Sunday, March 24, 2013

ತಕ್ಕಡಿ ಮತ್ತು ಇತರ ಕತೆಗಳು

ಸಾಯಿ-ಸಾವು
ಒಳಗೆ ಸಾಯಿ ಬಾಬಾ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ.
ಹೊರಗೆ ಅವನ ಭಕ್ತರು ಸಾಯಿಬಾಬಾನ ಫೋಟೋದ ಮುಂದೆ ಕೈ ಮುಗಿದು ಸಾಯಿಬಾಬನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು.

ಪ್ರವಚನ
ಒಬ್ಬ ಸನ್ಯಾಸಿ ಬದುಕಿನ ಕುರಿತಂತೆ ಮಾತನಾಡುತ್ತಿದ್ದರು. ಹೇಗೆ ಬದುಕಬೇಕು ಎನ್ನುವುದನ್ನು ಹೇಳುತ್ತಿದ್ದರು.
ಒಂದು ದಿನ ಸನ್ಯಾಸಿಯ ಊರಿನಲ್ಲಿ ಪ್ರವಚನ.
ಆ ಭಾಷಣವನ್ನು ಸನ್ಯಾಸಿಯ ಹಳೆಯ ಹೆಂಡತಿಯೂ ಆಲಿಸಿದಳು.
ಹತ್ತು ವರ್ಷಗಳ ಹಿಂದೆ ರಾತ್ರೋ ರಾತ್ರಿ ಗಂಡ ಪರಾರಿಯಾದ ಬಳಿಕ, ಆಕೆ ಸುಖವಾಗಿ ಬದುಕುತ್ತಿದ್ದಳು.

ಬದುಕು
ವೈದ್ಯರು ಹೇಳಿದರು ‘‘ನೀವಿನ್ನು ಆರು ತಿಂಗಳು ಬದುಕುತ್ತೀರಿ’’
ರೋಗಿ ಕೇಳಿದ ‘‘ಸಾರ್....ಆರು ತಿಂಗಳಿಗೆ ವೇರಂಟಿ, ಗ್ಯಾರಂಟಿ ಕಾರ್ಡ್ ಏನಾದ್ರೂ ಕೊಡ್ತೀರಾ?’’

ನೆನಪು
ಆ ಬೀದಿಯ ಭಿಕ್ಷುಕ ತೀರಿ ಹೋದ.
ಅನ್ನ ಹಳಸಿದಾಗೆಲ್ಲ
ಆ ಬೀದಿಯ ತಾಯಂದಿರು ಭಿಕ್ಷುಕನನ್ನು ನೆನೆಯುತ್ತಾರೆ.

ಜಾಹೀರಾತು
ಹೀಗೊಂದು ಸರಕಾರಿ ಜಾಹೀರಾತು
‘‘ದೇಶದ್ರೋಹಿಗಳು ಬೇಕಾಗಿದ್ದಾರೆ.
ಈ ದೇಶದ ಜನರನ್ನು ಒಂದು ಮಾಡಿಸುವುದಕ್ಕೋಸ್ಕರ...
ಗಲ್ಲಿಗೇರಲು!’’

ರುಚಿ
ಆ ಭಿಕ್ಷುಕ ಕುರುಡ.
ಆದರೆ ಅನ್ನದ ರುಚಿಯಿಂದ ಅವನು 

ಇದು ಇಂಥವರ ಮನೆಯ ಊಟವೆಂದು ಗುರುತಿಸಬಲ್ಲ.

ತಕ್ಕಡಿ
ನ್ಯಾಯಾಲಯದ ಗೋದಾಮಿನಲ್ಲಿ ಒಂದಿಷ್ಟು ತುಕ್ಕು ಹಿಡಿದ ಗುಜರಿ ಸಾಮಾನುಗಳಿದ್ದವು.
ಗುಜರಿ ಅಂಗಡಿಯವ ಬಂದ.
ನೋಡಿದರೆ ಅಲ್ಲೊಂದು ತುಕ್ಕು ಹಿಡಿದ ಹಳೆಯ ತಕ್ಕಡಿಯಿತ್ತು.
‘‘ಸ್ವಾಮಿ, ಇದನ್ನು ನನಗೆ ಕೊಡಿ. ತೂಕ ಮಾಡುವುದಕ್ಕೆ ಬಳಸುತ್ತೇನೆ....’’ ಎಂದ.
ಗೋದಾಮು ಮೇಲ್ವಿಚಾರಕ ಉತ್ತರಿಸಿದ
‘‘ಅದು ನ್ಯಾಯಾಲಯದ ನ್ಯಾಯದ ತಕ್ಕಡಿ. ಅಳತೆಯನ್ನು ಸರಿಯಾಗಿ ತೋರಿಸುವುದಿಲ್ಲ...’’

3 comments:

  1. ತಕ್ಕಡಿ .. ತುಂಬಾ ಹಿಡಿಸಿತು .. ಸಕಾಲಿಕವೂ ಕೂಡಾ .. ಅರ್ಥವತ್ತಾಗಿದೆ

    ReplyDelete
  2. ಬಶೀರ್, ಎಷ್ಟು ಒಳ್ಳೆಯ ಕಥೆಗಳು!! ಜತೆಗೇ ನಿಮ್ಮ ’ಮಿಂಚು ಸಾಲು’ ಮತ್ತು ’ಬಿತ್ತಿದ ಬೀಜ’ಗಳೂ ಬಲು ಹಿಡಿಸಿದವು.

    ReplyDelete