Monday, November 9, 2015

ಟಿಪ್ಪು... ನಿನ್ನೊಳಗೇ ಮಹಾ ಭಾರತ!

ನಿನ್ನೊಳಗೊಬ್ಬ ದುರ್ಯೋಧನ
ಶಕ್ತಿಯಲ್ಲ್ಲಿ ಭೀಮ, ಗುರಿಯಲ್ಲಿ ಅರ್ಜುನ
ಸಂಚಿನ ಮನೆಯೊಳಗೆ ಸಿಲುಕಿಕೊಂಡ ಅಭಿಮನ್ಯು
ಒಳಗೆ ಕಣ್ಣೀರಿಡುವ ಕರ್ಣ 
ಇತಿಹಾಸ ಕತ್ತರಿಸಿಕೊಂಡ ಏಕಲವ್ಯನ ಹೆಬ್ಬೆರಳು 
ಟಿಪ್ಪು....
ನಿನ್ನೊಳಗೇ ಒಂದು ಮಹಾ ಭಾರತ!

ಮುಡಿದುಕೊಂಡೆ ಕೆಂಡದಂತಹ ಕನಸುಗಳ
ಏರಿದ್ದು ಕುದುರೆಯನ್ನಲ್ಲ, ಹುಲಿಯನ್ನು!
ಕೆಳಗಿಳಿಯುವಂತಿಲ್ಲ!
ಮುಳ್ಳು ಹಾಸಿನ ಮೇಲೆ ವಿಶ್ರಾಂತಿ!
ನಾಲ್ದಿಕ್ಕುಗಳಲ್ಲಿ ಉರುಳುತ್ತಿರುವ ದಾಳಗಳು
ಕನಸು ನನಸಾಗುವುದು ಸುಲಭವಿಲ್ಲ!

ಕಟ್ಟಿಕೊಂಡೆ ನೆಲದ ಜನರನ್ನು ಬೆನ್ನಲ್ಲಿ
ದಲಿತ ಮಕ್ಕಳಿಗೆ ಎದೆಯ ಊಡಿಸಿದೆ
ಮಾನ ಮುಚ್ಚಿಕೊಳ್ಳಲು ತೆರಿಗೆ ಕಟ್ಟಬೇಕಾದ
ಮಾನಗೇಡಿ ಸಮಾಜದ ವಿರುದ್ಧ ಕತ್ತಿ ಹಿರಿದೆ
ಸಾರಾಯಿಯ ಉರುಳಿಂದ ಉಳಿಸಿದೆ
ಹರಿವ ನದಿಗೆ ಒಡ್ಡು ಕಟ್ಟಿದೆ
ಕೆಸರು ಗದ್ದೆಯಲ್ಲಿ ಹಸಿರು ಬೆಳೆದೆ
ಪುಸ್ತಕ, ವಿಜ್ಞಾನ,ಕಾವ್ಯ ಎಂದು
ಯುದ್ಧರಂಗದಲ್ಲೇ ಕೂತು ತಲೆಕೆಡಿಸಿಕೊಂಡೆ
ನಿನ್ನ ಯೋಚನೆಗೆ ರಾಕೆಟ್‌ನ ವೇಗ
ರಾಜತಂತ್ರಕ್ಕೆ ಹೊಸ ಭಾಷ್ಯ ಬರೆದೆ

ನರಿಗಳು ಬರೆದ ನಿನ್ನ ಚರಿತ್ರೆಯನ್ನು
ನರಿಗಳೇ ಓದಿ ವಿಶ್ಲೇಷಿಸುವಾಗ
ನಿನ್ನ ಮತಾಂಧನೆಂದು ಜರೆವಾಗ
ಶೃಂಗೇರಿ, ಕೊಲ್ಲೂರು, ಶ್ರೀರಂಗಪಟ್ಟಣ
ದೇಗುಲಗಳ ಘಂಟಾನಾದ ನಾಡನ್ನು ಎಚ್ಚರಿಸುತ್ತವೆ!
ಲೂಟಿಕೋರ ಮರಾಠಿಗರಿಂದ, ನಿಜಾಮರಿಂದ, ಬ್ರಿಟಿಷರಿಂದ
ರಕ್ಷಿಸಲ್ಪಟ್ಟ ನಾಡು, ಮನೆ, ಮಠ, ದೇಗುಲಗಳ 
ಗೋಡೆಗಳು ಇತಿಹಾಸದ ಹಸಿ ಸತ್ಯಗಳನ್ನು ತೆರೆದಿಡುತ್ತವೆ

ಯಾವುದು ಮತಾಂತರ!?
ಚಂಡಾಲನನ್ನು ಮನುಷ್ಯನನ್ನಾಗಿ ಪರಿವರ್ತಿಸುವುದು?
ಹೌದು, ಒಂದಿಷ್ಟು ಜನರು ಮತಾಂತರಗೊಂಡರು
ಬದುಕು ಕಂಡುಕೊಂಡರು...
ತಮ್ಮದೇ ಕೆರೆ ನೀರನ್ನು ಬೊಗಸೆಯೆತ್ತಿ ಕುಡಿಯುವಂತಾದರು

ನೀನು ಈ ನೆಲವನ್ನು ಪ್ರೀತಿಸಿದಷ್ಟು ಇನ್ನಾರೂ ಪ್ರೀತಿಸಲಿಲ್ಲ
ತನ್ನ ತಾಯಿ, ಪತ್ನಿ, ಮಕ್ಕಳಿಗಿಂತಲೂ ಹೆಚ್ಚೆಂದು ಬಗೆದೆ
ನಿನ್ನದಾದುದನ್ನೆಲ್ಲ ನಾಡಿಗಾಗಿ ಅರ್ಪಿಸಿ
ಬರಿದಾಗುತ್ತಾ ಹೋದೆ...
ಋಣ ಮುಗಿಯಲಿಲ್ಲ
ತಾಯಿನಾಡಿನ ಋಣವನ್ನು ಒಬ್ಬ ಯೋಧ
ತನ್ನ ಪ್ರಾಣವನ್ನು ಅರ್ಪಿಸದೇ ತೀರಿಸುವುದು ಸಾಧ್ಯವೂ ಇಲ್ಲ

ಬದುಕು ರಣರಂಗವೆಂದು ಹೇಳುವರು
ನಿನಗೋ ರಣರಂಗವೇ ಬದುಕು
ನಿನ್ನನ್ನು ಕೆಡವಿದ್ದು ಬ್ರಿಟಿಷರ ಗುಂಡುಗಳಲ್ಲ
ತನ್ನವರ ವಂಚನೆ, ದ್ರೋಹ

ಇತಿಹಾಸದ ಹಿತ್ತಲಲ್ಲಿ ಹೆಣವಾಗಿ 
ಪೂರ್ಣಯ್ಯ, ಮೀರ್‌ಸಾದಿಕ್‌ಗಳು ಕೊಳೆಯುತ್ತಿದ್ದಾರೆ...
ನೀನೋ ಮತ್ತೆ ಈ ದೇಶದ ಜನಮನದ ಕಣ್ಣುಗಳಲ್ಲಿ
ಬೆಂಕಿಯಾಗಿ ಉರಿಯುತ್ತಿರುವೆ
ಈ ದೇಶವನ್ನು ಕಾಯುತಿರುವೆ! ಪೊರೆಯುತಿರುವೆ!!

No comments:

Post a Comment