Thursday, April 17, 2014

ಮುಸ್ಲಿಮರ ಕುರಿತಂತೆ ಹರಡಿದ ಕೆಲವು ಮಿಥ್ಯೆಗಳು

ಇಂಗ್ಲಿಷ್ ಮೂಲ: ನಿವೇದಿತಾ ಮೆನನ್ 

ಈ ಬಾರಿಯ ಸಾರ್ವತ್ರಿಕ ಚುನಾವಣೆ ಆರಂಭ ವಾಗಿರುವಂತೆಯೇ ಅಗತ್ಯವಾದುದನ್ನು ಹೇಳಲೇಬೇಕಾದ ಸಮಯ ಇನ್ನೊಮ್ಮೆ ಬಂದಿದೆ. ಭಾರೀ ಪ್ರಮಾಣದ ಪ್ರಚಾರಾಭಿನಯ, ಏಕತಾನತೆಗಳಿಂದ ಕೂಡಿದ ಸುಳ್ಳು ಮಾತು ಗಳಿಗೆ ಮತ್ತೆ ಜೀವ ಬಂದಿದೆ. ಈ ರಾಜಕೀಯ ಸಂದರ್ಭದಲ್ಲಿ ವಿಶ್ವದ ಅತಿ ಎರಡನೆ ದೊಡ್ಡ ಧರ್ಮವೊಂದರ ಅನುಯಾಯಿಗಳ ಬಗ್ಗೆ ಪಾಶ್ಚಿಮಾತ್ಯ ಮತ್ತು ಭಾರತೀಯ ಮಾಧ್ಯಮಗಳು ಹರಡುವ, ಹರಡಿರುವ ಸುಳ್ಳುಗಳು ಮೇಲಕ್ಕೆ ಬಂದು ನಿಲ್ಲುತ್ತವೆ. ಮಾಧ್ಯಮಗಳು ಮತ್ತು ರಾಜಕಾರಣಿಗಳು ಜಾಗತಿಕ ಮುಸ್ಲಿಮರ ಕುರಿತಂತೆ ಹರಡುತ್ತಿರುವ ಸುಳ್ಳುಗಳನ್ನು ಒಡೆಯುವ ಮತ್ತು ಸತ್ಯವನ್ನು ತೆರೆದಿಡುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.

ಸುಳ್ಳು: ಮುಸ್ಲಿಂ ರಾಷ್ಟ್ರಗಳು ಎಂದೂ ಜಾತ್ಯತೀತವಲ್ಲ. ಮುಸ್ಲಿಮರು ಬಹುಸಂಖ್ಯಾತವಾಗಿರುವ ‘ತಮ್ಮ’ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಸಹಿಸುವುದಿಲ್ಲ. ಆದರೆ ಇತರ ದೇಶಗಳಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಒತ್ತಾಯಿಸುತ್ತಾರೆ.

ನಿಜ: ಇಂಡೋನೇಶ್ಯ ವಿಶ್ವದ ಅತಿದೊಡ್ಡ ಮುಸ್ಲಿಂ ಬಾಹುಳ್ಯದ ದೇಶವಾಗಿದೆ. (ಒಟ್ಟು ಜನಸಂಖ್ಯೆ ಅಂದಾಜು 25 ಕೋಟಿ. ಪಾಕಿಸ್ತಾನಕ್ಕಿಂತ ಹೆಚ್ಚು.) ಇಂಡೋನೇಶ್ಯ ಒಂದು ಜಾತ್ಯತೀತ ಪ್ರಜಾಪ್ರಭುತ್ವವುಳ್ಳ ದೇಶವಾಗಿದೆ. ನಿಜವಾಗಿಯೂ ಅದರ ಜನಸಂಖ್ಯೆ ಭಾರತದ ಕನ್ನಡಿಯ ಪ್ರತಿಬಿಂಬವಾಗಿದೆ. ಶೇ.88 ಮುಸ್ಲಿಮರು, ಶೇ.9ಕ್ರೈಸ್ತರು, ಶೇ.3ಹಿಂದೂಗಳು, ಶೇ. 2 ಬೌದ್ಧರು ಇತ್ಯಾದಿ.. (ಭಾರತದಲ್ಲಿ ಶೇ.80 ಹಿಂದೂಗಳು, ಶೇ.13.4 ಮುಸ್ಲಿಮರು, ಶೇ.2.3 ಕ್ರೈಸ್ತರು ಇತ್ಯಾದಿಗಳಿ ದ್ದಾರೆ.)‘ವಿವಿಧತೆಯಲ್ಲಿ ಏಕತೆ’ ಇಂಡೋನೇಶ್ಯದ ರಾಷ್ಟ್ರೀಯ ಘೋಷಣೆಯಾಗಿದೆ. ಇಂಡೋನೇಶ್ಯದಲ್ಲೂ ಆಗಾಗ ದಂಗೆಗಳು, ಬಾಂಬ್ ಸ್ಫೋಟಗಳಾಗುತ್ತವೆ. ಭಾರತದಲ್ಲೂ ಆಗುತ್ತವೆ. ವಾಸ್ತವವಾಗಿ ಪ್ರಪಂಚದ ಮುಸ್ಲಿಂ ಬಾಹುಳ್ಯದ ಹೆಚ್ಚಿನ ದೇಶಗಳು ಜಾತ್ಯತೀತವಾಗಿವೆ. ಟರ್ಕಿ, ಮಾಲಿ, ಸಿರಿಯ, ನೈಗರ್ ಹಾಗೂ ಕಝಕಿಸ್ತಾನಗಳನ್ನು ಇದಕ್ಕೆ ಉದಾಹರಣೆ ನೀಡಬಹುದು. ಇಸ್ಲಾಂ ‘ರಾಷ್ಟ್ರೀಯ ಧರ್ಮ’ವಾಗಿದ್ದರೂ ಬಾಂಗ್ಲಾದೇಶ ಸರಕಾರ ಕಾನೂನಿನಲ್ಲಿ ಜಾತ್ಯತೀತವಾಗಿದೆ. ಇತರ ಅನೇಕ ದೇಶಗಳಲ್ಲೂ ಇದು ನಿಜವಾಗಿದೆ.
ವಿಶ್ವದ ಕೇವಲ 6 ದೇಶಗಳಷ್ಟೇ ತಮ್ಮ ಕಾನೂನು ರಚನೆಗೆ ಇಸ್ಲಾಂ ಆಧಾರವೆಂದು ಹೇಳುತ್ತಿವೆ. ಅವುಗಳ ಒಟ್ಟು ಜನಸಂಖ್ಯೆಯು ಇಂಡೋನೇಷ್ಯ, ಟರ್ಕಿ ಹಾಗೂ ಕಝಕಿಸ್ತಾನ ಗಳ ಒಟ್ಟು ಜನಸಂಖ್ಯೆಯಷ್ಟಿದೆ. ಎಂದರೆ, ಹೆಚ್ಚಿನ ಮುಸ್ಲಿಂ ಬಾಹುಳ್ಯದ ದೇಶಗಳು ಜಾತ್ಯತೀತವಾಗಿವೆ ಹಾಗೂ ಬಹುಸಂಖ್ಯಾತ ಮುಸ್ಲಿಮರು ಜಾತ್ಯತೀತ ಸರಕಾರಗಳ ಅಡಿಯಲ್ಲಿ ಬದುಕುತ್ತಿದ್ದಾರೆ.

ಸುಳ್ಳು: ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು.


ನಿಜ: ಭಾರತದಲ್ಲಿ ಭಯೋತ್ಪಾದಕರು ಯಾರೆಂಬ ಬಗ್ಗೆ ನಾವು ಸರಕಾರದ ವ್ಯಾಖ್ಯೆಯನ್ನು ಅಂಗೀಕರಿಸಿದರೂ, ಇದು ಸಂಪೂರ್ಣ ಸತ್ಯವಲ್ಲ. ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ ‘ಭಯೋತ್ಪಾದಕರೆಂದು’ ನಿಷೇಧಿಸಲಾಗಿರುವ ಮುಸ್ಲಿಂ ಸಂಘಟನೆಗಳು ಮೂರನೆ ಒಂದಕ್ಕಿಂತಲೂ ಕಡಿಮೆಯಿದೆ. ಅಂತಾರಾಷ್ಟ್ರೀಯವಾಗಿ ವಿಶ್ವದಲ್ಲಿ ಅತಿ ಹೆಚ್ಚು ಆತ್ಮಹತ್ಯಾ ದಾಳಿಗಳನ್ನು ನಡೆಸುವ ಗುಂಪು ಶ್ರೀಲಂಕಾದ ಎಲ್ಟಿಟಿಇಯಾಗಿದ್ದು, ಅವರ ಸದಸ್ಯರು ಹೆಚ್ಚಿನವರು ಹಿಂದೂಗಳು ಹಾಗೂ ಕ್ರೈಸ್ತ ಮೂಲದವರು.
ಮುಸ್ಲಿಂ ಸಂಘಟನೆಗಳು ಭಾರತದಲ್ಲಿ ಹೆಚ್ಚು ಹಿಂಸಾಚಾರ ನಡೆಸುತ್ತಿವೆಯೆಂಬುದೂ ಸತ್ಯವಲ್ಲ. ದಕ್ಷಿಣ ಏಷ್ಯಾದ ಭಯೋತ್ಪಾದನೆಯ ಪೋರ್ಟಲ್ ಒಂದರ ಪ್ರಕಾರ 2005ರಿಂದ 14ರ ಅವಧಿಯಲ್ಲಿ ಇದರ ಎರಡು ಪಾಲು ಜನರು ಈಶಾನ್ಯದ ಉಗ್ರವಾದಿ ಸಂಘಟನೆಗಳು ಹಾಗೂ ‘ಎಡಪಂಥೀಯ ತೀವ್ರವಾದಿಗಳ’ಭಯೋತ್ಪಾದಕ ಚಟುವಟಿಕೆಗಳಿಗೆ ಬಲಿಯಾಗಿ ದ್ದಾರೆ. ಇವೆಲ್ಲ ಮುಸ್ಲಿಮೇತರ ಸಂಘಟನೆಗಳಾಗಿದ್ದು, ಈಶಾನ್ಯದ ಅತಿದೊಡ್ಡ ಸಂಘಟನೆಯಾಗಿರುವ ಉಲ್ಫಾದಲ್ಲಿ ಹೆಚ್ಚು ಹಿಂದೂಗಳು ಹಾಗೂ ಮೇಲ್ಜಾತಿಗಳ ನಾಯಕತ್ವವಿದೆ.
 ಅಲ್ಲದೆ ಭಯೋತ್ಪಾದನೆಯ ಕುರಿತು ಸರಕಾರ ಉಪಯೋಗಿ ಸುತ್ತಿರುವ ವ್ಯಾಖ್ಯೆ ವಿರೋಧಾಭಾಸದಿಂದ ಕೂಡಿದೆ. ಬಾಂಬ್ ಸ್ಫೋಟದಿಂದ 20 ಮಂದಿಯನ್ನು ಕೊಲ್ಲುವುದು ಭಯೋತ್ಪಾದನೆ ಯೆಂದು ಪರಿಗಣಿಸಲ್ಪಡುತ್ತದೆ. ಆದರೆ, 1984ರಲ್ಲಿ ಸಾವಿರಾರು ಜನರ ಹತ್ಯೆ, 2002ರಲ್ಲಿ ಗುಜರಾತ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯ ಕೊಲೆ (ಅಥವಾ ಮುಝಫ್ಫರ್ ನಗರದಲ್ಲಿ)40 ಮಂದಿಯ ಹತ್ಯೆ, 2008ರಲ್ಲಿ ಒಡಿಶಾದಲ್ಲಿ 68 ಮಂದಿಯ ಹತ್ಯೆ...ಇತ್ಯಾದಿ) ಭಯೋತ್ಪಾದನೆ ಎನಿಸುವುದಿಲ್ಲ. ಎಲ್ಲ ಹಿಂಸಾಚಾರ ಘಟನೆಗಳಲ್ಲಿ ಯೋಜನೆ, ಶಸ್ತ್ರಾಸ್ತ್ರ ದಾಸ್ತಾನು ಹಾಗೂ ವ್ಯವಸ್ಥಿತ ದಾಳಗಳು ಒಳಗೊಂಡಿದ್ದವು. ಆದರೆ, ಅವುಗಳನ್ನೇಕೆ ಭಯೋತ್ಪಾದನೆಯೆಂದು ಪರಿಗಣಿಸಿಲ್ಲ?

ಸುಳ್ಳು: ಮುಸ್ಲಿಮರು ಸದಾ ಮೂಲಭೂತವಾದಿ ಗಳಾಗಿರುತ್ತಾರೆ ಹಾಗೂ ಇತರ ಮತೀಯರಿಗಿಂತ ಹೆಚ್ಚು ‘ಮತೀಯವಾದಿ’ ಗಳಾಗಿದ್ದಾರೆ.

ನಿಜ: ಇತ್ತೀಚೆಗಿನ ಚರಿತ್ರೆಯು ಇದು ಸುಳ್ಳೆಂದು ತೋರಿಸುತ್ತದೆ. ಈಗಿನ, ‘ಮುಸ್ಲಿಂ ಮೂಲಭೂತವಾದ’ ಎಲ್ಲಿಂದ ಬಂತೆಂಬುದನ್ನು ಅದು ಬಹಿರಂಗಪಡಿಸಿದೆ. ಕೇವಲ 40-60 ವರ್ಷಗಳ ಹಿಂದೆ ಭಾರೀ ಮುಸ್ಲಿಂ ಜನಸಂಖ್ಯೆಯ ವಿಶ್ವದ ಪ್ರಮುಖ ಪ್ರದೇಶಗಳಲ್ಲಿ- ಇಂಡೋನೇಶ್ಯ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಗಳಲ್ಲಿ-ಪ್ರಬಲ ರಾಜಕೀಯ ಶಕ್ತಿಯಾಗಿದ್ದುದು ಜಾತ್ಯತೀತ ವಾದಿ ಎಡಪಂಥೀಯರು. ಇದು ಹಲವು ರೂಪ ತಳೆಯಿತು. ಇಂಡೋನೇಶ್ಯದ ಕಮ್ಯುನಿಷ್ಟ್ ಪಕ್ಷ ಈಜಿಫ್ಟ್‌ನ ಸಿರಿಯ ಹಾಗೂ ಇರಾಕ್‌ನ ನಾಸಿರೈಟ್ಸ್ ಹಾಗೂ ಬಾತಿಸ್ಟ್ ಆಡಳಿತಗಳು, ಮುಹಮ್ಮದ್ ಮೊನ್ಸಾದೆಹ್‌ರ ಇರಾನ್ ಸರಕಾರ...ಇತ್ಯಾದಿ ಈ ರಾಷ್ಟ್ರಗಳಲ್ಲಿ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ-ತಾವು ವಿರೋಧಿಸು ತ್ತಿರುವ ಜಾತ್ಯತೀತವಾದಿ ಎಡಪಂಥೀಯರನ್ನು ಮಣಿಸಲೆಂದೇ, ಬಲಪಂಥೀಯ ಹಾಗೂ ಮತೀಯ ಮೂಲಭೂತವಾದಿ ಸಂಘಟನೆಗಳನ್ನು ಪ್ರಾಯೋಜಿಸಿ, ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡಿ ಬೆಳೆಸಿದವರು ಅಮೆರಿಕ ಹಾಗೂ ಅದರ ಗ್ರಾಹಕ ರಾಷ್ಟ್ರಗಳು (ಸೌದಿ ಅರೇಬಿಯ ಇತ್ಯಾದಿ). ಪಿಎಲ್‌ಒವನ್ನು ವಿರೋಧಿಸಲು ಹಮಾಸನ್ನು ಬೆಳೆಸಿದುದರಲ್ಲಿ ಇಸ್ರೇಲ್‌ನ ಪಾತ್ರವು ಚೆನ್ನಾಗಿ ತಿಳಿದುದೇ ಆಗಿದೆ. ಇದು ಅನಂತರ ಅಲ್‌ಖಾಯಿದಾವನ್ನು ಹುಟ್ಟುಹಾಕಿದ ಜನರಿಗೆ ಅಮೆರಿಕ ಹಣ ಹಾಗೂ ತರಬೇತಿ ನೀಡಿ ಅಫ್ಘಾನ್ ಯುದ್ಧವಾಗುವ ತನಕ 1980ರವರೆಗೆ ತುರೀಯಾವಸ್ಥೆ ತಲುಪಿತ್ತು. ಇದೇ ಅವಧಿಯಲ್ಲಿ ಪಾಕಿಸ್ತಾನದ ಝಿಯಾ ಆಡಳಿತದ‘ಇಸ್ಲಾಮೀಕರಣ’ ಪ್ರಕ್ರಿಯೆಗೆ ಅಮೆರಿಕ ಆರ್ಥಿಕ ಸಹಾಯ ಹಾಗೂ ಬೆಂಬಲವನ್ನು ನೀಡಿತ್ತು. ಮಧ್ಯಪ್ರಾಚ್ಯದಲ್ಲಿ ಪುಸ್ತಕದ ಇಸ್ಲಾಮಿಕ್ ಮೂಲಭೂತವಾದ ಚಳವಳಿಯ ಬಲವು, ಇಸ್ಲಾಮಿಕ್ ಮೂಲಭೂತವಾದವನ್ನು ಸಹಿಸಿ ಹಾಗೂ ಉತ್ತೇಜಿಸಿ ಎಡಪಂಥೀಯರ ಎಲ್ಲ ಪ್ರತಿರೋಧವನ್ನು ಕೊನೆಗಾಣಿಸುವ ಅಮೆರಿಕದ ಕಾರ್ಯವ್ಯೆಹದ ಫಲವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಮುಖ್ಯ ವಿಚಾರವನ್ನು ಇನ್ನೊಮ್ಮೆ ಹೇಳು ವುದಾದರೆ, ಇಸ್ಲಾಮಿಕ್ ಮೂಲಭೂತವಾದವು ಹಿಂದುತ್ವ, ಕ್ರೈಸ್ತ ಮೂಲಭೂತ ವಾದ ಹಾಗೂ ಬಲಪಂಥೀಯ ಚಳವಳಿಯ ಇತರೆಲ್ಲ ರೂಪಗಳಂತೆ ನಿರ್ದಿಷ್ಟ ಚರಿತ್ರೆಯೊಂದು ಸೃಷ್ಟಿಸಿದ ಒಂದು ರಾಜಕೀಯ ಪ್ರಕ್ರಿಯೆಯಾಗಿದೆ. ‘ಧರ್ಮಯುದ್ಧ’ (ಕ್ರುಸೇಡ್) ಹಾಗೂ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆಯ ಆ ಬಳಿಕದ ಪ್ರಯತ್ನಗಳ ಸುತ್ತ ಐರೋಪ್ಯ ಮಿಥ್ಯೆ ಸೃಷ್ಟಿಗೆ ಸ್ವಾಭಾವಿಕ ಮುಸ್ಲಿಂ ಮೂಲಭೂತವಾದಿ ಮಿಥ್ಯೆ ಬಹಳಷ್ಟು ಕೊಡುಗೆ ನೀಡಿದೆ.

ಸುಳ್ಳು: ಯಾವಾಗಲೂ ಮುಸ್ಲಿಮರೇ ಹಿಂಸಾಚಾರ ಆರಂಭಿಸುತ್ತಾರೆ. ಹಿಂದೂಗಳು ಪ್ರತಿಕ್ರಿಯೆ ಅಥವಾ ಸ್ವರಕ್ಷಣೆಯ ಕಾರ್ಯ ನಡೆಸುತ್ತಾರೆ.

ನಿಜ:   ಸಾಮೂಹಿಕ ಹತ್ಯೆಯಲ್ಲಿ ತೊಡಗಿದ ಪ್ರತಿಗುಂಪು ಪ್ರತೀಕಾರ ಅಥವಾ ಆತ್ಮರಕ್ಷಣೆಯ ಪ್ರತಿಪಾದನೆ ಮಾಡುತ್ತದೆ. ಅಮೆರಿಕದಲ್ಲಿ ಸೆ.11ರಂದು ನಡೆದ ದಾಳಿಯನ್ನು ಅಮೆರಿಕ ಹಾಗೂ ಇಸ್ರೇಲ್‌ಗಳು, ಇರಾಕ್ (ನಿಷೇಧದ ಮೂಲಕ) ಹಾಗೂ ಫೆಲೆಸ್ತೀನ್‌ಗಳಲ್ಲಿ ಸಾವಿರಾರು ಜನರ ಹತ್ಯೆ ನಡೆಸಿದುದಕ್ಕೆ ಪ್ರತೀಕಾರವೆಂದು ಹೇಳಲಾಗಿತ್ತು. 2008ರ ದಿಲ್ಲಿ ಹಾಗೂ ಅಹ್ಮದಾಬಾದ್ ಬಾಂಬ್ ಸ್ಫೋಟಗಳ ಮೊದಲು ಕಳುಹಿಸಲಾಗಿದ್ದ ಇ-ಮೇಲ್‌ಗಳನ್ನು ನೀವು ನಂಬುವಿರಾದರೆ, ಅವು ಪೊಲೀಸ್ ದೌರ್ಜನ್ಯ ಹಾಗೂ ಗುಜರಾತ್‌ನಲ್ಲಿ ಮುಸ್ಲಿಮರ ಹತ್ಯೆಗಳಿಗೆ ಪ್ರತೀಕಾರವಾಗಿತ್ತು. 2008ರಲ್ಲಿ ಒಡಿಶಾದಲ್ಲಿ ವಿಎಚ್‌ಪಿ ನಾಯಕನೊಬ್ಬನ ಹತ್ಯೆಗೆ ಪ್ರತಿಕಾರ ವಾಗಿ ಕ್ರೈಸ್ತರ ಹತ್ಯೆ ನಡೆದಿತ್ತು. ಚರಿತ್ರೆಯಲ್ಲಿ ಇನ್ನಷ್ಟು ಹಿಂದೆ ಹೋದರೆ, ನಾಝಿಗಳು ಯಹೂದಿಗಳ ವಿರುದ್ಧ ತಮ್ಮ ಪ್ರಪ್ರಥಮ ಸರಕಾರಿ ಪ್ರಾಯೋಜಿತ ದಂಗೆಯನ್ನು ಜರ್ಮನ್ ರಾಜತಾಂತ್ರಿಕನೊಬ್ಬನ ಕೊಲೆಗೆ ಪ್ರತೀಕಾರ ವಾಗಿದ್ದು, ಅಂತಾರಾಷ್ಟ್ರೀಯ ಯಹೂದಿ ವಸಾಹತಿ ನಿಂದ ತಮ್ಮನ್ನು ರಕ್ಷಿಸುವುದು ಅಗತ್ಯವಾಗಿತ್ತೆಂದು ಹೇಳಿದ್ದರು. ಈ ದಂಗೆಯಲ್ಲಿ ಸಾವಿರಾರು ಚರ್ಚ್‌ಗಳು ಹಾಗೂ ಮನೆಗಳು ನಾಶವಾಗಿದ್ದವು. ಇದಕ್ಕೆ ಕಾರಣ ಸರಳ. ತಾವು ಮಾಡಿದ ಅಮಾನವೀಯ ದೌರ್ಜನ್ಯವನ್ನು ಸ್ವರಕ್ಷಣೆ ಅಥವಾ ಪ್ರತೀಕಾರವೆಂದು ನಂಬುವಂತೆ ಮಾಡುವುದೇ ಜನರನ್ನು ಸಮಾಧಾನಿಸಲಿರುವ ಏಕೈಕ ಮಾರ್ಗವಾಗಿರುತ್ತದೆ. ಪ್ರತೀಕಾರದ ಕುರಿತು ಮಾತನಾಡುವುದೇ ತೀವ್ರ ಅಮಾನವೀಯತೆಯೆಂಬುದು ಸಹಜವಾಗಿದೆ. ಎಂಎನ್‌ಎಸ್ ಅಥವಾ ಶಿವಸೇನೆಯ ದಾಳಿಗೆ ಪ್ರತಿಯಾಗಿ ಬಿಹಾರಿಗಳು ಮಹಾರಾಷ್ಟ್ರೀಯನ್ನರನ್ನು ‘ಪ್ರತೀಕಾರವೆಂದು’ ಕೊಚ್ಚಿಕೊಂದರೆ, ‘ಹಿಂದುಗಳು ಕೇವಲ ಪ್ರತಿಕ್ರಿಯಿಸುತ್ತಾರೆ’ ಎನ್ನುವವರಿಗೆ ಸಮಾಧಾನವಾದೀತೆ? ದಿಲ್ಲಿಯಲ್ಲಿ ಈಶಾನ್ಯದ ಜನರ ವಿರುದ್ಧದ ದೌರ್ಜನ್ಯ ಹಾಗೂ ಜನಾಂಗೀಯ ತಾರತಮ್ಯಕ್ಕೆ ಪ್ರತೀಕಾರವಾಗಿ ಈಶಾನ್ಯದ ಸಶಸ್ತ್ರ ಸಂಘಟನೆಗಳು ದಿಲ್ಲಿಗರ ಹತ್ಯಾಕಾಂಡ ನಡೆಸಿದರೆ ಅವರದನ್ನು ಅಂಗೀಕರಿಸ ಬಲ್ಲರೇ? ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯಾಕಾಂಡ ಗಳನ್ನು ಪ್ರತಿದಾಳಿ ಹಾಗೂ ಸ್ವಯಂ ರಕ್ಷಣೆಯೆಂಬಂತೆ ಘೋಷಣೆ ಕೂಗುತ್ತ ಹಲವರು ತಿರುಗಾಡು ವುದು ನೋಡಿದರೆ, ಸಮಾಜವಾಗಿ ನಾವು ಎಷ್ಟು ಕೆಳ ಮಟ್ಟದಲ್ಲಿದ್ದೇವೆಂಬುದನ್ನು ಸೂಚಿಸುತ್ತದೆ.

ಸುಳ್ಳು: ಹಿಂದೂಗಳು ಮತಾಧಾರಿತವಾಗಿ ಕೊಲ್ಲುವುದಿಲ್ಲ. ಆದರೆ, ಕೇವಲ ಮುಸಲ್ಮಾನರಷ್ಟೇ ಈ ರೀತಿ ಮಾಡುತ್ತಾರೆ. ಏಕೆಂದರೆ, ಅವರ ಮತವು ಮುಸ್ಲಿಮರು ಹಾಗೆ ಮಾಡಬೇಕೆಂದು ಹೇಳುತ್ತದೆ.


ನಿಜ: 2002ರಲ್ಲಿ ಗುಜರಾತ್‌ನಲ್ಲಿ 1984ರಲ್ಲಿ ದಿಲ್ಲಿ ಮತ್ತು ಇತರ ನಗರಗಳಲ್ಲಿ 1989ರಲ್ಲಿ ಭಾಗಲ್ಪುರದಲ್ಲಿ ಮತ್ತು ಇತರ ಹೆಚ್ಚಿನ ದಂಗೆಗಳಲ್ಲಿ ಹತರಾದವರಲ್ಲಿ ಅಲ್ಪಸಂಖ್ಯಾತ (ಮುಸ್ಲಿಂ ಸಿಖ್) ಸಮುದಾಯದವರೇ ಅಧಿಕ. ಹಿಂದುತ್ವ ಸಂಘಟನೆಗಳ ಇತ್ತೀಚಿನ ಬಾಂಬ್ ಸ್ಫೋಟ ಪ್ರಕರಣಗಳೂ ನಮ್ಮಲ್ಲಿವೆ. ಈ ಎಲ್ಲ ಪ್ರಕರಣಗಳಲ್ಲಿ ಹಂತಕರಲ್ಲಿ ಹೆಚ್ಚಿನವರು ಹಿಂದೂಗಳು. ಹತ್ಯೆ ನಡೆಸಿದ ಸಂಘಟನೆಗಳು ಹಿಂದುವೇತರರ ಹತ್ಯೆ ನಡೆಸುವಂತೆ ಕರೆ ನೀಡಿದ್ದವು. ಹಾಗಾದರೆ, ಹಿಂದುತ್ವ ಅವರಿಗೆ ಹೀಗೆ ಮಾಡುವಂತೆ ಉಪದೇಶಿಸಿದೆ ಎನ್ನುವುದು ಸರಿಯಾದೀತೇ? ಖಂಡಿತ ಇಲ್ಲ. ಈ ಎಲ್ಲ ಘಟನೆಗಳಲ್ಲಿ ದಾಳಿಕಾರರು ಹಾಗೂ ಸಂಘಟಕರು ಸ್ಪಷ್ಟವಾಗಿ ರಾಜಕೀಯ ಗುರಿ ಸಾಧನೆಗೆ ಬಯಸಿದ್ದ ರಾಜಕೀಯ ಗುಂಪುಗಳಾಗಿವೆ. (ಅದಕ್ಕೆ ಮತೀಯ ಗುರಿಯೆಂಬ ಬಣ್ಣ ನೀಡಲಾಗಿದೆ). ಇದನ್ನೇ ಮುಸ್ಲಿಂ ಗುಂಪುಗಳ ಕುರಿತೂ ಹೇಳಬಹುದು.
ಪ್ರತಿ ಧರ್ಮವೂ ಇತರ ಧರ್ಮಗಳೊಂದಿಗೆ ಸಂಘರ್ಷಕ್ಕೆ ಒತ್ತಾಯಿಸುವ ಗುಂಪುಗಳನ್ನು ಹೊಂದಿದ್ದು, ಪ್ರತಿಯೊಂದು ಮತದ ಪವಿತ್ರ ಗ್ರಂಥಗಳು ದೌರ್ಜನ್ಯವನ್ನು ಬೆಂಬಲಿಸುತ್ತವೆ. (ಉದಾ: ಮನುಸ್ಮತಿಯಲ್ಲಿ ಮಹಿಳೆಯರು ಹಾಗೂ ದಲಿತರ ಬಗ್ಗೆ ಹೇಳಿರುವುದು ಅಥವಾ ಬೈಬಲ್‌ನ ಹಳೆಯ ಒಡಂಬಡಿಕೆಯು ಜೂದೇತರರ ಹತ್ಯಾಕಾಂಡದ ಕುರಿತು ಹೇಳಿರುವುದು.) ಆ ಮತಗಳ ಅನುಯಾಯಿಗಳೆಲ್ಲ ಆ ಗ್ರಂಥಗಳನ್ನು ಅಕ್ಷರಶಃ ಅನುಸರಿಸುತ್ತಾರೆಂದು ಇದರರ್ಥವಲ್ಲ. ಹಿಂದೂ, ಕ್ರೈಸ್ತ ಹಾಗೂ ಇತರ ಗುಂಪುಗಳ ಬಹುಸಂಖ್ಯಾತರಂತೆಯೇ ಮುಸ್ಲಿಂ ಬಹುಸಂಖ್ಯಾತರೂ ಎಂದೂ ಯಾರನ್ನೂ ಕೊಂದಿಲ್ಲ. ಕೊಲ್ಲಲಾರರು.

ಸುಳ್ಳು: ಮುಸ್ಲಿಮರಲ್ಲಿ ಒಗ್ಗಟ್ಟಿದೆ ಹಾಗೂ ಒಗ್ಗಟ್ಟಾಗಿ ಕಾರ್ಯಾಚರಿಸುತ್ತಾರೆ. ಹಿಂದೂಗಳು ವಿಭಜಿತರು ಹಾಗೂ ದುರ್ಬಲರಾಗಿದ್ದಾರೆ.


ನಿಜ: ಮುಸ್ಲಿಮರೂ ಇತರ ಸಮುದಾಯಗಳ ಮತದಾರರಂತೆಯೇ ಸೌಲಭ್ಯಕ್ಕಾಗಿ ಅಭ್ಯರ್ಥಿಯನ್ನು ಹೊಂದಿಕೊಂಡು, ತಾವು ಆ ರಾಜಕೀಯ ಪಕ್ಷವನ್ನು ಮೆಚ್ಚುತ್ತೇವೆಯೇ? ಇತ್ಯಾದಿಗಳನ್ನು ಪರಿಗಣಿಸಿ ಮತ ಚಲಾಯಿಸುತ್ತಾರೆಂಬುದು ಈವರೆಗೆ ಮಾಡಿದ ಪ್ರತಿ ಚುನಾವಣಾ ಅಧ್ಯಯನದಲ್ಲಿ ತಿಳಿದು ಬಂದಿದೆ. ವಾಸ್ತವದಲ್ಲೂ ಮುಸ್ಲಿಮರು ಇತರ ಯಾವುದೇ ಬೇರೆ ಗುಂಪುಗಳಿಗಿಂತ ಹೆಚ್ಚು ಒಗ್ಗಟ್ಟಾಗಿಲ್ಲ. ಅವರೂ, ಭಾರತದ ಇತರ ಸಮುದಾಯಗಳಂತೆಯೇ, ಮತೀಯ, ಜಾತಿ, ಲಿಂಗ, ಪ್ರಾದೇಶಿಕ, ಭಾಷೆ ಹಾಗೂ ಇತರ ಅನೇಕ ನೆಲೆಗಳಲ್ಲಿ ಆಂತರಿಕ ವಿಭಜನೆ ಹೊಂದಿದ್ದಾರೆ. ಮುಸ್ಲಿಮರು ಒಗ್ಗಟ್ಟಾಗಿರುವುದು ನಿಜವಾದರೆ, ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಸಾಕಷ್ಟು ಸಂಖ್ಯೆಯಲ್ಲಿ ಇರಬೇಕಿತ್ತು. ಆದರೆ, ವಾಸ್ತವವಾಗಿ ಶೇ.13 ಜನಸಂಖ್ಯೆ ಹೊಂದಿರುವ ಮುಸ್ಲಿಮ್ ಸಂಸದರು ನಿರ್ಗಮನ ಲೋಕಸಭೆಯಲ್ಲಿ ಶೇ.5.5ರಷ್ಟು ಮಾತ್ರ ಇದ್ದಾರೆ.
ಇಂದಿನ ನಗರಗಳಲ್ಲಿ ‘ಮುಸ್ಲಿಮರು ಒಟ್ಟಾಗಿ ಬದುಕುತ್ತಾರೆ. ಎಂಬಂತಾಗಲು ಅವರ ವಿರುದ್ಧದ ತಾರತಮ್ಯ ಧೋರಣೆ ಹಾಗೂ ಅವರನ್ನು ಬಲವಂತವಾಗಿ ನಿರ್ದಿಷ್ಟ ಕೊಂಪೆಗಳಲ್ಲಿ ವಾಸಿಸುವಂತೆ ಮಾಡಿರುವುದೇ ಕಾರಣ. ಅದೇ ವೇಳೆ, ಮತದಾನದಲ್ಲಿ ಜನರು ತಮ್ಮ ಭೌತಿಕ ಸುರಕ್ಷತೆಯ ಬಗ್ಗೆ ಚಿಂತಿಸುತ್ತಾರೆ. ಉದಾಹರಣೆಗೆ ಬಿಹಾರಿಯೊಬ್ಬ ಶಿವಸೇನೆಯ ಅಭ್ಯರ್ಥಿಗೆ ಮತ ನೀಡಲಾರ. ಅಂತೆಯೇ ಹೆಚ್ಚಿನ ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ. ಇದು ಮತ್ತೆ ಸಾಮಾನ್ಯ ಜ್ಞಾನ ವಿಷಯವಾಗಿದೆ. ಪಕ್ಷವೊಂದು ನಿಮ್ಮನ್ನು ವಿದೇಶಿಯರು, ಭಯೋತ್ಪಾದಕರು ಹಾಗೂ ದೇಶವಿರೋಧಿಗಳೆಂಬ ಭಾವನೆಯನ್ನು ತನ್ನ ಸುತ್ತ ಬೆಳೆಸಿಕೊಂಡರೆ, ಅದು ನಿಮ್ಮ ಮತ ಪಡೆಯಲಾರದು.’

ಸುಳ್ಳು: ಸರಕಾರವು ಮುಸ್ಲಿಮರನ್ನು ಬೆಂಬಲಿಸುತ್ತದೆ ಹಾಗೂ ಮುದ್ದು ಮಾಡುತ್ತಿದೆ.

 ನಿಜ: ಈ ಮಾತಿಗೆ ವಿರುದ್ಧವಾಗಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ತಾರತಮ್ಯವನ್ನು ಅಧಿಕೃತ ಮಾಹಿತಿ ಸೂಚಿಸುತ್ತಿದೆ. ಹತ್ತಿರದ ಹಿಂದೂ ಬಾಹುಳ್ಯದ ಗ್ರಾಮಗಳಿಗೆ ಹೋಲಿಸಿದರೆ, ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಸ್ ನಿಲ್ದಾಣ, ರಸ್ತೆ, ಬ್ಯಾಂಕ್ ಶಾಖೆಗಳ ಲಭ್ಯತೆ ಕಡಿಮೆಯೆಂದು ಸಾಚಾರ್ ಸಮಿತಿ ಹೇಳಿದೆ. ಮುಸ್ಲಿಮರು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಹಂಚಿಕೆ ಮಾಡುವ ಸಾಲದ ಮೂರನೆ ಎರಡು ಭಾಗದಷ್ಟು ಮಾತ್ರ ಪಡೆಯುತ್ತಾರೆ. ಇತರರ ಬಡತನದ ಮಟ್ಟಕ್ಕೆ ಹೋಲಿಸಿದರೆ, ನಗರಗಳಲ್ಲೂ ಹಳ್ಳಿಗಳಲ್ಲೂ ಪಕ್ಕಾ ಮನೆಗಳಲ್ಲಿ ವಾಸಿಸುವ ಮುಸ್ಲಿಮರ ಪ್ರಮಾಣ ಇತರರಿಗಿಂತ ಕಡಿಮೆಯಾಗಿದೆ. ಜನಸಂಖ್ಯೆ ಶೇ 13ರಷ್ಟಿದ್ದರೂ ಮುಸ್ಲಿಮರಲ್ಲಿ ಐಎಎಸ್ ಅಧಿಕಾರಿಗಳು ಶೇ.3 ಹಾಗೂ ಐಪಿಎಸ್ ಅಧಿಕಾರಿಗಳು ಶೇ.4ಕ್ಕಿಂತಲೂ ಕಡಿಮೆಯಿದ್ದಾರೆ. ಒಟ್ಟಾರೆಯಾಗಿ ಸರಾಸರಿ ಮುಸ್ಲಿಮರ ಸಾಮಾಜಿಕ-ಆರ್ಥಿಕ ಮಟ್ಟವು ಸ್ಥೂಲವಾಗಿ ದಲಿತರು ಹಾಗೂ ಆದಿವಾಸಿಗಳಷ್ಟೇ ಇದೆಯೆಂದು ಸಾಚಾರ್ ಸಮಿತಿ ತೀರ್ಮಾನಿಸಿದೆ.
 ಅದೇ ರೀತಿ 2007ರಲ್ಲಿ ಇಕಾನಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟವಾಗಿದ್ದ ಅಧ್ಯಯನವೊಂದರಂತೆ ಲೇಖಕರು ವಲಯದ ಸಂಸ್ಥೆಗಳ 548 ಉದ್ಯೋಗ ಜಾಹಿರಾತುಗಳಿಗೆ ಮೂರು ಏಕರೀತಿಯ ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಮೇಲ್ಜಾತಿಯ ಹಿಂದೂ ಹೆಸರಲ್ಲಿ, ಇನ್ನೊಂದು ದಲಿತನ ಹೆಸರಲ್ಲಿ ಮೂರನೆಯದು ಮುಸ್ಲಿಂ ಹೆಸರಲ್ಲಿ ಅರ್ಜಿಗಳೆಲ್ಲ ಎಲ್ಲ ರೀತಿಯಲ್ಲೂ ಒಂದೇ ರೀತಿ ಇದ್ದಾಗಲೂ, ದಲಿತನ ಹೆಸರು ಸಂದರ್ಶನಕ್ಕೆ ಕರೆಯಲ್ಪಟ್ಟ ಸಂಭಾವ್ಯತೆ ಅಂದಾಜು ಮೂರನೆ ಒಂದು ಭಾಗಕ್ಕೂ ಕಡಿಮೆಯಿತ್ತು. ಮುಸ್ಲಿಮನ ಹೆಸರು ಮೂರನೆ ಎರಡರಷ್ಟು ಕಡಿಮೆಯಿತ್ತು. ಸರಕಾರಿ ಹಾಗೂ ಖಾಸಗಿ ರಂಗಗಳೆರಡರಲ್ಲೂ ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗುತ್ತಿದೆ.

ಸುಳ್ಳು: ಆದರೆ, ಹಿಂದೂಗಳಿಗೆ ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿ ಸಾಧ್ಯವಿಲ್ಲ.
ನಿಜ: ಕಾಶ್ಮೀರಿಗಳಲ್ಲದವರು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸುವಂತಿಲ್ಲ. ಅದರಂತೆಯೇ ಹಿಮಾಚಲಿಗಳಲ್ಲದವರು ಹಿಮಾಚಲ ಪ್ರದೇಶದಲ್ಲಿ ಜಮೀನು ಖರೀದಿಸುವಂತಿಲ್ಲ. ಅನುಮತಿಯ ಹೊರತು ಹೊರಗಿನವರು ನಾಗಲ್ಯಾಂಡ್ ಪ್ರವೇಶಿಸುವಂತಿಲ್ಲ. ಉತ್ತರಾಖಂಡಿಗಳಲ್ಲದವರು ಉತ್ತರಾಖಂಡದಲ್ಲಿ ತುಂಡು ನೆಲವನ್ನು ಖರೀದಿಸುವಂತಿಲ್ಲ. ಹೀಗೆ ಭಾರತದ ಅನೇಕ ಕಡೆ ಸ್ಥಳೀಯರ ರಕ್ಷಣೆಗಾಗಿ ಇಂತಹ ನಿಬಂಧನೆಗಳಿವೆ. ಇದಕ್ಕೂ ಮತಕ್ಕೂ ಯಾವುದೇ ಸಂಬಂಧವಿಲ್ಲ.


ಸುಳ್ಳು: ಮುಸ್ಲಿಮರ ಜನಸಂಖ್ಯೆ ಹಿಂದೂಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಏಕೆಂದರೆ ಮುಸ್ಲಿಮರು ಅನೇಕ ಹೆಂಡತಿಯರನ್ನು ಹೊಂದಬಹುದು. ಬಹುಸಂಖ್ಯಾತರಾಗುವುದು ಅವರ ಗುರಿಯಾಗಿದೆ.


ನಿಜ: ಯುವ ಮುಸ್ಲಿಂ ಮಹಿಳೆಯು ಸಮಾನ ಆರ್ಥಿಕ ಮಟ್ಟದ ಯುವ ಹಿಂದೂ ಮಹಿಳೆಯಷ್ಟೇ ಗರ್ಭಧಾರಣದರ ಹೊಂದಿದ್ದಾಳೆ. ಸರಾಸರಿಯಲ್ಲಿ ಮುಸ್ಲಿಮರು ಹಿಂದೂಗಳಿಗಿಂತ ಬಡವರಾಗಿರುವುದೇ ಒಟ್ಟಾರೆಯಾಗಿ ಅಲ್ಪಪ್ರಮಾಣದ ಮುಸ್ಲಿಂ ಬೆಳವಣಿಗೆ ದರ ಹೆಚ್ಚಳಕ್ಕೆ ಕಾರಣವಾಗಿದೆ. ಸಾಮಾನ್ಯ ಜ್ಞಾನವೂ ಇದನ್ನೇ ಸೂಚಿಸುತ್ತದೆ. ಶೇ. 25ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಕೇರಳದಲ್ಲೂ ದೇಶದ ಯಾವುದೇ ರಾಜ್ಯಕ್ಕಿಂತ ಜನಸಂಖ್ಯಾ ಬೆಳವಣಿಗೆ ಕಡಿಮೆಯಿದೆ. ನೀವೆಷ್ಟು ಮಕ್ಕಳನ್ನು ಹೊಂದಿದ್ದೀರಿ ಎಂಬುದನ್ನು ನಿರ್ಧರಿಸುವಲ್ಲಿ ಮತಕ್ಕಿಂತಲೂ ಹೆಚ್ಚು ಬಡತನ ಹಾಗೂ ಸೌಲಭ್ಯದ ಕೊರತೆ ಪ್ರಧಾನ ಪಾತ್ರ ವಹಿಸುತ್ತದೆ. ಉದಾಹರಣೆಗೆ: ತಮಿಳುನಾಡು ಹಾಗೂ ಕೇರಳಗಳಂತಹ ರಾಜ್ಯಗಳಲ್ಲಿ ಮುಸ್ಲಿಮರ ಪ್ರಜನನ ದರ ಉತ್ತರ ಪ್ರದೇಶ ರಾಜಸ್ಥಾನ ಅಥವಾ ಬಿಹಾರಗಳ ಹಿಂದೂಗಳಿಗಿಂತ ತೀರ ಕಡಿಮೆ. ಮುಸ್ಲಿಮರು ಹಲವು ಹೆಂಡತಿಯರನ್ನು ಹೊಂದಿರುವ ಕುರಿತು ಹೇಳುವುದಾದರೆ, ಇದರಿಂದ ಜನಸಂಖ್ಯಾ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮವಾಗದು. ಒಬ್ಬ ಮುಸ್ಲಿಂ ಪುರುಷ ಇಬ್ಬರು ಹೆಂಡತಿಯರನ್ನು ಹೊಂದಿದ್ದಾನೆಂದರೆ ಯಾವನೋ ಒಬ್ಬನಿಗೆ ಹೆಂಡತಿಯೇ ಇಲ್ಲವಾಗುತ್ತಾಳೆ. (ಮುಸ್ಲಿಮರಲ್ಲಿ ಪುರುಷರು ಹಾಗೂ ಮಹಿಳೆಯರ ಸಂಖ್ಯೆ ಹೆಚ್ಚುಕಡಿಮೆ ಸಮಾನವಾಗಿದೆ ಎಂದು ಭಾವಿಸಿದಲ್ಲಿ)ಇದೇ ವೇಳೆ, ಈ ವಿಭಾಗದಲ್ಲಿ ಎನ್‌ಎಫ್‌ಎಚ್‌ಎಸ್ ನಡೆಸಿದ ಏಕೈಕ ಸಮೀಕ್ಷೆಯಂತೆ, ಮುಸ್ಲಿಮರಲ್ಲಿ ಕೇವಲ ಶೇ.5.73 ಮಂದಿಗೆ ಬಹುಪತ್ನಿಯರಿದ್ದರೆ, ಹಿಂದೂಗಳಲ್ಲಿ ಸುಮಾರು ಶೇ.5.8 ಮಂದಿ ಒಂದಕ್ಕಿಂತ ಹೆಚ್ಚು ಮಡದಿಯರನ್ನು ಹೊಂದಿದ್ದಾರೆ.

ಸುಳ್ಳು: ಪಾಕಿಸ್ತಾನ ಸೃಷ್ಟಿಯಾಗುವಾಗ ಮುಸ್ಲಿಮರು ತಮ್ಮ ದೇಶವನ್ನು ಪಡೆದಿದ್ದಾರೆ. ಆದುದರಿಂದ ಅವರು ನಮ್ಮ ದೇಶವನ್ನು ಬಿಡಬೇಕು.


ಹಿಂದೂಗಳು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ದೇಶಗಳಿರಬೇಕೆಂದು ಮೊದಲು ಮಾತನಾಡಿದ ನಾಯಕರು ಬಳಿಕ ಹಿಂದೂ ಮಹಾಸಭಾದ ಭಾಗವಾಗಿದ್ದವರು. ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಭಾಯಿ ಪರಮಾನಂದ್ 1905ರಲ್ಲೇ ಈ ಬೇಡಿಕೆ ಇಟ್ಟಿದ್ದರು. ಪಾಕಿಸ್ತಾನದ ಬೇಡಿಕೆ ಮುಸ್ಲಿಂ ಲೀಗ್‌ನಿಂದ 1940ರವರೆಗೂ ಬಂದಿರಲಿಲ್ಲ. ಅಲ್ಲದೆ ಅದು ರಾಜಕೀಯ ಪಕ್ಷವೊಂದರ ರಾಜಕೀಯ ಬೇಡಿಕೆಯಾಗಿತ್ತು. ಭಾರತದ ಅತಿ ದೊಡ್ಡ ಇಸ್ಲಾಮಿಕ್ ಮತೀಯ ಸಂಸ್ಥೆ ದೇವ್‌ಬಂದ್ ಸೇರಿದಂತೆ ದೊಡ್ಡ ಸಂಖ್ಯೆಯ ಮುಸ್ಲಿಮರು ಪಾಕಿಸ್ತಾನ ರಚನೆಯ ಚಿಂತನೆಯನ್ನು ವಿರೋಧಿಸಿದ್ದರು. ದೇಶದ ಖ್ಯಾತ ಸ್ವಾತಂತ್ರ ಹೋರಾಟಗಾರರಲ್ಲೊಬ್ಬರಾಗಿದ್ದ ವೌಲಾನಾ ಆಝಾದ್ ಕೂಡ ಇದನ್ನು ಆಕ್ಷೇಪಿಸಿದ್ದರು. ಪಾಕಿಸ್ತಾನದ ಬೇಡಿಕೆ ರಾಜಕೀಯ ಪಕ್ಷವೊಂದರ ಬೇಡಿಕೆಯೇ ಹೊರತು ಒಟ್ಟು ಮುಸ್ಲಿಮರದಲ್ಲ.
ಸಂಕ್ಷೇಪವಾಗಿ ಇದು ಸರಳ: ಮುಸ್ಲಿಮರೂ ಇತರ ಜನ ಸಮುದಾಯಗಳಂತೆಯೇ ವಿವಿಧತೆ ಹಾಗೂ ಮುಕ್ತ ಯೋಚನೆ ಹೊಂದಿದವರಾಗಿದ್ದಾರೆ. ಮುಸ್ಲಿಂ ದ್ವೇಷದ ಈ ವಾತಾವರಣದಲ್ಲಿ ಈ ಜನಾಂಗವಾದಿ ಮಿಥ್ಯೆಗಳನ್ನು ತಿರಸ್ಕರಿಸುವುದು ಅಗತ್ಯವಾಗಿದೆ. ಬದಲಿಗೆ, ಮಾನವ ಘನತೆಗೆ ವೌಲ್ಯ ನೀಡುವ ವಿಶ್ವಕ್ಕಾಗಿ ಎದ್ದು ನಿಲ್ಲಬೇಕಾಗಿದೆ.

4 comments:

  1. ಮೇಲಿನ ಲೇಖನದಲ್ಲಿ 'ಸುಳ್ಳು' ಎಂದಿರುವುದನ್ನು ನಿಜ ಎಂದಾಗಿಯೂ 'ನಿಜ' ಎಂದಿರುವುದನ್ನು 'ಸುಳ್ಳು' ಎಂದಾಗಿಯೂ ಗ್ರಹಿಸಬೇಕಾಗಿರುತ್ತದೆ.

    ReplyDelete
  2. ' ಈ ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್'ನ ಲೇಖನ ಭಾರತದ ಮಟ್ಟಿಗೆ ಎಷ್ಟು ಪ್ರಸ್ತುತ? ಇದರಲ್ಲಿನ ವಿಷಯಗಳು ಅರ್ಧ ನಿಜ ಮತ್ತು ಅರ್ಧ ಸುಳ್ಳುಗಳ ಸರಮಾಲೆ

    ReplyDelete
  3. ವ್ಯರ್ಥ ಆಲಾಪ.ಇದರಲ್ಲಿ ಏನೂ ಹುರುಳಿಲ್ಲ

    ReplyDelete