Wednesday, January 20, 2016

ವಿನಾಯಕ ಭಟ್ಟರ ಪೂಜೆಗೊಂದು ಮಂಗಳಾರತಿ!

 ರೋಹಿತ್ ಅವರ ಸಾವನ್ನು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದು, ಎರಡು ದಿನಗಳ ಹಿಂದೆ ಆರಂಭವಾಗಿರುವ ಪತ್ರಿಕೆಯೊಂದರಲ್ಲಿ ವಿನಾಯಕ ಭಟ್ಟ ಮೂರೂರು ಎಂಬ ‘ಮನುಷ್ಯ’ ಹೇಳಿಕೊಂಡಿದ್ದಾರೆ.(ಅವರ ಈ ಅಂಕಣಕ್ಕೆ ‘ಪ್ರಥಮ ಪೂಜೆ’ ಎಂಬ ಹೆಸರಿರುವುದರಿಂದ, ನನ್ನ ಈ ಬರಹಕ್ಕೆ ಮಂಗಳಾರತಿ ಎಂದು ಬರೆದುಕೊಂಡಿದ್ದೇನೆ) ಅವರ ಬರಹದ ಪ್ರಕಾರ ರೋಹಿತ್ ಸಾವಿಗಾಗಿ ಕಣ್ಣೀರು ಮಿಡಿಯುವವರು ಮತ್ತು ಅದಕ್ಕೆ ಆಕ್ರೋಶ ವ್ಯಕ್ತಪಡಿಸುವವರು ಬೆತ್ತಲಾಗಿದ್ದಾರಂತೆ. ಆ ಮೂಲಕ ತಾವು, ತಮ್ಮ ಬಳಗ ಮೈತುಂಬಾ ಬಟ್ಟೆ ತೊಟ್ಟೆಕೊಂಡಿದ್ದೇವೆ ಎಂದೂ ಘೋಷಿಸಿಕೊಂಡಿದ್ದಾರೆ. ಆದರೆ ಅವರು ಇನ್ನೊಮ್ಮೆ ಕನ್ನಡಿ ನೋಡಿಕೊಂಡು, ಬೆತ್ತಲಾಗಿದ್ದು ಯಾರು ಎನ್ನುವುದನ್ನು ಅರಿತುಕೊಳ್ಳುವುದು ಒಳಿತು. ಅವರು ರೋಹಿತ್ ಆತ್ಮಹತ್ಯೆಯನ್ನು ಸಮರ್ಥಿಸಿಕೊಂಡಿದ್ದು ಹೀಗೆ.

1. ವಿಶ್ವಾದ್ಯಂತ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ದೇಶದಲ್ಲಿ ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪರೀಕ್ಷೆಯ ಕಾರಣದಿಂದ ಪ್ರತಿ ವರ್ಷ 2971 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ಆತ್ಮಹತ್ಯೆಗಳಲ್ಲಿ ಇದೂ ಒಂದು. ದಲಿತ ಎನ್ನುವ ಕಾರಣಕ್ಕಾಗಿ ಇದನ್ನು ರಾಜಕೀಯಗೊಳಿಸುವುದು ತಪ್ಪು ಎನ್ನುವುದು ಅವರ ವಾದ. 

2. ಹೈದರಾಬಾದ್ ವಿವಿ.ಯಲ್ಲಿ ಈ ಹಿಂದೆಯೂ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇವರೆಲ್ಲ ವಿದೇಶಕ್ಕೆ ರಜೆಯ ಮೇಲೆ ಹೋಗಿದ್ದರೆ?
3. ರೋಹಿತ್ ಅವರು ಸಚಿವ ಬಂಡಾರು ಅಥವಾ ಯಾರ ಮೇಲೂ ಆತ್ಮಹತ್ಯಾ ಪತ್ರದಲ್ಲಿ ಆರೋಪ ಹೊರಿಸಿಲ್ಲ. ಹೀಗಿರುವಾಗ, ಆತ ಸಾವಿಗೆ ಸಚಿವರೇ ಹೊಣೆ ಎಂದು ಹೇಳುವುದು ಎಷ್ಟು ಸರಿ?
 4. ವೇಮುಲ ಸಿದ್ಧಾಂತದ, ಸಂಘಟನೆಯ ಚಟಕ್ಕೆ ಬಿದ್ದಿದ್ದ.
 5. ಈತ ಯಾಕೂಬ್ ಮೆಮನ್ ಗಲ್ಲಿಗೇರಿಸುವುದನ್ನು ವಿರೋಧಿಸಿದ್ದ. 

ಮೇಲಿನ ಭಟ್ಟರ ಸಮರ್ಥನೆಗಳಿಗೆ ನಾನು ಉತ್ತರಿಸುವುದು ಒಂದೇ ಕಾರಣಕ್ಕೆ. ವಿನಾಯಕ ಭಟ್ಟರ ಚಿಂತನೆ, ಮತ್ತು ಆ ಚಿಂತನೆಯೊಳಗಿರುವ ವಿಶ ಅವರ ಪ್ರಥಮ ಪೂಜೆ ಅಂಕಣಕ್ಕೆ ಪೂರಕವಾಗಿರುವಂತಹದ್ದು. ಅವರಿಂದ ಇದಕ್ಕಿಂತ ಭಿನ್ನವಾದ ಆಲೋಚನೆಗಳನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಅದನ್ನು ಓದಿದ ಬೆರಳೆಣಿಕೆಯ ಮುಗ್ಧರ ಮನಸ್ಸಿನ ಮೇಲೆ ಅದು ದುಷ್ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈ ಉತ್ತರವನ್ನು ಬರೆದಿದ್ದೇನೆ.


1. ವಿಶ್ವಾದ್ಯಂತ 40 ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ನಿಜ. ಆದರೆ ಅವರೆಲ್ಲ ಆತ್ಮಹತ್ಯೆಗೆ ಮುನ್ನ, ವ್ಯವಸ್ಥೆಯ ವಿರುದ್ಧ ಎರಡು ವಾರಗಳ ಕಾಲ ವಿಶ್ವವಿದ್ಯಾಲಯದ ಅಥವಾ ಇನ್ನೆಲ್ಲೋ ಮುಷ್ಕರ ಹೂಡಿದವರಲ್ಲ. ತನಗೆ ಜಾತಿಯ ಕಾರಣದಿಂದ ವಿಶ್ವವಿದ್ಯಾಲಯದಲ್ಲಿ ಅನ್ಯಾಯವಾಗುತ್ತಿದೆ ಎಂದು ಹಗಲು, ರಾತ್ರಿ ವಿವಿ. ಬಯಲಲ್ಲಿ ಚಳಿ, ಬಿಸಿಲ ನಡುವೆ ನರಳಿರಲಿಲ್ಲ. ಅವರ್ಯಾರೂ, ತಮಗೆ ವಿಷ ಕೊಡಿ, ನೇಣು ಹಗ್ಗ ಕೊಡಿ ಎಂದು ಯಾರಲ್ಲೂ ಪತ್ರದ ಮುಖಾಂತರ ಯಾಚಿಸಿರಲಿಲ್ಲ. ರೋಹಿತ್‌ಗೆ ಅನ್ಯಾಯವಾಗಿರುವುದು ದಲಿತ ಎನ್ನುವ ಕಾರಣಕ್ಕಾಗಿಯೇ ಆಗಿದೆ.

2. ಹೈದರಾಬಾದ್ ವಿವಿ.ಯಲ್ಲಿ ಹಿಂದೆಯೂ 8 ಮಂದಿ ದಲಿತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅವರೆಲ್ಲರೂ ದಲಿತರೇ ಆಗಿದ್ದರು ಎನ್ನುವ ಕಾರಣಕ್ಕಾಗಿ ಇಂದು ದೇಶಾದ್ಯಂತ ಜನರು ಭುಗಿಲೆದ್ದಿದ್ದಾರೆ. ಅದರಲ್ಲಿ ಯಾರೂ ಬ್ರಾಹ್ಮಣರು ಅಥವಾ ಮೇಲ್ಜಾತಿಯ ವಿದ್ಯಾರ್ಥಿಗಳು ಇರಲಿಲ್ಲ. ಅಂದು ಅವರದು ಒಂಟಿ ಧ್ವನಿಯಾಗಿದ್ದು. ಅದನ್ನು ಅವರು ವೈಯಕ್ತಿಕವಾಗಿ ತೆಗೆದುಕೊಂಡು ಸದ್ದುಗದ್ದಲ ಇಲ್ಲದೆ ಮೂರೂರು ಭಟ್ಟರತೆ ಯೋಚಿಸುವ ನೀಚ ಜಗತ್ತಿನಿಂದ ವಿದಾಯ ಹೇಳಿದ್ದರು. ಆದರೆ ಇಲ್ಲಿ ರೋಹಿತ್ ಕಳೆದ ಎರಡು ವರ್ಷಗಳಿಂದ ತನಗಾದ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ. ಅವನಿಗಾದ ಅನ್ಯಾಯ ಇಡೀ ದೇಶಕ್ಕೇ ತಿಳಿದಿತ್ತು. ಮತ್ತು ಇದೀಗ ತನ್ನ ಸಾವಿನ ಮೂಲಕ ಅವನು ಹೈದರಾಬಾದ್ ವಿವಿಯಲ್ಲಿ ನಡೆಯುತ್ತಿರುವ ಜಾತಿ ಅನ್ಯಾಯವನ್ನು ವಿಶ್ವಕ್ಕೆ ಜಾಹೀರು ಪಡಿಸಿದ್ದಾನೆ. ಅವನ ಧ್ವನಿಗೆ ಧ್ವನಿ ಸೇರಿಸುವುದು ಮನುಷ್ಯರೆಲ್ಲರ ಕರ್ತವ್ಯ. ಎಂಟು ಜನ ದಲಿತರು ಜಾತೀಯತೆಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಯಾರೂ ಮಾತನಾಡಿರಲಿಲ್ಲ ಎನ್ನುವುದು ಈಗ ಮಾತನಾಡದೇ ಇರುವುದಕ್ಕೆ ಸಮರ್ಥನೆಯಾಗುತ್ತದೆಯೆ?
3. ವೇಮುಲ ಸಂಘಟನೆ, ಸಿದ್ಧಾಂತದ ಚಟಕ್ಕೆ ಬಿದ್ದಿದ್ದ. ಅದು ಚಟವಲ್ಲ, ದಲಿತರು ಇಂದು ಈ ದೇಶದಲ್ಲಿ ಉಸಿರಾಡುತ್ತಿದ್ದರೆ ಅದು ಅವರ ಸಂಘಟನೆ ಮತ್ತು ಹೋರಾಟದ ಬಲದಿಂದ ಮಾತ್ರ. ಅವನನ್ನು ಈ ದೇಶ ಮನುಷ್ಯನಂತೆ ನೋಡಲು ಕಲಿತದ್ದು, ಅವನು ಹೋರಾಟಕ್ಕೆ ಇಳಿದ ಬಳಿಕ. ಸಂಘಟನೆ ಕಟ್ಟಿದ ಬಳಿಕ. ್ಠಹೋರಾಟ, ಸಂಘಟನೆ ದುರ್ಬಲವಾದಂತೆಯೇ ದಲಿತರ ಮೇಲೆ ದೌರ್ಜನ್ಯ ಹೆಚ್ಚ ತೊಡಗುತ್ತದೆ. 
4. ಈತ ಯಾಕೂಬ್ ಮೆಮನ್ ಗಲ್ಲಿಗೇರಿಸುವುದನ್ನು ವಿರೋಧಿಸಿದ್ದ ಎನ್ನುವುದು ಭಟ್ಟರ ಮುಖ್ಯ ಆರೋಪ. ಆತ ಗಲ್ಲು ಶಿಕ್ಷೆಯನ್ನೇ ವಿರೋಧಿಸುವ ನಿಲುವನ್ನು ಹೊಂದಿದ್ದ. ಯಾಕೆಂದರೆ, ಈ ದೇಶದಲ್ಲಿ ಗಲ್ಲಿಗೇರುವವರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯೇ ಮುಂಚೂಣಿಯಲ್ಲಿದೆ.(ಇದನ್ನು ಸ್ವತಃ ಬಿಜೆಪಿ ನಾಯಕರಾಗಿರುವ ವರುಣ್‌ಗಾಂಧಿ ಬಹಿರಂಗವಾಗಿ ಹೇಳಿದ್ದಾರೆ) ನಾಥೂರಾಂ ಗೋಡ್ಸೆ ಒಬ್ಬನನ್ನು ಬಿಟ್ಟರೆ ಬ್ರಾಹ್ಮಣರು ತಮ್ಮ ತಪ್ಪಿಗಾಗಿ ಗಲ್ಲಿಗೇರಿದ್ದು ಕಡಿಮೆ. ಹಾಗೆಯೇ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿರುವುದನ್ನು ಅವನು ವಿರೋಧಿಸಿದ್ದಲ್ಲ. ನ್ಯಾಯಪ್ರಕ್ರಿಯೆಯಲ್ಲಾದ ಲೋಪವನ್ನು ಅವನು ತನ್ನ ಸಂಗಡಿಗರ ಜೊತೆಗೆ ವಿರೋಧಿಸಿದ್ದ. ಇಷ್ಟಕ್ಕೂ ತಡ ರಾತ್ರಿಯವರೆಗೆ ಮೆಮನ್‌ನನ್ನು ಗಲ್ಲಿಗೇರಿಸಬಾರದು ಎಂದು ನ್ಯಾಯಮೂರ್ತಿಯ ಮನೆಯಲ್ಲಿ ವಾದಿಸಿದ ಪ್ರಶಾಂತ್ ಭೂಷಣ್, ಕಟ್ಜು, ಜೇಠ್ಮಲಾನಿಯಂತಹ ಹಿರಿಯ ನ್ಯಾಯವಾದಿಗಳು, ಹಿರಿಯ ಬ್ರಾಹ್ಮಣರು ಉಗ್ರಗಾಮಿಗಳ ಪರವಾಗಿರುವವರೇನೂ ಅಲ್ಲ. ದಿ ಹಿಂದೂ ಎನ್ನುವ ಖ್ಯಾತ ಪತ್ರಿಕೆ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ನ್ಯಾಯ ಪ್ರಕ್ರಿಯೆಯ ಲೋಪಗಳನ್ನು ಕಟುವಾಗಿ ತನ್ನ ಸಂಪಾದಕೀಯದಲ್ಲಿ ಖಂಡಿಸಿತ್ತು. ಇಷ್ಟಕ್ಕೂ ರೋಹಿತ್‌ನನ್ನು ವಿವಿ.ಯಿಂದ ವಜಾಗೊಳಿಸಿದ್ದು ಆ ಪ್ರತಿಭಟನೆಯ ಕಾರಣಕ್ಕೆ ಅಲ್ಲವೇ ಅಲ್ಲ. ಆತ ಎಬಿವಿಪಿಯ ಕಾರ್ಯಕರ್ತರ ಜೊತೆಗೆ ಸಂಘರ್ಷಕ್ಕಿಳಿದುದನ್ನು ವಿರೋಧಿಸಿ ರೋಹಿತ್‌ನನ್ನು ವಜಾಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಎಬಿವಿಪಿ ನಾಯಕರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅಂದರೆ ಅವರೆಲ್ಲ ಮುಗ್ಧರು ಎನ್ನುವುದು ವಿ.ವಿ. ಅಭಿಪ್ರಾಯವಾಗಿದೆ. 
5. ತನ್ನ ಡೆತ್ ನೋಟ್‌ನಲ್ಲಿ ರೋಹಿತ್ ಯಾರ ವಿರುದ್ಧವೂ ಆರೋಪ ಮಾಡಿಲ್ಲ ಎನ್ನುವುದು ಭಟ್ಟರ ಇನ್ನೊಂದು ಸಂಭ್ರಮವಾಗಿದೆ. ಆದರೆ ರೋಹಿತ್ ಪ್ರಬುದ್ಧ ಹುಡುಗನಾಗಿದ್ದ. ಅವನು ಬರೆದ ನಿಜವಾದ ಡೆತ್ ನೋಟ್, ಡಿಸೆಂಬರ್ 18ರಂದು ವಿವಿ. ಕುಲಪತಿಗೆ ಬರೆದಿರುವ ಪತ್ರ. ಅದರಲ್ಲಿ ಅವನು ಡೆತ್ ನೋಟ್ ಬರೆದಿರುವುದಷ್ಟೇ, ತನ್ನ ಆತ್ಮಹತ್ಯೆಯನ್ನು ತಪ್ಪಿಸಲು ಅವರಿಗೆ ಸಾಕಷ್ಟು ಕಾಲಾವಕಾಶವನ್ನೂ ನೀಡಿದ್ದ. ಹಾಸ್ಟೆಲ್‌ಗಳಲ್ಲಿರುವ ಎಲ್ಲ ದಲಿತ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಸಂದರ್ಭದಲ್ಲೇ ವಿಷವನ್ನೂ, ನೇಣು ಹಗ್ಗಗಳನ್ನು ಕೊಡಿ ಎಂದು ಅವನು ವಿನಯ ಪೂರ್ವಕವಾಗಿ ಕೇಳಿಕೊಂಡಿದ್ದ. ಅವನು ಆತ್ಮಹತ್ಯೆ ಸೂಚನೆಯನ್ನು ಆ ಪತ್ರದಲ್ಲೇ ನೀಡಿದ್ದ. ಸಾಯುವ ಸಂದರ್ಭದಲ್ಲಿ, ಅವನು ಎಲ್ಲ ವೈಷಮ್ಯಗಳನ್ನು ಮರೆತು, ಈ ಸಷ್ಟಿಯ ಘನತೆಯನ್ನು ಒಪ್ಪಿಕೊಂಡು ಅವನು ಎಲ್ಲರಿಂದ ವಿದಾಯ ಹೇಳಿದ್ದಾನೆ. ಸಾವಿನ ಸಂದರ್ಭದಲ್ಲಿ ಅವನು ಎಲ್ಲದರಿಂದ ದೂರ ನಿಂತಿದ್ದ. ಶೂನ್ಯ ಮನಸ್ಕನಾಗಿದ್ದ.
 6. ರಾಜಕಾರಣಿಗಳು ರೋಹಿತ್ ಸಾವನ್ನು ಸುದ್ದಿಯಾಗಿಸುವುದು ಭಟ್ಟರಿಗೆ ಅಸಮಾಧಾನ ತಂದಿದೆ. ಅಂದರೆ, ಈ ಕುರಿತಂತೆ ರಾಜಕಾರಣಿಗಳು ಮೌನವಾಗಿರಬೇಕು. ಇದನ್ನು ರಾಜಕೀಯ ವಿವಾದವನ್ನಾಗಿಸಬಾರದು. ಯಾರೂ ಆತನ ಮನೆಗೆ ಭೇಟಿ ನೀಡಬಾರದು. ಸಾರ್ವಜನಿಕವಾಗಿ ಪ್ರತಿಭಟನೆ ಮಾಡಬಾರದು? ಹಾಗಾದರೆ ವಿರೋಧ ಪಕ್ಷಗಳು ಎನ್ನುವುದು ಯಾಕಿರಬೇಕು? ಯಾರು ಮಾತನಾಡಬಾರದು ಎನ್ನುವುದಾದರೆ ರೋಹಿತ್ ವೇಮುಲಾಗೆ ನ್ಯಾಯ ಆಕಾಶದಿಂದ ತನ್ನಷ್ಟಕ್ಕೇ ಇಳಿದು ಬರುತ್ತದೆಯೆ? ಬದುಕಿದ್ದಾಗಲೇ ಆತನ ಧ್ವನಿಗೆ ಧ್ವನಿ ಸೇರಿಸದ ವ್ಯವಸ್ಥೆ, ಆತನ ಶಾಶ್ವದ ಮೌನಕ್ಕೆ ಸ್ಪಂದಿಸುತ್ತದೆ ಎಂದು ಭಾವಿಸಬೇಕೇ?
7. ಪರೀಕ್ಷೆಗಳ ಒತ್ತಡದಿಂದ ಸಾವಿರಾರು ವಿದ್ಯಾರ್ಥಿಗಳು ಸಾಯುತ್ತಾರೆ ಎನ್ನುವ ವಿನಾಯಕ ಭಟ್ಟ ಮತ್ತು ಅವನ ಅನುಯಾಯಿಗಳು ತಿಳಿದುಕೊಳ್ಳಬೇಕಾದ ಕೆಂಡದಂತಹ ಇನ್ನೊಂದು ಸತ್ಯವಿದೆ. ಅದೆಂದರೆ ಅತ್ಯಂತ ಪ್ರತಿಭಾವಂತನಾದ ರೋಹಿತ್ ವೇಮುಲ ಯಾವುದೇ ಮೀಸಲಾತಿಯ ಬಲದಿಂದ ವಿವಿ.ಯಲ್ಲಿ ಸ್ಥಾನ ಪಡೆದಿರಲಿಲ್ಲ. ಆತ ಸಾಮಾನ್ಯ ವರ್ಗದಿಂದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ.

No comments:

Post a Comment