿದು ಬಿಡು’’

ಜೈಲು
ಇಬ್ಬರು ಸ್ವಾಮೀಜಿಗಳು ಅಪರಾಧ ಪ್ರಕರಣದಲ್ಲಿ ಜೈಲು ಸೇರಿದರು.
ಜೈಲಿನೊಳಗಿನ ಕೈದಿಗಳ ಸತ್ಯಸಂಧತೆ, ದುಡಿಮೆ, ಶಿಸ್ತು ಇವೆಲ್ಲವನ್ನು ಕಂಡು ನಿಟ್ಟುಸಿರಿಟ್ಟುಕೊಂಡು ಹೇಳಿಕೊಂಡರು
‘‘ಜೈಲು ನಮ್ಮಂಥವರಿಗಲ್ಲ’’

ಕರೆ
ವೇದಿಕೆಯ ಮೇಲೆ ನಿಂತು ‘ಹೊಡಿಯಿರಿ, ಬಡಿಯಿರಿ, ಬೆಂಕಿ ಹಚ್ಚಿ’’ ಎಂದು ಕರೆಕೊಟ್ಟವ ಭಾಷಣ ಮುಗಿಸಿ ಮನೆಗೆ ತೆರಳಿದ. ತನ್ನ ಮನೆಯನ್ನು ಹುಡುಕಾಡಿದರೆ ಅಲ್ಲೇನಿತ್ತು? ಬೆಂಕಿ ಮತ್ತು ಬೂದಿ. ಜನರು ಆತನ ಕರೆಯನ್ನು ಶಿರಸಾವಹಿಸಿ ಪಾಲಿಸಿದ್ದರು.

ಗಡಿಯಾರ
ಎಡೆ ಬಿಡದೆ ಚಲಿಸುತ್ತಿದ್ದ ಗಡಿಯಾರಕ್ಕೆ ಒಂದು ದಿನ ಜ್ಞಾನೋದಯವಾಯಿತು.
ತಾನು ಚಲಿಸದೇ ಕಾಲ ಚಲಿಸುವುದಿಲ್ಲ ಎಂದು.
ಅಂದು ಬೆಳಗ್ಗೆ ಗಡಿಯಾರ ಚಲಿಸುವುದನ್ನು ನಿಲ್ಲಿಸಿ ಬಿಟ್ಟಿತು.
ಆದರೂ ಅಂದು ಸೂರ್ಯೋದಯವಾಯಿತು.
‘ಗಡಿಯಾರ ಕೆಟ್ಟಿದೆ’ ಎಂದು ಮನೆಯೊಡೆಯ ಅದನ್ನು ಬೀದಿಗೆ ಎಸೆದ.

ತಪ್ಪು
ಕೋಮುಗಲಭೆ ನಡೆಯುತ್ತಿತ್ತು.
ನಡು ರಸ್ತೆಯಲ್ಲಿ ಅವನಿಗೆ ಇರಿಯಲಾಯಿತು.
ಬಳಿಕ ಇರಿದವರಿಗೆ ತಪ್ಪುಗೊತ್ತಾಯಿತು. ಗಾಯಾಳು ನಮ್ಮದೇ ಧರ್ಮೀಯ ಎಂದು.
ಅವರು ಅಲ್ಲಿಂದ ಓಡಿದರು.
ಇನ್ನೊಂದು ಗುಂಪು ಬಂತು. ಗಾಯಾಳು ವಿಲವಿಲ ಒದ್ದಾಡುತ್ತಿದ್ದಾನೆ. ಅವರು ಆಸ್ಪತ್ರೆಗೆ ಸೇರಿದರು.
ಬಳಿಕ ಅವರಿಗೆ ತಪ್ಪು ಗೊತ್ತಾಯಿತು. ಗಾಯಾಳು ನಮ್ಮವನಲ್ಲ ಎಂದು.