Saturday, May 4, 2013

ಡಾಕ್ಟರ್ ಮತ್ತು ಇತರ ಕತೆಗಳು

 ಗೆಳೆಯ
ಅವನು ನನ್ನ ಆತ್ಮೀಯ ಗೆಳೆಯ.
ತನ್ನ ಇನ್ನೊಬ್ಬ ಗೆಳೆಯನಿಗೆ ನನ್ನನ್ನು ಪರಿಚಯಿಸಿದ ‘‘ಇವನು ನನ್ನ ಆತ್ಮೀಯ ಗೆಳೆಯ. ಮುಸ್ಲಿಮನಾದರೂ ಎಲ್ಲ ಮುಸ್ಲಿಮರಂತಲ್ಲ. ತುಂಬಾ ಒಳ್ಳೆಯವನು’’

ಜಪ್ತಿ
ಬ್ಯಾಂಕ್‌ನಿಂದ ರೈತನಿಗೆ ಜಪ್ತಿ ನೋಟಿಸ್ ಬಂತು.
ಅಲ್ಲಿ ಜಪ್ತಿ ಮಾಡುವುದಕ್ಕೆ ರೈತನ ಮಾನ ಮರ್ಯಾದೆ, ಗೌರವ ಬಿಟ್ಟು ಬೇರೇನೂ ಇರಲಿಲ್ಲ.
ಬ್ಯಾಂಕ್‌ನಿಂದ ಬಂದವರು ಅದನ್ನೇ ಜಪ್ತಿ ಮಾಡಿದರು.
ರೈತ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಂಡ.

ಡಾಕ್ಟರ್
ಪ್ರತಿ ದಿನ ಆ ತರುಣ ಡಾಕ್ಟರ್‌ನ್ನು ನೋಡಲು ಅವಳು ಬರುತ್ತಿದ್ದಳು.
ಡಾಕ್ಟರ್ ಎದೆಗೆ ಸ್ಕೆತೋಸ್ಕೋಪ್ ಇಟ್ಟು, ನಿಮಗೆ ಏನೂ ಆಗಿಲ್ಲ ಎಂದು ಹೇಳುತ್ತಿದ್ದರು.
ಒಂದು ದಿನ ಡಾಕ್ಟರ್ ಸ್ಕೆತೋಸ್ಕೋಪ್‌ನ್ನು ಅವಳ ಎದೆಗೆ ಒತ್ತಿ ಅವಳನ್ನು ನೋಡಿದರು.
ಸ್ಕೆತೋಸ್ಕೋಪ್ ಹೇಳದ್ದನ್ನು ಅವಳ ಕಣ್ಣಿನ ಮೂಲಕ ಅವರು ಕೇಳಿಸಿಕೊಂಡರು.
‘‘ಡಾಕ್ಟರ್, ಏನಾದರೂ ಗೊತ್ತಾಯಿತಾ?’’
‘‘ಗೊತ್ತಾಯಿತು...ಹೃದಯದ ಸಮಸ್ಯೆ ಕಣಮ್ಮಾ...’’ ಎಂದು ನಕ್ಕರು.

ಆಸೆ
ಚುನಾವಣೆ. ಹೇಳುತ್ತಿದ್ದ ‘‘ಊರಿನ ಸೇವೆ ಮಾಡಬೇಕು ಎನ್ನೋದು ನನ್ನ ಆಸೆ. ನನ್ನನ್ನು ಗೆಲ್ಲಿಸಿ’’
ಅವನನ್ನು ಸೋಲಿಸಿ ಅವನ ಆಸೆಯನ್ನು ಈಡೇರಿಸಿದರು.

ಕಕ್ಕಸು

ಮನೆಗೆ ಬಂದರೆ ಕಕ್ಕಸು ಬ್ಲಾಕ್ ಆಗಿತ್ತು.
ತಕ್ಷಣ ಅವನಿಗೆ ಊರ ದಲಿತರ ನೆನಪಾಯಿತು.
ಬೆಳ್ಳಂಬೆಳಗ್ಗೆ ಎದ್ದು ದಲಿತರ ಕೇರಿಗೆ ಹೊರಟ. ದಲಿತನೊಬ್ಬನಿಗೆ ಅಡ್ವಾನ್ಸ್ ಕೊಟ್ಟು ಮರಳಿ ಬರುವ ದಾರಿಯಲ್ಲಿ ಯಾರೋ ಮಾಡಿದ ಹೇಲನ್ನು ತುಳಿದ. ಅಷ್ಟಕ್ಕೇ ಅವನು ಬಸಬಸನೆ ವಾಂತಿ ಮಾಡಿಕೊಳ್ಳ ತೊಡಗಿದ.

ಸೇಡು
ಮತ ಹಾಕುತ್ತೇನೆಂದು ರಾಜಕಾರಣಿಯಿಂದ ನೂರು ರೂ. ಇಸ್ಕೊಂಡ ರೈತ. ಮತ ಹಾಕದೆ ಮನೆಯಲ್ಲೇ ಉಳಿದುಕೊಂಡ.
ಭರವಸೆಕೊಟ್ಟು ಮೋಸ ಮಾಡಿದ ರಾಜಕಾರಣಿಗಳಿಗೆ ಪ್ರತಿ ಮೋಸ ಮಾಡಿದ ತೃಪ್ತಿ ಅವನದು.

ಕಾಯಿಲೆ
ಪುಟ್ಟೂರು ಎನ್ನುವುದೊಂದು ಊರು.
ಆ ಊರಿನ ಸರಕಾರಿ ಆಸ್ಪತ್ರೆಗೆ ತರುಣಿ ವೈದ್ಯೆಯೊಬ್ಬಳು ಆಗಮಿಸಿದರು.
ಅಂದಿನಿಂದ ಊರಿನ ಯುವಕರಿಗೆಲ್ಲ ನಿಗೂಢ ಜ್ವರ ಕಾಡತೊಡಗಿದವು.
ಪತ್ರಿಕೆಗಳಲ್ಲಿ ವರದಿ ಬಂದವು. ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.
ವಿಧಾನಸಭೆಯಲ್ಲಿ ಚರ್ಚೆಯಾಯಿತು. ಆ ಜ್ವರವನ್ನು ಪುಟ್ಟೂರು ಜ್ವರ ಎಂದೇ ಕರೆಯಲಾಯಿತು.
ಸರಿ, ತನಿಖೆಗೆ ತಜ್ಞರನ್ನು ಪುಟ್ಟೂರಿಗೆ ಕಳುಹಿಸಲಾಯಿತು.
ಒಂದು ತಿಂಗಳ ತನಿಖೆಯ ಬಳಿಕ ತಜ್ಞರು ‘‘ಸರಕಾರಿ ವೈದ್ಯೆಯನ್ನು ಬೇರೆ ಊರಿಗೆ ವರ್ಗಾವಣೆ ಮಾಡಲು’’ ಶಿಫಾರಸು ನೀಡಿದರು.

1 comment:

  1. These stories are sharp and witty. Have become fan instantaneously. Keep posting.

    ReplyDelete