Wednesday, September 10, 2014

ಯು. ಆರ್. ಅನಂತಮೂರ್ತಿ-ವಾರ್ತಾಭಾರತಿಯ ಒಂಬುಡ್ಸ್‌ಮನ್

ಪತ್ರಿಕೋದ್ಯಮದ ರಾಜಹೆದ್ದಾರಿಯಲ್ಲಿ ಭಾರೀ ಮದಗಜಗಳು ಓಡಾಡುತ್ತಿರುವ ಕಾಲದಲ್ಲಿ "ವಾರ್ತಾಭಾರತಿ" ತನ್ನದೊಂದು ಕಾಲು ದಾರಿಯನ್ನು ಆರಿಸಿಕೊಂಡಿತು. ಪ್ರಭುತ್ವದ ಪರವಾಗಿರುವ ಬಹುತೇಕ ‘ಮುಖ್ಯವಾಹಿನಿ’ ಕನ್ನಡ ಪತ್ರಿಕೆಗಳ ನಡುವೆ ಒಂದು ವಿರೋಧ ಪಕ್ಷ ಹುಟ್ಟಿಕೊಂಡಿದ್ದೂ ವಾರ್ತಾಭಾರತಿಯ ಮೂಲಕವೇ ಆಗಿದೆ. ತಳಸ್ತರದ ಜನರ ಪಾದ ಅಚ್ಚಿನಿಂದ ಮೂಡಿದ ಈ ದಾರಿ ನಿಧಾನಕ್ಕೆ ರಾಜ ಹೆದ್ದಾರಿಗೆ ಪರ್ಯಾಯ ದಾರಿಯಾಗಿ ವಿಸ್ತಾರಗೊಳ್ಳುತ್ತಿರುವುದನ್ನು ಮೊತ್ತ ಮೊದಲು ಗುರುತಿಸಿದವರು ದಿವಂಗತ ಯು. ಆರ್. ಅನಂತಮೂರ್ತಿ. ಕಳ್ಳುಮುಳ್ಳುಗಳ ಎಡರು ತೊಡರು ದಾರಿಯಲ್ಲಿ ವಾರ್ತಾಭಾರತಿ ಒಂಟಿತನಕ್ಕೆ ಅಂಜದೇ ಮುನ್ನಡೆಯುವುದನ್ನು ಕಂಡ ಅವರು, ತಕ್ಷಣ ತಮ್ಮನ್ನು ವಾರ್ತಾಭಾರತಿಯೊಂದಿಗೆ ಗುರುತಿಸಿಕೊಳ್ಳಲು ಬಯಸಿದರು. ನಾವು ಅವರನ್ನು ತಲುಪುವ ಮೊದಲೇ ಅವರು ನಮ್ಮನ್ನು ತಲುಪಿದರು. ಅಲ್ಲಿಂದ ತನ್ನ ಬದುಕಿನ ಕೊನೆಯ ಉಸಿರಿರುವವರೆಗೆ ವಾರ್ತಾಭಾರತಿಯೊಂದಿಗೆ ಕರುಳ ಸಂಬಂಧವನ್ನು ಉಳಿಸಿಕೊಂಡರು. ಪತ್ರಿಕೆ ಅವರ ಮೂಲಕ ಇನ್ನಷ್ಟು ಬೆಳೆಯುವುದಕ್ಕೆ ಸಾಧ್ಯವಾಯಿತು.

ವಾರ್ತಾಭಾರತಿಯ ಹೆಜ್ಜೆಗೆ ಹೆಜ್ಜೆ ಸೇರಿಸಿದ ಚಿಂತಕರ ಮೊದಲ ಸಾಲಲ್ಲಿರುವವರು, ಮೈಸೂರಿನ ಹಿರಿಯ ಚಿಂತಕ, ದಿವಂಗತ ಕೆ. ರಾಮದಾಸ್. ಅವರು ಪತ್ರಿಕೆಯ ಕುರಿತಂತೆ ಮೈಸೂರಿನ ಚಿಂತಕರೊಡನೆ ಬಹಿರಂಗವಾಗಿ ಚರ್ಚಿಸತೊಡಗಿದರು. ಒಂದೆಡೆ ಅವರು ಪತ್ರಿಕೆಯ ಕುರಿತಂತೆ ತನ್ನ ಅನಿಸಿಕೆಯನ್ನು ಹೀಗೆ ದಾಖಲಿಸಿದ್ದಾರೆ ‘‘ವರ್ತಮಾನದ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟವಾದ ಮತ್ತು ಪ್ರಾಮಾಣಿಕವಾದ ಜನಪರ ಕಾಳಜಿಯಿಂದ ಮೂರ್ತವಾಗಿರುವ ವಾರ್ತಾಭಾರತಿಯನ್ನು ನಾನು ಹೆಮ್ಮೆಯಿಂದ ಓದುತ್ತೇನೆ. ಅಷ್ಟೇ ಅಲ್ಲ, ಪತ್ರಕರ್ತ ಮಿತ್ರರಿಗೆ ವಾರ್ತಾಭಾರತಿಯ ಮಾದರಿಯನ್ನು ಗಮನಿಸಲು ಒತ್ತಾಯಿಸುತ್ತಿದ್ದೇನೆ. ವಾರ್ತಾ ಭಾರತಿಯ ವಿನ್ಯಾಸ, ಮುದ್ರಣ ಮತ್ತು ಅಂಕಣಗಳ ಆದ್ಯತೆಗಳು, ವರದಿಗಳ ವಸ್ತುನಿಷ್ಠತೆ, ಸಾಮಾಜಿಕ-ಸಾಂಸ್ಕೃತಿಕ ಜೀವ ಪರ ಕಾಳಜಿಯ ಬೌದ್ಧಿಕ ಚರ್ಚೆ, ಸಂಪಾದಕೀಯ, ಜನಪರ ಬದ್ಧತೆಗಳು ತಮ್ಮ ಅಂಕಣಗಳ ಚೌಕಟ್ಟನ್ನು ದಾಟಿಕೊಂಡು ಓದುಗರನ್ನು ಸ್ಪರ್ಶಿಸುತ್ತವೆ. ಬಹುರೂಪಿ ಸಾಂಸ್ಕೃತಿಕತೆಯ ಕರಾವಳಿಯ ಜೀವನವನ್ನು ಪರಿಣಾಮಕಾರಿಯಾಗಿ ಪತ್ರಿಕೆ ಪ್ರತಿಬಿಂಬಿಸುತ್ತಿದೆ.’’

ರಾಮ್‌ದಾಸ್ ಪತ್ರಿಕೆಯನ್ನು ಗಂಭೀರವಾಗಿ ಗಮನಿಸುತ್ತಿರುವುದು ನಮಗೊಂದು ಎಚ್ಚರಿ ಕೆಯ ಗಂಟೆಯಾಗಿತ್ತು. ಇದೇ ಸಂದರ್ಭದಲ್ಲಿ ಒಂದು ಬೆಳಗ್ಗೆ ಪತ್ರಿಕಾ ಕಚೇರಿಗೆ ಯು. ಆರ್. ಅನಂತಮೂರ್ತಿಯವರು ಕರೆ ಮಾಡಿದರು. ನಕ್ಸಲ್ ಸಮಸ್ಯೆ ಕುರಿತಂತೆ ವಾರ್ತಾಭಾರತಿ ಬರೆದ ಸಂಪಾದಕೀಯದ ಕುರಿತಂತೆ ಅವರು ಮಾತನಾಡುತ್ತಿದ್ದರು. ಫೋನನ್ನು ನಾನು ಎತ್ತಿಕೊಂಡಿದ್ದೆ. ಅದೊಂದು ರೋಮಾಂಚನದ ಕ್ಷಣ. ಅವರು ತಾಯಿಯ ಪ್ರೀತಿಯನ್ನು ಮಾತಿನಲ್ಲಿ ತುಂಬಿಕೊಂಡು ಆಡುತ್ತಿದ್ದರು. ‘‘ಈ ವಿಷಯದ ಕುರಿತಂತೆ ನಾನು ಬರೆಯು ವುದಿದ್ದರೂ ಇದನ್ನೇ ಬರೆಯುತ್ತಿದ್ದೆ. ತುಂಬಾ ತುಂಬಾ ಇಷ್ಟವಾಯಿತು. ಪತ್ರಿಕೆ ಚೆನ್ನಾಗಿ ಬರುತ್ತಿದೆ’’ ನಮಗೆ ಮಾತಿಗೆ ಅವಕಾಶವೇ ಇರಲಿಲ್ಲ. ಅಂದಿನಿಂದ ಯಾವುದೇ ಸಂಪಾದಕೀಯ ಮೆಚ್ಚುಗೆಯಾದರೂ ಅವರು ಬೆಳ್ಳಂಬೆಳಗ್ಗೆ ಏಳುಗಂಟೆಯ ಹೊತ್ತಿಗೆ ಫೋನ್ ಮಾಡತೊಡಗಿದರು. ಪತ್ರಿಕೆಯ ಸಂಪಾದಕರಿಗೆ ಸಂಪಾದಕೀಯ ಬರೆಯುವುದು ಇನ್ನಷ್ಟು ಸವಾಲಾಗಿ ಪರಿಣ ಮಿಸಿದ್ದು ಯು. ಆರ್. ಅನಂತಮೂರ್ತಿ ಅದನ್ನು ಓದುತ್ತಾರೆ ಎನ್ನುವ ಕಾರಣಕ್ಕಾಗಿ. ಯಾವುದೇ ವಿಷಯವಿರಲಿ. ನಮ್ಮ ಸಂಪಾದಕೀಯ ಸದಾ ಜೀವಪರ ನಿಲುವನ್ನು ಹೊಂದಿರುತ್ತಿತ್ತು. ಆ ಕಾರಣಕ್ಕೆ ಅನಂತಮೂರ್ತಿಯಂತಹ ಚಿಂತಕರಿಗೆ ಅದು ಇಷ್ಟವಾಗಿತ್ತು. ಅನಂತಮೂರ್ತಿಯ ಕಣ್ಗಾವಲು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಕೆಲವೊಮ್ಮೆ, ನಮ್ಮ ನಿಲುವುಗಳಿಗೂ ಅನಂತಮೂರ್ತಿಯವರ ನಿಲುವುಗಳಿಗೂ ತಿಕ್ಕಾಟ ಕಾಣಿಸಿಕೊಳ್ಳುತ್ತಿತ್ತು. ಮುಖ್ಯವಾಗಿ ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ. ಅಂತಹ ಸಂದರ್ಭದಲ್ಲಿ ಅನಂತಮೂರ್ತಿ ಯಾವ ಕಾರಣಕ್ಕೂ ಪತ್ರಿಕೆಯ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುತ್ತಿರಲಿಲ್ಲ. ಕೆಲವೊಮ್ಮೆ ನಮ್ಮ ನಿಲುವುಗಳು ತೀರಾ ತೀಕ್ಷ್ಣ ಎನಿಸಿದಾಗ ಅವರು ತನ್ನ ತಂಪಾದ ದನಿಯಲ್ಲಿ ನಮ್ಮನ್ನು ಎಚ್ಚರಿಸುತ್ತಿದ್ದರು. ಅನಂತಮೂರ್ತಿಯವರ ದೂರವಾಣಿ ಕರೆ ಬಂತು ಎನ್ನುವಾಗಲೇ, ಅದನ್ನು ಎತ್ತಬೇಕೋ ಬೇಡವೋ ಎನ್ನುವಷ್ಟು ನಾವು ಗಲಿಬಿಲಿಗೊಳ್ಳುತ್ತಿದ್ದೆವು. ಅವರು ಇರುವಷ್ಟು ದಿನ ಪತ್ರಿಕೆಯ ಆತ್ಮಸಾಕ್ಷಿಯಾಗಿ ಕೆಲಸ ನಿರ್ವಹಿಸಿದರು.


ಪತ್ರಿಕೆಯ ಎಲ್ಲ ವಿಶೇಷ ಸಮಾರಂಭಗಳಲ್ಲೂ ಅವರು ಅತ್ಯಾಸಕ್ತಿಯಿಂದ ಭಾಗವಹಿಸುತ್ತಿದ್ದರು. ಮತ್ತು ಎಲ್ಲ ವಾರ್ಷಿಕ ವಿಶೇಷಾಂಕಗಳಲ್ಲೂ ಅವರ ಉಪಸ್ಥಿತಿ ಆ ಸಂಚಿಕೆಗಳ ಹೆಗ್ಗಳಿಕೆಯಾ ಗಿರುತ್ತಿತ್ತು. ಪತ್ರಿಕೆ ಐದನೆ ವರ್ಷಕ್ಕೆ ಕಾಲಿಟ್ಟಾಗ ಅವರು ತಮ್ಮ ಲೇಖನ ದಲ್ಲಿ ಪತ್ರಿಕೆಯನ್ನು ಒಬ್ಬಂಟಿ ಪಯಣವೆಂದು ಬಣ್ಣಿಸಿದ್ದರು. ಅದಾಗಲೇ ತನಗನ್ನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ಅವರು ಒಬ್ಬಂಟಿ ಯಾಗಿದ್ದರು. ಪತ್ರಿಕೆಗಳನ್ನೂ ಟೀಕಿಸಲು ಹೆದರುತ್ತಿರಲಿಲ್ಲ. ಆ ಸಂದರ್ಭದಲ್ಲೇ ಅವರು ‘‘ಒಂಟಿತನಕ್ಕೆ ಹೆದರದವರ ಸಮುದಾಯ’’ ಎಂಬ ಲೇಖನವನ್ನು ಪತ್ರಿಕೆಗೆ ಬರೆದರು. ಅದರಲ್ಲಿ ತನ್ನೊಳಗಿನ ಸಂಕಟಗಳನ್ನು ಹೀಗೆ ತೋಡಿಕೊಂಡರು ‘‘ಎಲ್ಲ ಬಗೆಯ ತೀವ್ರವಾದಿಗಳೂ ಹೀಗೆ ನಮ್ಮ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತಹ ದಿಕ್ಕು ಗೆಡುವ, ದಿಕ್ಕು ತಪ್ಪಿಸುವ ಸಂದರ್ಭದಲ್ಲೂ ಒಂದು ಕೃತಿಯಾಗಿ ನೋಡಿ, ಎಲ್ಲ ಕ್ರಿಯೆಗಳನ್ನೂ ಸತ್ಯದ ಒರೆಗಲ್ಲಿಗೆ ಹಚ್ಚಿ ನೋಡಿ, ನಮ್ಮ ವಿಮರ್ಶೆಯನ್ನು ಯಾವ ಹಂಗಿಲ್ಲದೆ, ದಿಗಿಲಿಲ್ಲದೆ ಮಾಡುವ ಆಸೆಯನ್ನು ನಾವು ಕಳೆದುಕೊಳ್ಳಕೂಡದು. ಅದಕ್ಕೆ ಅಗತ್ಯವಾದ ನಿಷ್ಠುರದ ಭಾಷೆಯನ್ನೂ, ಮನಃಸ್ಥಿತಿಯನ್ನು ನಾವು ನಮ್ಮ ಅಂತರಂಗದ ಒಳಗೂ, ನಮ್ಮ ಸಮಾಜದಲ್ಲೂ ಸೃಷ್ಟಿಸುವ ಪರೀಕ್ಷೆಯಲ್ಲಿ, ಜನಪ್ರಿಯವಾಗುವಂತೆ ಬರೆಯುವ, ಮಾತನಾಡುವ ಗೀಳನ್ನು ಬಿಡಬೇಕಾಗಿದೆ. ಜನಪ್ರಿಯವಾಗಲೆಂದು ಯಾವುದಕ್ಕೂ ಹೇಸದ ಬಲಿಷ್ಠರ ಮೀಡಿಯಾ ಗಳನ್ನು ನಿರ್ಲಕ್ಷಿಸಬೇಕಾಗಿದೆ. ಅಂದರೆ ಒಂಟಿತನಕ್ಕೆ ಹೆದರದವರೇ ಒಂದು ಸಮುದಾಯವಾಗಬೇಕಾಗಿದೆ’’ ಇದನ್ನು ಅನಂತಮೂರ್ತಿ ತಮ್ಮ ಕೊನೆಯ ದಿನದವರೆಗೂ ಪಾಲಿಸಿಕೊಂಡು ಬಂದರು.

ವಾರ್ತಾಭಾರತಿಯ ಹತ್ತನೆ ವರ್ಷದ ವಿಶೇಷಾಂಕದಲ್ಲಂತೂ ಒಂದು ಪತ್ರಿಕೆ ಯಾವುದನ್ನು ಮಾಡ ಬಾರದು ಎನ್ನುವುದರ ಕುರಿತಂತೆ ಅತ್ಯಂತ ಕಾಳಜಿಯಿಂದ ಬರೆದರು. ಬಣ್ಣ ಬಣ್ಣದ ಜಾಹೀರಾತುಗಳನ್ನು ತುಂಬಿಕೊಂಡು, ಅವರದೇ ಹಣದಲ್ಲಿ ನಡೆಯುವ ಪತ್ರಿಕೆಗಳ ಕುರಿತಂತೆ ಈ ಲೇಖನದಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಜಾಹೀರಾತುದಾರರ ದುಡ್ಡಿನಿಂದ ನಡೆಯುವ ಪತ್ರಿಕೆ ಓದುಗರಿಗೆ ನಿಷ್ಠವಾಗಿರಲು ಸಾಧ್ಯವಿಲ್ಲ. ಆದುದರಿಂದ ದಿನಪತ್ರಿಕೆಗಳು ಓದುಗರ ದುಡ್ಡಿನಿಂದಲೇ ನಡೆಯಬೇಕು ಎಂದು ಅವರು ಅವರು ಆ ಲೇಖನದಲ್ಲಿ ಆಗ್ರಹಿಸಿದರು. ‘‘ಇಂದು ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಯೋದಿಲ್ಲ. ಆ ಕಾರಣಕ್ಕಾಗಿಯೇ ಹಲವು ಪತ್ರಿಕೆಗಳು ಮುಚ್ಚಿವೆ. ಇಂದು ಪತ್ರಿಕೆಗಳು ಓದುಗರ ದುಡ್ಡಿನಿಂದ ನಡೆಯುವಂತಾಗಬೇಕು. ಆಗ ಮಾಧ್ಯಮಗಳು ತನಗನ್ನಿಸಿದ್ದನ್ನು ಮಾಡಲು ಸಾಧ್ಯ. ಇದು ಒಮ್ಮೆಲೆ ಆಗುತ್ತದೆ ಎಂದಲ್ಲ. ಆದರೆ ನಿಧಾನಕ್ಕಾದರೂ ಇದನ್ನು ಮಾಡಬೇಕಾಗಿದೆ. ಇದು ಆಗುತ್ತದೆ. ಆಗಬೇಕು ಎನ್ನುವುದು ನನ್ನ ಆಶಯ’’ ಎಂದು ಅವರು ಕಾಳಜಿ ವ್ಯಕ್ತಪಡಿಸಿದ್ದರು. ವಾರ್ತಾಭಾರತಿ ಪತ್ರಿಕೆಯ ಬೀಜದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆ ‘ಗಾರ್ಡಿಯನ್’ನ ಗುಣ ಲಕ್ಷಣಗಳಿರುವುದನ್ನು ಅವರು ಗುರುತಿಸಿ ಆ ಲೇಖನದಲ್ಲಿ ಬರೆದರು. ಓದುಗರೇ ಕಟ್ಟಿ ಬೆಳೆಸಿದ ಪತ್ರಿಕೆ ಗಾರ್ಡಿಯನ್. ಇಂದಿಗೂ ಅದು ಓದುಗರಿಗೆ ನಿಷ್ಠವಾಗಿದೆ. ವಾರ್ತಾಭಾರತಿ ಈ ದಾರಿಯಲ್ಲಿ ಮುನ್ನಡೆಯಬೇಕು ಎಂದು ಅವರು ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟರು. ಇಷ್ಟೇ ಅಲ್ಲ. ವಾರ್ತಾಭಾರತಿಯ ಕುರಿತಂತೆ ಅವರ ಪ್ರೀತಿ, ವಿಶ್ವಾಸ, ನಂಬಿಕೆ ಎಲ್ಲಿಯವರೆಗೆ ಇತ್ತು ಎಂದರೆ, ತಮ್ಮ ‘ಮಾತು ಸೋತ ಭಾರತ’ ಕೃತಿಯ ಮುನ್ನುಡಿಯಲ್ಲೂ ಅವರು ಪತ್ರಿಕೆಯನ್ನು ಪ್ರಸ್ತಾಪಿಸುತ್ತಾರೆ ‘‘ವಾರ್ತಾಭಾರತಿ ಪತ್ರಿಕೆಯ ಇಡೀ ತಂಡ, ನಮ್ಮ ಮಾನವೀಯತೆಯನ್ನು ಕಾಯಬಲ್ಲವರಾಗಿದ್ದಾರೆ. ವಾರ್ತಾಭಾರತಿ ಪತ್ರಿಕೆಯ ಈ ದಿನಗಳ ಸಂಪಾದಕೀಯಗಳಂತೂ ನನಗೆ ಬಹಳ ಪ್ರಿಯವಾಗಿವೆ. ಸದ್ಯ ಎಲ್ಲ ಕನ್ನಡ ಪತ್ರಿಕೆಗಳಿಗಿಂತ ಗುಣದಲ್ಲಿ ಶ್ರೇಷ್ಠವಾಗಿರುವ ಈ ಪತ್ರಿಕೆ ಯಾವ ರಾಜಿಯನ್ನೂ ಮಾಡಿಕೊಳ್ಳದಂತೆ ಬೆಳೆಯಬೇಕು ಎಂಬು ನನ್ನ ಆಶಯ’’


ತಮ್ಮ ಬದುಕಿನ ಕೊನೆಯ ಐದು ವರ್ಷಗಳನ್ನು ಅನಾರೋಗ್ಯದಿಂದ ಕಳೆದರು. ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ವಾರಕ್ಕೆ ಒಂದು ಬಾರಿ ಡಯಾಲಿಸಿಸ್ ನಡೆಸಬೇಕಾಗುತ್ತಿತ್ತು. ಆದರೆ ಅವರ ಮುಖದ ನಳನಳಿಸುವ ನಗು ಅವರನ್ನು ಕೊನೆಯವರೆಗೂ ಅತ್ಯಂತ ಆರೋಗ್ಯಕರ ವ್ಯಕ್ತಿಯಾಗಿ ಉಳಿಸಿತ್ತು. ವಾರ್ತಾಭಾರತಿಯ ತಂಡ ತಮ್ಮ ಮನೆಗೆ ಬರುವುದನ್ನೇ ಕಾಯುತ್ತಿರುವವರಂತೆ ಅವರು ಸ್ವಾಗತಿ ಸುತ್ತಿದ್ದರು. ಒಮೊಮ್ಮೆ ವಾರ್ತಾಭಾರತಿಯ ಮಂಗಳೂರಿನ ಗೆಳೆಯರಿಗೆ ದೂರವಾಣಿ ಕರೆ ಮಾಡಿ ‘‘ಒಳ್ಳೆಯ ಮೀನು ಇದ್ದರೆ ಕಳುಹಿಸಿ’’ ಎಂದು ತನ್ನ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ವಾರ್ತಾಭಾರತಿ ಕಚೇರಿಯ ದೊಡ್ಡವರೊಂದಿಗೂ, ಸಣ್ಣವರೊಂದಿಗೂ ಅವರು ಇಟ್ಟುಕೊಂಡ ಬಾಂಧವ್ಯ ಮರೆಯಲಾಗದ್ದು.


ಇಂದು ಅನಂತಮೂರ್ತಿ ಇಲ್ಲ. ಆದರೆ ವಾರ್ತಾಭಾರತಿ ಮಾತ್ರ ಅವರಿನ್ನೂ ಇದ್ದಾರೆ ಎಂದೇ ನಂಬಿಕೊಂಡಿದೆ. ಸಂಪಾದಕೀಯ ಬರೆಯಲು ಕುಳಿತಾಗ, ಇದನ್ನು ಅನಂತಮೂರ್ತಿ ಓದುತ್ತಾರೆ ಎಂಬ ಕಂಪನದೊಂದಿಗೇ ಸಾಲನ್ನು ಆರಂಭಿಸುತ್ತಿ ದ್ದೇವೆ. ಅನಂತಮೂರ್ತಿಯ ಕಣ್ಗಾವಲು ನಮ್ಮಲ್ಲಿ ಧೈರ್ಯ ತುಂಬಿದೆ. ನಮ್ಮನ್ನು ವಿವೇಕಿಗಳನ್ನಾಗಿಯೂ, ಸಹನಶೀಲರನ್ನಾಗಿಯೂ ಮಾಡಿದೆ. ಅನಂತಮೂರ್ತಿಯವರು ವಾರ್ತಾಭಾರತಿ ಪತ್ರಿಕೆಯ ಮೂಲಕ ಮುಂದೆಯೂ ಕನ್ನಡ ನಾಡಿನ ಮೂಲೆಮೂಲೆಯನ್ನು ತಲುಪಲಿದ್ದಾರೆ. ಇದರಲ್ಲಿ ಸಂಶಯವಿಲ್ಲ.

2 comments:

  1. ಸಂಪಾದಕೀಯ ಬರೆಯಲು ಕುಳಿತಾಗ, ಇದನ್ನು ಅನಂತಮೂರ್ತಿ ಓದುತ್ತಾರೆ ಎಂಬ ಕಂಪನದೊಂದಿಗೇ ಸಾಲನ್ನು ಆರಂಭಿಸುತ್ತಿ ದ್ದೇವೆ- great sir

    ReplyDelete