Monday, November 9, 2015

ಶ್ರೀ ಗಂಧದ ಮರ ಮತ್ತು ಗೋವು

ನಮ್ಮ ನಾಡು ಗಂಧದ ಮರಗಳಿಗೆ  ಹೆಸರಾಗಿತ್ತು. 
ಆದರೆ ಇಂದು ನಾಡಿನಲ್ಲಿ ಗಂಧದ ಮರಗಳು ತೀವ್ರ ಇಳಿಕೆಗೊಂಡಿವೆ ? ಯಾಕೆ? 
ಗಂಧದ ಮರ ರಕ್ಷಣೆಗೆ ನಿರ್ಮಿಸಿದ ಕಾನೂನುಗಳೇ ಗಂಧದ ಮರ ನಿರ್ಮೂಲನೆಗೆ ಕಾರಣವಾಯಿತು. 
ರೈತನೊಬ್ಬನ ಜಾಗದಲ್ಲಿ ಗಂಧದ ಮರ ಆಕಸ್ಮಿಕವಾಗಿ ಹುಟ್ಟಿ ಬೆಳೆದರೆ ಅದು ಆತನಿಗೆ ದೊಡ್ಡ ತಲೆ ನೋವಾಗಿ ಬಿಡುತ್ತಿತ್ತು. ಒಂದೆಡೆ ಅದರ ಮೇಲೆ ಅರಣ್ಯಾಧಿಕಾರಿಗಳ ಕಣ್ಣು. ಅದನ್ನು ಕಡಿದು ಮಾರಲು ಸಾವಿರ ಕಾನೂನಿನ ತೊಡಕುಗಳು. ಬೆಲೆ ಬಾಳುವ ಗಂಧದ ಮರ ಇದ್ದರು ಅದನ್ನು ಮಾರುವಂತಿಲ್ಲ. ಹೀಗಿರುವಾಗ ಆ ಮರವನ್ನು ಉಳಿಸಲು ಬೆಳೆಸಲು ಅವನು ಯಾಕೆ ಯತ್ನಿಸುತ್ತಾನೆ?
 ಇತ್ತ ಕಳ್ಳರು ರಾತ್ರೋ ರಾತ್ರಿ ಅದನ್ನು ಕದ್ದು ಒಯ್ಯುತ್ತಿದ್ದರು. ಅರಣ್ಯಾಧಿಕಾರಿಗಳು ಅಮಾಯಕ ರೈತನೇ ಕಡಿದು ಮಾರಿದ್ದಾನೆ ಎಂದು ಕ್ರಮ ತೆಗೆದು ಕೊಳ್ಳುತ್ತಿದ್ದರು. ಆದುದರಿಂದ ಗಂಧದ ಎಳೆ  ಗಿಡ ಏನಾದರೂ ಹಿತ್ತಲಲ್ಲಿ ಕಂಡರೆ ತಕ್ಷಣ ಅದನ್ನು ಕಿತ್ತು ಎಸೆಯುತ್ತಿದ್ದರು. ಪರಿಣಾಮ ಇಂದು ನಾಡಿನಲ್ಲಿ ಗಂಧದ ಮರಗಳು  ತೀವ್ರ ಇಳಿಕೆಯಾಗಿದೆ. 
ಇದೀಗ ಗೋವಿನ ಸ್ಥಿತಿ ಕೂಡ ಅದೇ ದಾರಿಯಲ್ಲಿದೆ. ನಮ್ಮ ರೈತರು ದನವನ್ನು ಬದುಕೂದಕ್ಕಾಗಿ ಲಾಭದಾಯಕ ವ್ಯವಹಾರವಾಗಿ ಸಾಕುತ್ತಿದ್ದರು. ಅದೊಂದು ಉದ್ಯಮವಾಗಿತ್ತೆ ಹೊರತು, ಪೂಜಿಸೂದಕ್ಕಾಗಿ ಯಾರೂ ದನವನ್ನು ಸಾಕುತ್ತಿರಲಿಲ್ಲ. ಮಾಂಸಾಹಾರಿಗಳು ಈ ದನದ ಉದ್ಯಮದ ಒಂದು ಮುಖ್ಯ ಭಾಗವಾಗಿದ್ದರು.ಹಾಲು ಕೊಡದ ಗೋವನ್ನು ಸಾಕುವ ವೆಚ್ಚ ಮಾಂಸಾ ಹಾರಿಗಳಿಂದಾಗಿ ಕಡಿಮೆಯಾಗುತ್ತಿತು. 
ಇದೀಗ ಜೀವನದಲ್ಲಿ ಯಾವತ್ತೂ ದನವನ್ನೇ ಸಾಕದ ಜನರು ದನದ ರಕ್ಷಣೆಗೆ ನಿಂತಿದ್ದಾರೆ. ಮನೆಯಲ್ಲಿ ಗೊಡ್ಡು ದನಗಳಿದ್ದರೂ ಅದನ್ನು ಮಾರಲಾಗದಂತಹ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಒಂದೆಡೆ ಕಾನೂನು, ಇನ್ನೊಂದೆಡೆ ಸಂಘ ಪರಿವಾರದ ಗೂಂಡಗಳು, ದನ ಸಾಕಾನೆಯೇ ರೈತರಿಗೆ ತಲೆ ನೋವಿನ ವಿಷಯವಾಗಿ ಬಿಟ್ಟಿದೆ. ಜೊತೆಗೆ ಹಾಲು ಕೊಡದ ದನವನ್ನೂ ಕೊತ್ತಿಗೆಯಲ್ಲಿಟ್ಟು ಸಾಕುವ ಭಾರ. ಹೈನು ಉದ್ಯಮ ಇದರಿಂದ ನಷ್ಟದಾಯಕವಾಗುತ್ತಿದೆ. ಮಗಳ ಮದುವೆ, ಇನ್ನಿತರ ಕಾರ್ಯಕ್ರಮ ಇದ್ದರೆ ದನ ಮಾರಿ ಹಣ ಹೊಂದಾಣಿಕೆ ಮಾಡುವ ಜನರು ಇದೀಗ ದನವನ್ನು ಸಾಕೋದಕ್ಕೆ ಸಾಲ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕಾರಣಕ್ಕೆ ದನ ಸಾಕೊದರಿಂದ ರೈತರು ಹಿಂದೆ ಸರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೂಜಿಸೂದಕ್ಕೂ ದನ ಸಿಗೋದು ಕಷ್ಟವಾಗಲಿದೆ. ಗಂಧದ ಮರಗಳಿಗೆ ಬಂದ ಆಪತ್ತು ಗೋವುಗಳಿಗೂ ಬರಲಿದೆ. ಗೋ ರಕ್ಷಣೆಯ ಹೆಸರಲ್ಲಿ ಗೊಸಾಕಾಣೆಯನ್ನು ವ್ಯವಸ್ಥಿತವಾಗಿ ದುಷ್ಕರ್ಮಿಗಳು ನಾಶ ಮಾಡುತ್ತಿದ್ದಾರೆ.  ಸಂಸ್ಕೃತವನ್ನು ಬಳಸದಂತೆ ಶೂದ್ರರಿಗೆ ಒತ್ತಡ ಹೇರಿ ಸಂಸ್ಕೃತವನ್ನು ಕೊಂದವರು ಇದೀಗ ಗೋವುಗಳ ಸಂತಾನವನ್ನೇ ಅಳಿಸಲು ಹೊರಟಿದ್ದಾರೆ. ಯಾವುದೇ ಪ್ರಾಣಿ ಸಾಕಣೆ ಲಾಭದಾಯಕ ಇಲ್ಲದೆ ಹೋದರೆ ಯಾರದಾರೂ ಯಾಕೆ ಸಾಕುತ್ತಾರೆ? ಇದು ಗೋವಿನ ಹೆಸರಿನಲ್ಲ್ಲಿಸರಕಾರದಿಂದ ಅನುದಾನ ಲೂಟಿ ಹೊಡೆದ ಸ್ವಾಮೀಜಿಗಳಿಗೆ ಹೇಗೆ ಅರ್ಥವಾಗುತ್ತದೆ? 
ಕೃಷಿ, ಹೈನುಗಾರಿಕೆ ಅರ್ಥ ಶಾಸ್ತ್ರದ ಭಾಗವೆ ಹೊರತು ಧರ್ಮ ಶಾಸ್ತ್ರದ ಭಾಗ ಅಲ್ಲ ಎಂದು ಇವರಿಗೆ ತಿಳಿಸಿ ಕೊಡುವವರು ಯಾರು?

No comments:

Post a Comment