Saturday, February 22, 2014

ಪೊಳ್ಳು-ನಿಜಗಳ ನಡುವಿನ ಹೈವೇ ಪಯಣ

ಶ್ರೀಮಂತ, ಸ್ನಿಗ್ಧ ಸೌಂದರ್ಯ ಹೊಂದಿರುವ  ಬಾಲೆ, ಅವಳನ್ನು ಅಪಹರಿಸುವ ಒಬ್ಬ ಗೂಂಡಾ, ಒಂದು ಲಾರಿ ಹಾಗೂ ಅವರು ಚಲಿಸುವ ಹೈವೇ! ಇಷ್ಟನ್ನು ಬಳಸಿಕೊಂಡು ಇಮ್ತಿಯಾಝ್ ಅಲಿ ಒಂದು ತಿಳಿಯಾದ, ಹದಯಸ್ಪರ್ಶಿಯಾದ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಹೈವೇಯ ಸೌಂದರ್ಯವನ್ನು ಕಣಕಣದಲ್ಲಿ ಹಿಡಿದುಕೊಂಡಿರುವ ಈ ಚಿತ್ರ, ಮನೆಯಲ್ಲಿ ಕಳೆದುಕೊಂಡುದನ್ನು ಹೈವೇಯಲ್ಲಿ ಮರಳಿ ಗಳಿಸುವ ತರುಣಿಯೊಬ್ಬಳ ಪ್ರಯತ್ನವನ್ನು ಹೇಳುತ್ತದೆ. ಬದುಕಿನಲ್ಲಿನ ಪೊಳ್ಳುಗಳಿಂದ ರೋಸಿ ಹೋಗಿರುವ ತರುಣಿಯೊಬ್ಬಳು ಹೈವೇ, ಗೂಂಡಾ, ಲಾರಿಯ ಜೊತೆ ಜೊತೆಜೊತೆಗೇ ಸಾಗುತ್ತಾ, ಪ್ರಕತಿಯ ತಿಳಿಯಾದ ವಾತಾವರಣದಲ್ಲಿ ತನ್ನ ಬದುಕನ್ನು ಹುಡುಕುವ ಕತೆಯೇ ‘ಹೈವೇ’. ಇಲ್ಲಿ ಕತೆಯ ಎಳೆ ತೀರಾ ಸಣ್ಣದು ಮತ್ತು ನೇರವಾದುದು. ಆದರೆ ಅದು ನಮಗೆ ಕೊಡುವ ಅನುಭವ ಗಾಢವಾದುದು. ಇನ್ನೂ ಏನೋ ಇರಬೇಕಾಗಿತ್ತು ಎನ್ನುವ ಅತಪ್ತಿಯೊಂದು ಚಿತ್ರಮಂದಿರದಿಂದ ಹೊರಬರುವಾಗ ನಮ್ಮನ್ನು ಕಾಡುವುದು ಮಾತ್ರ ಸತ್ಯ. ಆ ಕಾಡುವಿಕೆಯನ್ನೇ ಒಟ್ಟು ಸಿನಿಮಾದ ಗೆಲುವು ಎಂದು ಕರೆಯೋಣವೆ? ಪ್ರೇಕ್ಷಕರಿಗೆ ಬಿಟ್ಟದ್ದು.
ಅದೊಂದು ಅದ್ದೂರಿ ಮೇಲ್‌ಶ್ರೀಮಂತ ವರ್ಗದ ಮದುವೆ. ಆದರೆ ಮದುಮಗಳು ಮದುವೆಯ ದಿನ ಕತಕತೆಯ ಸಂಭ್ರಮದಿಂದ ರೋಸಿ ಹೋಗಿದ್ದಾಳೆ. ರಾತ್ರಿ ತನ್ನ ಗೆಳೆಯನ ಜೊತೆಗೆ ಹೈವೇ ವರೆಗೆ ಹೋಗಿ ಬರೋಣ ಎಂದು ಒತ್ತಾಯಿಸುತ್ತಾಳೆ. ಅವಳ ಒತ್ತಾಯಕ್ಕೆ ಮಣಿದು ಗುಟ್ಟಾಗಿ ಇಬ್ಬರು ಹೈವೇ ತಲುಪುತ್ತಾರೆ. ಅಲ್ಲಿಂದ ಚಿತ್ರದ ದಾರಿ ತೆರೆದುಕೊಳ್ಳುತ್ತದೆ. ಆಕಸ್ಮಿಕವಾಗಿ ಗೂಂಡಾಗಳ ತಂಡವೊಂದನ್ನು ಅವರು ಎದುರಿಸಬೇಕಾಗುತ್ತದೆ. ಗೂಂಡಾಗಳ ನಾಯಕ ಮಹಾಬೀರ ಭಾಟಿ ತರುಣಿಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಆದರೆ ಆತನಿಗೆ ಗೊತ್ತಿಲ್ಲ, ತಾನು ಅಪಹರಿಸಿದ ತರುಣಿ ಸರಕಾರದೊಂದಿಗೆ ಸಂಬಂಧವನ್ನು ಹೊಂದಿರುವ ಪ್ರತಿಷ್ಠಿತ ಉದ್ಯಮಿಯ ಪುತ್ರಿ ಎಂದು. ವಿಷಯ ಗೊತ್ತಾದಾಗ ಎಲ್ಲ ಕೈ ಮೀರಿರುತ್ತದೆ. ಪೊಲೀಸರು ನಾಲ್ಕು ದಿಕ್ಕುಗಳಿಂದ ಸುತ್ತುವರಿಯುವ ಮೊದಲು ಅವಳಿಂದ ಕಳಚಿಕೊಳ್ಳಬೇಕಾಗಿದೆ. ಮಹಾವೀರ ತನ್ನ ಇಬ್ಬರು ಹಿಂಬಾಲಕರ ಜೊತೆಗೆ ಆಕೆಯನ್ನು ಲಾರಿಯಲ್ಲಿ ಎತ್ತಿ ಹಾಕಿ ಹೈವೇ ಉದ್ದಕ್ಕೂ ಮುನ್ನಡೆಯುತ್ತಾನೆ.
ಆದರೆ ಇಲ್ಲೊಂದು ಸಣ್ಣದೊಂದು ತಿರುವು ಘಟಿಸುತ್ತದೆ. ನಿಧಾನಕ್ಕೆ ಅಪಹರಿಸಲ್ಪಟ್ಟ ತರುಣಿಗೆ ಆ ಪಯಣ ಇಷ್ಟವಾಗಿ ಬಿಡುತ್ತದೆ. ಅದು ಅವಳೇ ಬಯಸಿದ ಪಯಣ. ತನ್ನ ಮನೆಯೊಳಗಿನ ಸುಳ್ಳು ಮತ್ತು ಕ್ರೌರ್ಯಗಳಿಂದ ಪಾರಾಗಲು ಹೈವೇ ಮತ್ತು ಗೂಂಡಾನ ಸ್ನೇಹ ಅವಳ ಪಾಲಿಗೆ ಒಂದು ಹೆದ್ದಾರಿಯಾಗಿ ಪರಿಣಮಿಸುತ್ತದೆ. ಗೂಂಡಾಗಳಿಂದ ಪಾರಾಗಲು ಯತ್ನಿಸಬೇಕಾಗಿದ್ದ ತರುಣಿಯೇ ಗೂಂಡಾಗಳಿಗೆ ಸಹಕರಿಸಲು ತೊಡಗುತ್ತಾಳೆ. ಮಹಾವೀರನಿಗೆ ಈ ತರುಣಿ ಇನ್ನಷ್ಟು ಸಮಸ್ಯೆಯಾಗುತ್ತಾಳೆ. ನಿಧಾನಕ್ಕೆ ಇಬ್ಬರು ಕಳೆದುಕೊಂಡ ತಮ್ಮ ತಮ್ಮ ಬದುಕನ್ನು ತಮಗರಿವಿಲ್ಲದೆ ಹುಡುಕ ತೊಡಗುತ್ತಾರೆ. ಹೈವೇ ಪ್ರಯಾಣ ಬೆಳೆದಂತೆ ಅವರಿಬ್ಬರ ಬದುಕಲ್ಲೂ ಬದಲಾವಣೆಗಳ ತಿರುವುಗಳು ಕಾಣಿಸತೊಡಗುತ್ತವೆ. ‘ಎಲ್ಲಿಂದ ಬಂದಿದ್ದೇನೆಯೋ ಅಲ್ಲಿಗೆ ತಲುಪುವುದೂ ನಾಯಕಿಗೆ ಇಷ್ಟವಿಲ್ಲ. ಎಲ್ಲಿಗೆ ಹೋಗಬೇಕಾಗಿದೆಯೋ ಅದನ್ನು ಮುಟ್ಟುವುದು ಅವಳಿಗೆ ಇಷ್ಟವಿಲ್ಲ. ಈ ದಾರಿಯ ಪಯಣವನ್ನಷ್ಟೇ ಅವಳು ಇಷ್ಟಪಡುತ್ತಿದ್ದಾಳೆ’. ಅಂತಿಮವಾಗಿ ಶಿಮ್ಲಾ ದಾಟಿ, ಬೆಟ್ಟ ಗುಡ್ಡಗಳ ನಡುವೆ ರಮ್ಯವಾಗಿ ಹರಿಯುವ ನದಿಯ ತಟದಲ್ಲಿ ಒಂದು ಪುಟ್ಟ ಗುಡಿಸಲಲ್ಲಿ ಬದುಕುವ ಕನಸನ್ನು ಇಬ್ಬರೂ ಕಾಣುತ್ತಾರೆ. ಇತ್ತ ಗೂಂಡಾ ಮಹಾವೀರ ತಾನು ಕಳೆದುಕೊಂಡ ತಾಯಿಯನ್ನು ಅವಳ ಮೂಲಕ ಕಾಣಲು ಪ್ರಯತ್ನಿಸುತ್ತಾನೆ. ಆದರೆ ಇದೆಲ್ಲಕ್ಕೂ, ಆ ಹೈವೈಯ ಇಕ್ಕೆಲಗಳಲ್ಲಿ ಬದುಕುತ್ತಿರುವ ನಾಗರಿಕರೆಂದು ಕರೆಸಿಕೊಂಡ ವ್ಯವಸ್ಥೆ ಸಮ್ಮತಿಸುತ್ತದೆಯೆ?
 
ಇಡೀ ಚಿತ್ರದಲ್ಲಿ ಆಪ್ತವಾಗುವುದು ನಾಯಕಿ ವೀರಾ ಪಾತ್ರದಲ್ಲಿ ಆಲಿಯಾ ಭಟ್. ಪ್ರಕತಿಯಷ್ಟೇ ತಿಳಿಯಾಗಿರುವ ಆಕೆಯ ಸೌಂದರ್ಯ ಮತ್ತು ವಿಷಾದ ಇಡೀ ಚಿತ್ರದ ಕೇಂದ್ರ ವಸ್ತು. ಒಂದು ರೀತಿಯಲ್ಲಿ ತುಸು ಮಾನಸಿಕ ವಿಕ್ಷಿಪ್ತೆಯನ್ನು, ಅತಿ ಭಾವುಕತೆಯನ್ನು ಮೈಗೂಡಿಸಿಕೊಂಡ ಪಾತ್ರ ವೀರಾಳದ್ದು. ಬಾಲ್ಯದಲ್ಲಿ ಅವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಅವಳ ಮಾನಸಿಕ ಸ್ಥಿತಿಗೆ ಕಾರಣವನ್ನುಕೊಡುತ್ತದೆ. ಗೂಂಡಾ ಮಹಾಬೀರ್ ಪಾತ್ರದಲ್ಲಿ ರಣ್‌ದೀಪ್ ಹೂಡ ಅಷ್ಟೇ ಪರಿಣಾಮಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎಲ್ಲ ಕೆಲಸವನ್ನೂ ಛಾಯಾಗ್ರಹಣ ಮಾಡುತ್ತದೆ. ಹೈವೇಯ ಇಕ್ಕೆಡೆಗಳ ಸೌಂದರ್ಯವನ್ನು ಪ್ರತಿ ಫ್ರೇಮುಗಳಲ್ಲೂ ಒಂದು ಅನುಭವದಂತೆ ಛಾಪಿಸುತ್ತಾ ಹೋಗುತ್ತದೆ. ಎ. ಆರ್. ರೆಹಮಾನ್ ಅವರ ಹಿನ್ನೆಲೆ ಸಂಗೀತ ಹೈವೇಯುದ್ದಕ್ಕೂ ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ರಸ್ತೆಯನ್ನು, ಹೆದ್ದಾರಿಯನ್ನು ಕೇಂದ್ರವಾಗಿಟ್ಟು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲೇ ರೋಡ್ ಎನ್ನುವ ಚಿತ್ರ ನಿಮಗೆ ನೆನಪಿರಬಹುದು. ಅದೊಂದು ಥ್ರಿಲ್ಲರ್ ಚಿತ್ರವಾಗಿಯಷ್ಟೇ ಇಷ್ಟವಾಗುತ್ತದೆ. ಆದರೆ ಹೈವೇ ಕಲಾತ್ಮಕ ಅನುಭವವೊಂದನ್ನು ನಮ್ಮದಾಗಿಸುತ್ತದೆ. ‘ಜಿಂದಗಿ ನಾ ಮಿಲೇಗಿ ದೋಬಾರ’ ಚಿತ್ರಕ್ಕೂ ಇದನ್ನು ಹೋಲಿಸುವಂತಿಲ್ಲ. ಅದಕ್ಕಿಂತ ಒಂದಿಷ್ಟು ಗಂಭೀರವಾಗಿದೆ. ಅಲ್ಲಿಯ ಪಯಣಕ್ಕೂ ಇಲ್ಲಿಯ ಪಯಣಕ್ಕೂ ಅಜಗಜಾಂತರ. ಒಂದು ಬಾರಿ ಲಾರಿ ಹತ್ತಿ ಹೈವೇ ದರ್ಶನವನ್ನು ಮಾಡುವುದಕ್ಕೆ ಯಾವ ಅಡ್ಡಿಯೂ ಇಲ್ಲ.

No comments:

Post a Comment